ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಗೆ 20ಕ್ಕೂ ಹೆಚ್ಚು ಪ್ರಶ್ನೆಗಳನ್ನಾಕಿದ ಮಾಜಿ ಸಿಎಂ ಸಿದ್ಧರಾಮಯ್ಯ: ಉತ್ತರಿಸುವಂತೆ ಆಗ್ರಹ.

kannada t-shirts

ಬೆಂಗಳೂರು,ಫೆಬ್ರವರಿ,6,2023(www.justkannada.in): ರಾಜ್ಯಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ 21 ಪ್ರಶ್ನೆಗಳನ್ನಾಕಿ ಅದಕ್ಕೆ ತಮ್ಮ ಭಾಷಣದಲ್ಲಿ ಉತ್ತರಿಸುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ಧರಾಮಯ್ಯ, ಕರ್ನಾಟಕಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರಮೋದಿಯವರನ್ನು ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಚುನಾವಣೆಗೆ ಮೊದಲು ಕರ್ನಾಟಕವೆಂಬುದೊಂದು ರಾಜ್ಯವಿದೆ ಎಂಬುದನ್ನೆ ಮರೆತುಬಿಟ್ಟಿದ್ದ ತಾವು ಮತ್ತು ತಮ್ಮ ಗೃಹ ಸಚಿವರಿಗೆ ಈಗ ಓಟು ಬೇಕು. ಆದ್ದರಿಂದ ಪದೇ ಪದೇ ಕರ್ನಾಟಕ  ನೆನಪಾಗುತ್ತಿದೆ. ಕನಾಟಕದಲ್ಲಿ ನೀವು ಸಾಲು ಸಾಲು ಉದ್ಘಾಟಿಸುತ್ತಿರುವ ಬಹುಪಾಲು  ಕಾಮಗಾರಿಗಳು/ ಯೋಜನೆಗಳು  ಕಾಂಗ್ರೆಸ್ ಸರ್ಕಾರದವು ಎಂಬುದನ್ನು ನೆನಪಿಸಿಕೊಂಡು ಉದ್ಘಾಟನೆ ಮಾಡಿ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತೇನೆ. ಹಾಗೆ ಸ್ಮರಣೆ ಮಾಡಿಕೊಂಡು ಕಾಮಗಾರಿ ಉದ್ಘಾಟಿಸುವುದು ನೈತಿಕ ರಾಜಕಾರಣದ ಮಾದರಿ ಎಂಬುದನ್ನು ನಿಮಗೆ ನೆನಪಿಸಿ ನೀವು ಈ ಸಂದರ್ಭದಲ್ಲಿ ಕನ್ನಡಿಗರಿಗೆ ಉತ್ತರಿಸಬೇಕಾದ ಕೆಲವು ಪ್ರಶ್ನೆಗಳಿವೆ. ಅವುಗಳಿಗೆ ಉತ್ತರಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ತಮಗೆ ತಿಳಿದಿರುವಂತೆ ಬಡಜನರ ಹಸಿದ ಹೊಟ್ಟೆಯನ್ನು ತಣಿಸಲು ಯುಪಿಎ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೆ ತಂದು 80 ಕೋಟಿ ಜನರಿಗೆ ಆಹಾರಧಾನ್ಯ ವಿತರಿಸಿತ್ತು. ಆದರೆ ನಿಮ್ಮ ಸರ್ಕಾರ  ಇತ್ತೀಚೆಗಷ್ಟೇ ಮಂಡಿಸಿದ ಬಜೆಟ್ ನಲ್ಲಿ ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿತಗೊಳಿಸಿ ಬಡವರ ಹೊಟ್ಟೆಗೆ ಕಲ್ಲು ಹಾಕಿದೆ, ಯಾಕೆ?

ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇನೆ ಎಂದು ರೈತರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರಿ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ರೂ.50,121 ಕೋಟಿಯಷ್ಟು ಕಡಿಮೆ ಮಾಡಿದ್ದೀರಿ. ರೈತರ ಬೆಳೆಗಳ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನೀಡುವ ಮೂಲಕ ಮಾರುಕಟ್ಟೆ ಮಧ್ಯಪ್ರವೇಶಿಸಲು ನೀಡಲಾಗುತ್ತಿದ್ದ ಅನುದಾನವನ್ನು ರೂ.1500 ಕೋಟಿಗಳಿಂದ ರೂ. ಒಂದು ಲಕ್ಷಕ್ಕೆ ಇಳಿಸಿದ್ದೀರಿ, ಬೆಲೆ ಕುಸಿತ ಮತ್ತು ಬೀಜ-ಗೊಬ್ಬರದ ಬೆಲೆ ಏರಿಕೆಯಿಂದಾಗಿ ಹತ್ತಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಹತ್ತಿ ನಿಗಮದ ಬೆಂಬಲ ಬೆಲೆಯ ಅನುದಾನವನ್ನು ರೂ.782 ಕೋಟಿಯಿಂದ ರೂ. 1 ಲಕ್ಷಕ್ಕೆ ಇಳಿಸಿದ್ದೀರಿ.ರೈತರಿಗೆ ನೆರವಾಗುವ ಯೋಜನೆಗಳನ್ನೇ ಸ್ಥಗಿತಗೊಳಿಸಿ ರೈತರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದೀರಾ?

ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳ ಪಾಲಿನ ಸಂಜೀವಿನಿ ನರೇಗಾ ಯೋಜನೆಯನ್ನು ಜಾರಿಗೆ ತಂದಿರುವುದು ಯುಪಿಎ ಸರ್ಕಾರ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ನರೇಗಾಕ್ಕೆ ನೀಡಲಾಗುವ ಸಹಾಯಧನವನ್ನು ಶೇಕಡಾ 21.66ರಷ್ಟು (ರೂ.60,000 ಕೋಟಿ) ಕಡಿಮೆ ಮಾಡಲಾಗಿದೆ. ನಿಮ್ಮ ಆಡಳಿತಾವಧಿಯಲ್ಲಿ ನಿರುದ್ಯೋಗದ ಪ್ರಮಾಣದ ಹೆಚ್ಚಳ ಹೊಸ ದಾಖಲೆ ನಿರ್ಮಿಸಿದೆ. ಈಗ ಗ್ರಾಮೀಣ ಜನತೆಯಿಂದಲೂ ಉದ್ಯೋಗವನ್ನು ಕಸಿದುಕೊಂಡು ಏನನ್ನು ಸಾಧಿಸಲು ಹೊರಟಿದ್ದೀರಿ?

ಉಚಿತ ಎಲ್ ಪಿಜಿ ಸಿಲಿಂಡರ್ ಎಂಬ ಪೊಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರಿ, ಕಳೆದ ಎಂಟು ವರ್ಷಗಳಿಂದ ಎಲ್ ಪಿ ಜಿ ಸಿಲಿಂಡರ್ ಬೆಲೆ ದುಪ್ಪಟ್ಟಾಗಿದೆ. ಹಳ್ಳಿಯಬಡವರು ಮತ್ತೆ ಉರುವರಲು ಹಾಕಿ ಒಲೆ ಉರಿಸಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿಯೂ ಎಲ್ ಪಿಜಿ ಮೇಲಿನ ಸಬ್ಸಿಡಿಯನ್ನು ಶೇಕಡಾ 75ರಷ್ಟು (ರೂ.2,257 ಕೋಟಿ) ಕಡಿಮೆ ಮಾಡಲಾಗಿದೆ. ಅಸಹಾಯಕ ಬಡವರ ಮೆಲೆ ಯಾಕೆ ನಿಮಗಿಷ್ಟು ದ್ವೇಷ?.

ನಿಮ್ಮ ಖಾಸಾ ಸ್ನೇಹಿತರಾದ ಗೌತಮ್ ಅದಾನಿ ಉದ್ಯಮ ಸಾಮ್ರಾಜ್ಯದ ಕಳ್ಳಾಟಗಳನ್ನು ಹಿಂಡನ್ ಬರ್ಗ್ ವರದಿ ಬೆತ್ತಲೆ ಮಾಡಿದೆ. ಈ ಕಳ್ಳಾಟದಿಂದ ಭಾರತದ ಆರ್ಥಿಕತೆ ಕುಸಿದುಹೋಗುವ ಅಪಾಯ ಎದುರಿಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಸುದ್ದಿಯಾಗಿ ಭಾರತದ ಮಾನ ಹರಜಾಗುತ್ತಿದೆ, ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರು, ಎಲ್ ಐಸಿಯಲ್ಲಿ ಪಾಲಿಸಿ ಖರೀದಿಸಿದವರು ಆತಂಕದಲ್ಲಿದ್ದಾರೆ. ವಿರೋಧ ಪಕ್ಷಗಳ ನಾಯಕರು ಕೂತರೂ ನಿಂತರೂ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಗಟ್ಟುತ್ತಿರುವ ಕೇಂದ್ರ ಸರ್ಕಾರ ಉದ್ಯಮಿ ಅದಾನಿ ಬಾನಗಡಿ ಬಗ್ಗೆ ತನಿಖೆ ಮಾಡಲು ಹಿಂಜರಿಯುತ್ತಿರುವುದೇಕೆ?

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ವೆಚ್ಚದ ಶೇಕಡಾ 50ರಷ್ಟನ್ನು ಕೇಂದ್ರ ಸರ್ಕಾರವೇ ಈ ಬಜೆಟ್ ನಲ್ಲಿ ಕೊಟ್ಟಿರುವುದು ಕೇವಲ ರೂ.2300 ಕೋಟಿ. ಯೋಜನೆ ಮುಗಿಯುವುದು 2050ಕ್ಕೋ? ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ಬೆಂಗಳೂರು ಮೆಟ್ರೋ ಯೋಜನೆಗಳನ್ನು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ನರೇಂದ್ರಮೋದಿಯವರಿಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ?

