ಚಿರು ಕಳೆದುಕೊಂಡ ಮೇಘನಾ ಇನ್’ಸ್ಟಾಗ್ರಾಂನಲ್ಲಿ ಭಾವುಕ ಸಂದೇಶ

ಬೆಂಗಳೂರು, ಜೂನ್ 20, 2020 (www.justkannada.in): ಮೇಘನಾ ರಾಜ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಚಿರಂಜೀವಿ ಸರ್ಜಾ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಅಕ್ಷರ ರೂಪದಲ್ಲಿ ತೋಡಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಭಾವುಕ ಸಂದೇಶ ಪೋಸ್ಟ್ ಮಾಡಿರುವ ಮೇಘನಾ ತನ್ನ ಜತೆಗೆ ಕಷ್ಟದ ಸಮಯದಲ್ಲಿ ಜತೆಯಾಗಿ ನಿಂತ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

‘ನಾನು ಅತ್ತಾಗ ನೀವೂ ಕಣ್ಣೀರು ಹಾಕಿದ್ದೀರಿ. ನನ್ನಷ್ಟೇ ಚಿರು ಅವರನ್ನು ಪ್ರೀತಿಸಿದ್ದೀರಿ. ನಿಮ್ಮ ಪ್ರೀತಿಗೆ ನಾನು ಚಿರಋಣಿ. ಇಂತಹ ನೋವಿನ ಸಮಯದಲ್ಲಿ ನಿಮ್ಮ ಅಭಿಮಾನ, ಚಿತ್ರರಂಗದ ಬೆಂಬಲ ಎಲ್ಲವೂ ಚಿರು ಸಂಪಾದಿಸಿದ ಅಪಾರ ಪ್ರೀತಿಯ ಗುರುತು. ಸಾಲು ಸಾಲಾಗಿ ಬಂದು ಅವರನ್ನು ಮಹಾರಾಜನಂತೆ ಕಳುಹಿಸಿಕೊಟ್ಟಿರಿ. ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಆ ಮಹಾರಾಜ ನನ್ನ ಮಡಿಲಿಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ತಿರುಗಿ ಬರುವನು’ ಎಂದು ಮೇಘನಾ ಮತ್ತೊಮ್ಮೆ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.