ನೀವು ಇಂದು ಇಂಡಿಯಾ ಎನರ್ಜಿ ಸಪ್ತಾಹದಲ್ಲಿ ಭಾಗವಹಿಸುತ್ತಿದ್ದೀರಿ. ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆ ಬಗ್ಗೆಯೂ ಮಾತನಾಡಲಿದ್ದೀರಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 2013 ರಲ್ಲಿ ಸೋಲಾರ್ ಮತ್ತು ವಿಂಡ್ ಪವರ್  ಎರಡೂ ಸೇರಿ ಸುಮಾರು 4500 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿತ್ತು. ಇದನ್ನು ನಮ್ಮ ಸರ್ಕಾರದ ಅಂತ್ಯದ ವೇಳೆಗೆ 13000 ಮೆಗಾವ್ಯಾಟ್‍ಗೆ ಹೆಚ್ಚಿಸಿದ್ದೆವು. ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆ 14 ಸಾವಿರ ಮೆಗಾವ್ಯಾಟ್ ದಾಟಿತ್ತು. ಎಲ್ಲ ಮೂಲಗಳಿಂದ 2014 ರಲ್ಲಿ 14825 ಮೆಗಾವ್ಯಾಟ್ ಉತ್ಪಾದನೆ ಇತ್ತು. 2018 ರ ವೇಳೆಗೆ 28000 ಮೆಗಾವ್ಯಾಟ್ ಆಗಿತ್ತು. ಹಾಗಿದ್ದರೆ ಇದರ ಕ್ರೆಡಿಟ್ ಯಾರಿಗೆ ಸಲ್ಲಬೇಕು?

ಕರ್ನಾಟಕದಲ್ಲಿ ವಿದ್ಯುತ್ ಬಳಕೆಯಾಗುತ್ತಿರುವುದು 11-12 ಸಾವಿರ ಮೆಗಾವ್ಯಾಟ್ ಮಾತ್ರ. ಈ ವಿದ್ಯುತ್ತನ್ನು ಖರೀದಿಸಿ ಉತ್ತರದ ರಾಜ್ಯಗಳಲ್ಲಿ ಬಳಸಬಹುದಲ್ಲ? ಅದನ್ನು ಬಿಟ್ಟು ಹಿಮಾಲಯಕ್ಕೆ ಹೋಗಿ ಜೆಸಿಬಿ, ಹಿಟಾಚಿಗಳನ್ನು ಮತ್ತು ಡೈನಾಮೈಟುಗಳನ್ನು ಬಳಸಿ ಭಾರತದ ಪವಿತ್ರವಾದ ಪರ್ವತಗಳನ್ನು ನಾಶ ಮಾಡಲು ಹೊರಟಿದ್ದೀರಿ? ಗಂಗೆ, ಯಮುನೆ, ಬಾಗೀರಥಿ, ಸರಸ್ವತಿ, ಗೋಮತಿ, ಸಿಂಧೂ ಎಂಬ ನಮ್ಮ ಪವಿತ್ರ ನದಿಗಳ ಮೇಲೆ ನೀವು ಮಾಡುತ್ತಿರುವುದು ಅತ್ಯಾಚಾರವೆನ್ನಿಸುತ್ತಿಲ್ಲವೆ? ನಮ್ಮ ಶೂದ್ರ ನಾಯಕ ದೇವರಾದ ಶಿವನ ಮೇಲೆ, ಶಿವನ ಹೆಸರಿನ ಜಾಗಗಳ ಮೇಲೆ ನೀವು ಮಾಡುತ್ತಿರುವ ದಾಳಿ, ಅತ್ಯಾಚಾರ, ಅನಾಚಾರಗಳನ್ನು ಕೂಡಲೆ ನಿಲ್ಲಿಸಬೇಕೆಂದು ಆಗ್ರಹಿಸುತ್ತೇನೆ. ನಿಮಗೆ ಬೇಕಾದಷ್ಟು ವಿದ್ಯುತ್ತನ್ನು  ಉತ್ಪಾದಿಸಿಕೊಡಲು  ನಮ್ಮ ಕಾಂಗ್ರೆಸ್ ಸರ್ಕಾರ ಮುನ್ನುಡಿಯನ್ನು ಬರೆದಿದೆ. ಹೇಗಿದ್ದರೂ ನಮ್ಮ ರೈತರ ಎದೆಯ ಮೇಲೆ ಬರೆ ಎಳೆದ ಹಾಗೆ ವಿದ್ಯುತ್ ಲೈನುಗಳನ್ನು ದೇಶದ ಉದ್ದಗಲಕ್ಕೂ ಎಳೆದಿದ್ದೀರಿ. ಅದರ ಮೂಲಕ ನಾವು ವಿದ್ಯುತ್ ಸರಬರಾಜು ಮಾಡುತ್ತೇವೆ.

ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಬ್ಯಾಂಕುಗಳಿಂದ  ಲಕ್ಷಾಂತರ ಕೋಟಿ ರೂಪಾಯಿ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋಗಲು 28 ಜನಕ್ಕೂ ಹೆಚ್ಚಿನ ದಗಾಕೋರ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಆ 28 ಜನರಲ್ಲಿ 27 ಜನ ಗುಜರಾತಿನವರೆ  ಇದ್ದಾರೆ, ಇದು ಕಾಕತಾಳಿಯವೊ ಇಲ್ಲ ಉದ್ದೇಶ ಪೂರ್ವಕವಾದ ದೇಶದ್ರೋಹವೊ?

ನಿಮ್ಮ ರಾಜ್ಯದ ವ್ಯಾಪಾರಿಗಳಿಗೆ ಸಾಲಕೊಟ್ಟು ಅವರು ದೇಶದಿಂದ ಓಡಿಹೋಗಲು ಅವಕಾಶ ಮಾಡಿಕೊಟ್ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಶನಲ್ ಬ್ಯಾಂಕು, ಬರೋಡಾ ಬ್ಯಾಂಕು ಮುಂತಾದ ಹಣಕಾಸು ಸಂಸ್ಥೆಗಳು ದಿವಾಳಿಯಾಗುವಂತೆ ಮಾಡಿದಿರಿ.  ಅವುಗಳನ್ನು ಸರಿಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮೂಲದ ಸಂಪದ್ಭರಿತವಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯಾ ಬ್ಯಾಂಕು, ಕಾರ್ಪೊರೇಷನ್ ಬ್ಯಾಂಕು ಮುಂತಾದವುಗಳಲ್ಲಿದ್ದ ಲಕ್ಷಾಂತರ ಕೋಟಿ ಸಂಪತ್ತನ್ನು ದೋಚಿಕೊಂಡು ದಿವಾಳಿಯಾಗುತ್ತಿದ್ದ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದು ಸರಿಯೆ?

 

ಅದಾನಿ ಎಂಬ ದೇಶದ್ರೋಹಿ ವ್ಯಾಪಾರಿಗೆ ನೀವೆ ಸ್ವತಃ ಸಾಲ ಕೊಡಿ  ಎಂದು ಬ್ಯಾಂಕುಗಳಿಗೆ ಪತ್ರ ಬರೆದಿದ್ದೀರೆಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಇದು ನಿಜವೆ? ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಮಾಡಲು 7500 ಕೋಟಿ ಕೊಡಿ ಎಂದು ಎಸ್‍ಬಿಐ ಗೆ ಬರೆದಿರುವುದು ನಿಜ ತಾನೆ?

ಮೋದಿ ಸರ್ಕಾರದ ಅವಧಿಯಲ್ಲಿ ಜಗತ್ತಿನ ಯಾವ ದೇಶದಲ್ಲೂ ಇಲ್ಲದ ಪ್ರಮಾಣದಲ್ಲಿ ಕಾರ್ಪೊರೇಟ್ ಕರಪ್ಷನ್ ನಡೆಯುತ್ತಿದೆ ಎಂದು ನಾನು ಹೇಳುತ್ತಲೆ ಬಂದಿದ್ದೇನೆ, ನನ್ನ ಮಾತುಗಳು ನಿಮ್ಮ ಕಿವಿಗೂ ಬಿದ್ದಿರಬೇಕು. ಆದರೂ ನೀವು ಅದನ್ನು ತಡೆಯಲು ಯಾವ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ. ನಿಮ್ಮ ಸರ್ವಾಧಿಕಾರಿ ಧೋರಣೆಯಿಂದಾಗಿ ಭಾರತವು ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ. ಅದಾನಿ ದೇಶದ ಗೌರವನ್ನು ಬೀದಿಗೆ ಎಳೆದು ತಂದಿದ್ದಾನೆ. ಈಗ ಅದಾನಿ ಎಂದರೆ ಭಾರತ, ಭಾರತ ಎಂದರೆ ಅದಾನಿ ಎಂದು ಹೇಳುವ ಮಟ್ಟಕ್ಕೆ ಬರಲಾಗಿದೆ, ಇದು ನಾಚಿಕೆಗೇಡಿನ ಸಂಗತಿಯಲ್ಲವೆ?

ಭಾರತದ ಬ್ಯಾಂಕುಗಳು, ಭಾರತದ ಪ್ರತಿಷ್ಠಿತವಾದ ಬಡವರು ಮತ್ತು ಮಧ್ಯಮ ವರ್ಗದ ಜನರ ಆಶಾಕಿರಣವಾದ ಎಲ್‍ಐಸಿ ಸೇರಿದಂತೆ ಎಲ್ಲ ಹಣಕಾಸು ಸಂಸ್ಥೆಗಳು ಸುಮಾರು 2.5 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ಅದಾನಿಗೆ ಕೊಟ್ಟಿವೆ. ಈಗ ಆತನ ದುಷ್ಕøತ್ಯದಿಂದಾಗಿ ಈ ಹಣಕಾಸು ಸಂಸ್ಥೆಗಳು ದಿವಾಳಿಯಾಗುವ ಹಂತಕ್ಕೆ ಬರುತ್ತಿವೆ. ಇವು ದಿವಾಳಿಯಾದರೆ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನ್ಯಾಯವಾಗುತ್ತದೆ. ಇದರ ಹೊಣೆಯನ್ನು ನೀವು ಮತ್ತು ನಿಮ್ಮ ಸರ್ಕಾರವೆ ಹೊರಲೇಬೇಕಲ್ಲವೆ?

ಅದಾನಿಯ 720000000000 [72 ಸಾವಿರ] ಕೋಟಿಗೂ ಹೆಚ್ಚಿನ ಸಾಲವನ್ನು 2017ರ ವೇಳೆಗೆ ಮನ್ನಾ ಮಾಡಲಾಗಿದೆ. ಇದು ಅನ್ಯಾಯದ ಕೃತ್ಯವೆಂದು ನಿಮಗೆ ಅನ್ನಿಸುತ್ತಿಲ್ಲವೆ?

ಮನಮೋಹನಸಿಂಗರು  ಕೋಟ್ಯಾಂತರ ರೈತರ 70 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲವನ್ನು ಮನ್ನಾ ಮಾಡಿದಾಗ ನಿಮ್ಮನ್ನೂ ಸೇರಿದಂತೆ ನಿಮ್ಮ ಬಿಜೆಪಿ ಪಕ್ಷದವರು ಅಂದಿನ ಯುಪಿಎ ಸರ್ಕಾರದ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದು ತಪ್ಪು ಎಂದು ಈಗಲಾದರೂ ಅನ್ನಿಸುತ್ತಿದೆಯೆ? ಅಥವಾ ಆತ್ಮಸಾಕ್ಷಿಯೆಂಬುದು ನಿಮ್ಮ ಪಕ್ಷದ ಜನರಿಗೆ ಸಂಪೂರ್ಣವಾಗಿ ಸತ್ತು ಹೋಗಿದೆಯೆ?

ದೇಶದ್ರೋಹಿ ವ್ಯಾಪಾರಿ ಅದಾನಿಯ ವಿಮಾನಗಳನ್ನು ಬಳಸಿ ನೀವು ಚುನಾವಣಾ ರ್ಯಾಲಿಗಳನ್ನು ಮಾಡಿದಿರಿ, ಆ ಪಾಪದ ಕೊಳೆಯನ್ನು ಈಗ ಯಾವ ಗಂಗೆಯಲ್ಲಿ ತೊಳೆದುಕೊಂಡು ಪುನೀತರಾಗುತ್ತೀರಿ?

ಅದಾನಿಗೆ ದೇಶದ ಬಹುಪಾಲು ಬಂದರುಗಳು, ವಿಮಾನ ನಿಲ್ದಾಣಗಳು, ಬಂದರುಗಳ ಹತ್ತಿರದ ಎಸ್‍ಇಜೆಡ್‍ಗಳನ್ನು ನೀಡಿದ್ದೀರಿ, ಆದರೆ ಗುಜರಾತಿನ ಮುಂದ್ರಾ ಬಂದರಿನಲ್ಲಿ ಲಕ್ಷ ಲಕ್ಷ ಕೋಟಿ ರೂಪಾಯಿ ಮೌಲ್ಯದ ಗಾಂಜಾ ಸೇರಿದಂತೆ ವಿದೇಶಿ ಡ್ರಗ್ಸ್ ಸಿಗುತ್ತಿದೆ. ಇಂದು ದೇಶದ ಯುವಜನರು ಮಾದಕ ವ್ಯಸನಗಳಿಗೆ ಬಲಿಯಾಗಿ ಲಕ್ಷಾಂತರ ಕುಟುಂಬಗಳ ಬದುಕು ಕತ್ತಲೆಯತ್ತ ಸಾಗುತ್ತಿದೆ, ತಂದೆ ತಾಯಿಗಳು ತಲೆಯ ಮೇಲೆ ಕೈಹೊತ್ತು ಕೂರುವಂತಾಗಿದೆ ಇದರ ಪಾಪವನ್ನು ನೀವು ಹೊರುತ್ತೀರೊ ಇಲ್ಲ ಅದಾನಿಯ ಮೇಲೆ ಹೊರಿಸುತ್ತೀರೊ?

ಡ್ರಗ್ಸ್ ರಾಜಧಾನಿ ಅಫ್ಘನಿಸ್ತಾನವೆಂದು ಕೆಲವು ಮಾಧ್ಯಮಗಳು ಹೇಳುತ್ತಿವೆ. ಆದರೆ ಅಲ್ಲಿನ ತಾಲಿಬಾನ್ ಸರ್ಕಾರಕ್ಕೆ ದೇಶದಿಂದ ಹಣಕಾಸು ನೆರವು, ದವಸ ಧಾನ್ಯ, ಔಷಧಗಳನ್ನು ತುಂಬಿ ಕಳಿಸುವುದರ ಜೊತೆಗೆ ಹತ್ತಾರು ಸಾವಿರ ಕೋಟಿ ನೆರವು ನೀಡುತ್ತಿದ್ದೀರಿ ಇದನ್ನು ಕೇವಲ ರಾಜತಾಂತ್ರಿಕ ಸಂಬಂಧಕ್ಕಾಗಿ ಕೊಡುತ್ತಿದ್ದೀರೊ? ಅದಾನಿ ಅಂಬಾನಿಗಳು ಸುಲಭವಾಗಿ ವ್ಯವಹಾರ ನಡೆಸಲಿ ಎಂದು ಕೊಡುತ್ತಿದ್ದೀರೊ ದೇಶದ ಜನರಿಗೆ ತಿಳಿಸಿ.

ಸುಳ್ಳಿನ ಫ್ಯಾಕ್ಟ್ರಿಯಂತಾಗಿರುವ ನಿಮ್ಮ ಬಿಜೆಪಿ ಸರ್ಕಾರಗಳು ಈ ವರ್ಷದ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಸಾವಿರಾರು ಕೋಟಿ ಅನುದಾನ ಬರುತ್ತವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ, ಆದರೆ 2023ರ ಕಡೆಗೆ 4 ಲಕ್ಷ ಕೋಟಿ ರೂಪಾಯಿ ತೆರಿಗೆ, ಸೆಸ್ಸು, ಸರ್‍ಚಾರ್ಜುಗಳನ್ನು ಕರ್ನಾಟಕದಿಂದ ದೋಚಿಕೊಳ್ಳುತ್ತಿದ್ದೀರಿ. ಇದರಲ್ಲಿ ನಮಗೆ ಶೇ.42ರಷ್ಟು ಪಾಲು ಕೊಡಬೇಕು. ಹಾಗೆ ಕೊಟ್ಟರೆ ನಮಗೆ ನೀವು ನೀಡಬೇಕಾದ ಪಾಲು 1.70 ಲಕ್ಷ ಕೋಟಿ. ಆದರೆ ನೀವು ಈ ವರ್ಷ ಕೊಡುತ್ತೇವೆ ಎಂದು ಹೇಳುತ್ತಿರುವುದು ಕೇವಲ 37 ಸಾವಿರ ಕೋಟಿ ಮಾತ್ರ. 1.33 ಲಕ್ಷ ರೂಪಾಯಿಗಳನ್ನು ನಮಗೆ ಕೊಡದೆ ನೀವೆ ಕರ್ನಾಟಕದ ಜನರ ಋಣದಲ್ಲಿದ್ದೀರಿ. ಇದರ ಜೊತೆಗೆ 2.30 ಲಕ್ಷ ಕೋಟಿಯನ್ನು ನೀವೆ ಉಳಿಸಿಕೊಳ್ಳುತ್ತಿದ್ದೀರಿ. ಎರಡೂ ಸೇರಿದರೆ 3.63 ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ. ವರ್ಷವೊಂದಕ್ಕೆ ಇಷ್ಟು ಮೊತ್ತವನ್ನು ಕೇಂದ್ರ ಸರ್ಕಾರವೆ ಉಳಿಸಿಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವುದು ನ್ಯಾಯವೆ?

3.63 ಲಕ್ಷ ಕೋಟಿ ರೂಗಳಷ್ಟು  ಕರ್ನಾಟಕದ ಹಣವನ್ನು ತಮ್ಮ ಬಳಿಯೆ ಉಳಿಸಿಕೊಂಡು ಭದ್ರಾ ಯೋಜನೆಗೆ 5300 ಕೋಟಿ ಕೊಡುತ್ತೇವೆ, ರೈಲ್ವೆಗೆ 7 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳುವುದು ರಾಜ್ಯದ 7 ಕೋಟಿ ಜನರಿಗೆ ಮಾಡುವ ಅವಮಾನ  ಎಂದು ನಿಮ್ಮ ಸರ್ಕಾರಕ್ಕೆ ಅನ್ನಿಸುತ್ತಿಲ್ಲವೆ? ಯಾಕೆಂದರೆ ಹತ್ತಾರು ರೈಲ್ವೆ ಯೋಜನೆಗಳು ಹಣ ಇಲ್ಲದೆ ನೆನೆಗುದಿಗೆ ಬಿದ್ದಿವೆ. ತುಮಕೂರು ರಾಯದುರ್ಗ ಮತ್ತು ದಾವಣೆಗೆರೆ ಯೋಜನೆಗಳಿಗೇನೆ ನೀವು ಕೊಡಬೇಕಾದಷ್ಟು ಹಣ ಕೊಟ್ಟಿಲ್ಲ.

ಕರ್ನಾಟಕಕ್ಕೆ ನೀವು ಕೊಡುತ್ತಿರುವ ಕಿರುಕುಳಗಳ ನಡುವೆಯೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚಲು ಆದೇಶ ಹೊರಡಿಸಿದ್ದೀರಿ. ಇದು ಕರ್ನಾಟಕಕ್ಕೆ ನೀವು ಕೊಡುತ್ತಿರುವ ಕೊಡುಗೆಯೆಂದು ಜನರು ಮೋದಿ ಮೋದಿ ಎಂದು ಸ್ವಾಗತಿಸಿ ಕೂಗಬೇಕೆ?

ಎಚ್‍ಎಎಲ್‍ಗೆ ಕೊಡಬೇಕಾದ ಸಾವಿರಾರು ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಯಾವ ಅನುಭವವೂ ಇಲ್ಲದ ಅನಿಲ್ ಅಂಬಾನಿಗೆ ಕೊಟ್ಟು ರಾಫೆಲ್ ಹಗರಣಕ್ಕೆ ಸಾಕ್ಷಿಯಾದಿರಿ, ಇದು ಬೆಂಗಳೂರಿಗೆ ನೀವು ಕೊಟ್ಟ ಕೊಡುಗೆ ಎಂದು ಜನರು ಭಾವಿಸಬೇಕೆ?

ತುಮಕೂರು ಜಿಲ್ಲೆ ಅಡಿಕೆ, ತೆಂಗು ಬೆಳೆಯುವ ಪ್ರಮುಖ ಜಿಲ್ಲೆ. ಕೊಬ್ಬರಿಯ ಬೆಲೆ ಬಿದ್ದು ಹೋಗಿದೆ, ಆದರೆ ನಿಮ್ಮ ಸರ್ಕಾರ ಮೌನವಾಗಿದೆ ಯಾಕೆ?

ಅಡಿಕೆ ಬೆಲೆ ಹಿಂದಿನ ವರ್ಷಗಳಿಗಿಂತ ಕಡಿಮೆಯಾಗಿದೆ, ಆದರೂ ಭೂತಾನ್‍ನಿಂದ ಅಡಿಕೆ ಆಮದು ಮಾಡಿಕೊಂಡು ನಮ್ಮ ರೈತರ ಬದುಕಿನ ಮೇಲೆ ಬರೆ ಎಳೆಯುತ್ತಿದ್ದೀರಿ ಇದು ನ್ಯಾಯವೆ?

ಸಿರಿಧಾನ್ಯಗಳನ್ನು ಅತಿ ಹೆಚ್ಚು ಬೆಳೆಯುವ ಜಿಲ್ಲೆ ಕೂಡ ತುಮಕೂರೆ ಆಗಿದೆ. ಆದರೆ ನಿಮ್ಮ ಬಿಜೆಪಿ ಸರ್ಕಾರ  ಸಿರಿಧಾನ್ಯ ಬೆಳೆಯುವ ರೈತರಿಗೆ 10 ಸಾವಿರ ಕೊಡುತ್ತೇವೆ ಎಂದು ಹೇಳಿ 6 ಸಾವಿರಕ್ಕೆ ಇಳಿಸಿದ್ದಾರೆ. ಅದೂ ಕೂಡ ಸಮರ್ಪಕವಾಗಿ ಸಿಗುತ್ತಿಲ್ಲ. ಒಂದು ಎಕರೆಯಲ್ಲಿ 3-4 ಕ್ವಿಂಟಾಲ್ ಕೂಡ ಸಿರಿಧಾನ್ಯ ಬೆಳೆಯುವುದಿಲ್ಲ. ನೀವು ವಿದೇಶಗಳ ಮುಂದೆ ಸಿರಿಧಾನ್ಯಗಳ ಬಗ್ಗೆ ಭಾಷಣ ಬಿಗಿಯುವುದಕ್ಕೆ ನಮ್ಮ ರೈತರು ತಮ್ಮ ಬದುಕನ್ನು ಬರ್ಬಾದು ಮಾಡಿಕೊಂಡು ಬೆಳೆದುಕೊಡಬೇಕೆ? ರೈತರಿಗೆ ಏನು ಮಾಡಿದ್ದೀರಿ ಎಂದು ಹೇಳಿ ಮೊದಲು.

ಮನಮೋಹನ್ ಸಿಂಗರ ಕಾಲದಲ್ಲಿ 47 ರೂಪಾಯಿ ಇದ್ದ ಡೀಸೆಲ್ ಬೆಲೆಯನ್ನು ಲೀಟರಿಗೆ 100 ರೂ ದಾಟಿಸಿದರಿ. ಈಗ 90 ರೂ ಇದೆ. ಡೀಸೆಲ್ ಬೆಲೆ ಹೆಚ್ಚಿಸಿದ್ದರಿಂದ ಜಾನುವಾರುಗಳಿಗೆ ಬಳಸುವ ಹಿಂಡಿ, ಬೂಸಾ, ಫೀಡ್ ಬೆಲೆಗಳು ಜಾಸ್ತಿಯಾಗಿವೆ. ಕೇವಲ 5 ವರ್ಷಗಳ ಹಿಂದೆ 300-400 ರೂ ಇದ್ದ ಹಿಂಡಿ, ಬೂಸ ಈಗ 45 ಕೆಜಿ ಚೀಲಕ್ಕೆ 1400 ರುಪಾಯಿವರೆಗೆ ರೈತರು ಪಾವತಿಸಬೇಕಾಗಿದೆ. ಆದರೆ ಹಾಲಿನ ಬೆಲೆ ಹಿಂದೆ 32 ರೂ ಸಿಗುತ್ತಿತ್ತು ಈಗ 36 ರೂ ಸಿಗುತ್ತಿದೆ. ನಿಮ್ಮ ತೆರಿಗೆ ದಾಹಕ್ಕೆ ಜನ ಕಂಗೆಟ್ಟು ಹೋಗಿದ್ದಾರೆ, ರಾಜ್ಯದ ಜನರ ಆದಾಯ ಹೆಚ್ಚುತ್ತಿಲ್ಲ, ಬಡವರಾಗುತ್ತಿದ್ದಾರೆ ಈ ಅನ್ಯಾಯಕ್ಕೆ ನೀವೆ ಹೊಣೆಯಲ್ಲವೆ ಮೋದೀಜಿ?

ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಲು ನಿಮ್ಮ ಬಿಜೆಪಿ ಸರ್ಕಾರವು 7200 ಕೋಟಿ ಖರ್ಚು ಮಾಡಿದೆಯಂತೆ. ಒಂದು ಗುಂಡಿ ಮುಚ್ಚಲು 9.2 ಲಕ್ಷ ರೂಪಾಯಿ ಖರ್ಚಾಗಿದೆಯಂತೆ,  ಈ ಹಗಲು ದರೋಡೆಯ ಕುರಿತು ತನಿಖೆ ಮಾಡಿಸುತ್ತೀರಾ? ಅಥವಾ ‘ನಾ ಖಾವೂಂಗಾ ನಾ ಖಾನೆದೂಂಗ’ಎಂದು ಪುಕ್ಕಟ್ಟೆ ಮಂತ್ರ ಹೇಳಿ ಹಾಗೆ ಪುರ್ರೆಂದು ಹಾರಿ ಹೋಗುತ್ತೀರಾ?

ಕೇಳಬೇಕಾದ ಪ್ರಶ್ನೆಗಳು ನನ್ನ ಬಳಿ ಸಾವಿರ ಇವೆ. ನೀವು ಮತ್ತೆ ಮತ್ತೆ ಬರುತ್ತೀರಿ ಎಂಬುದು ನನಗೆ ಗೊತ್ತು. ಆದ್ದರಿಂದ ಒಂದೇ ದಿನ ನಿಮಗೆ ಹೆಚ್ಚು ತ್ರಾಸ ಕೊಡುವುದಿಲ್ಲ.  ಇಂದು ಇಷ್ಟು ಪ್ರಶ್ನೆಗಳಿಗೆ ಉತ್ತರ ಹೇಳಿ ಸಾಕು. ನೀವು ಉತ್ತರ ಹೇಳದಿದ್ದರೆ ಕರ್ನಾಟಕಕ್ಕೆ ನೀವು ಮಾಡಿರುವ ದ್ರೋಹವನ್ನು ಒಪ್ಪಿಕೊಂಡಿದ್ದೀರಿ ಎಂದು ನನ್ನ ರಾಜ್ಯದ ಜನರು ಅರ್ಥ ಮಾಡಿಕೊಳ್ಳುತ್ತಾರೆ.  ಜನರು ಸರಿಯಾದ ಸಮಯದಲ್ಲಿ ಸರಿಯಾದ ಉತ್ತರವನ್ನು ನಿಮಗೆ ಕೊಡುತ್ತಾರೆ ಎಂದು ಪ್ರಧಾನಿ ಮೋದಿಗೆ ಸಿದ್ಧರಾಮಯ್ಯ ಚಾಟಿ ಬೀಸಿದರು.

Key words: Former CM-Siddaramaiah-question- PM-Narendra modi

website developers in mysore