ಸರ್ಕಾರಕ್ಕೆ ಆದಾಯ ತಂದುಕೊಡುವ ನೋಂದಣಿ ಇಲಾಖೆ ಜನಸ್ನೇಹಿಯಾಗಲಿ: ಟಿ.ಎಸ್.ನಾಗಾಭರಣ

ಬೆಂಗಳೂರು, ಜುಲೈ 08, 2020 (www.justkannada.in): ಸರ್ಕಾರಕ್ಕೆ ಆದಾಯ ತಂದುಕೊಡುವ ನೋಂದಣಿ ಇಲಾಖೆ ಜನಸ್ನೇಹಿಯಾಗಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಲಹೆ ನೀಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯೊಂದಿಗೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಕುರಿತು ಜಾಲತಾಣ ಸಂಪರ್ಕ (ವಿಡಿಯೋ ಕಾನ್ಫರೆನ್ಸ್) ಸಭೆಯಲ್ಲಿಂದು ಮಾತನಾಡಿದ ಅವರು,  ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುವಲ್ಲಿ ಬಹುಮುಖ್ಯಪಾತ್ರ ವಹಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಗಳಲ್ಲಿ ವರ್ಷಕ್ಕೆ ಸುಮಾರು 20 ಲಕ್ಷ ದಸ್ತಾವೇಜುಗಳು ನೋಂದಣಿಯಾಗುತ್ತಿವೆ. ಆದರೆ ಇವೆಲ್ಲವೂ ಕೂಡ ಆಂಗ್ಲಭಾಷೆಯಲ್ಲಿ ಆಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಇನ್ನೊಂದು ತಿಂಗಳ ಕಾಲಮಿತಿಯೊಳಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ನೋಂದಣಿಯಾಗುವ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಾದ ಕೆ.ಪಿ.ಮೋಹನ್ ರಾಜ್ ಅವರಿಗೆ ಸೂಚಿಸಿದರು.

ರಾಜ್ಯದಲ್ಲಿ 286 ನೋಂದಣಾಧಿಕಾರಿಗಳ (ಸಬ್ರಿಜಿಸ್ಟಾರ್)ಕಛೇರಿಗಳಿದ್ದು, ಎಲ್ಲಾ ಕಛೇರಿಗಳಲ್ಲೂ ಆಂಗ್ಲ ಭಾಷೆಯಲ್ಲಿಯೇ ನೋಂದಣಿಯಾಗುತ್ತಿವೆ. ಬಹುಮುಖ್ಯವಾಗಿ ಅಪಾರ್ಟ್ಮೆಂಟ್ ಮತ್ತು ಪ್ಲಾಟ್ಗಳ ಕ್ರಯಪತ್ರಗಳು ಕೂಡ ಸಂಪೂರ್ಣವಾಗಿ ಇಂಗ್ಲಿಷ್ನಲಿಯೇ ನೋಂದಣಿಯಾಗುತ್ತಿವೆ. ಇದು ರಾಜ್ಯ ಸರ್ಕಾರದ ಭಾಷಾನೀತಿಯ ಉಲ್ಲಂಘನೆಯಾಗಿದ್ದು, ಸಂಬಂಧಿಸಿದ ಅಧಿಕಾರಿ/ನೌಕರರ ಇಚ್ಛಾಶಕ್ತಿಯ ಕೊರತೆ ಇರುವುದಾಗಿ ನೇರವಾಗಿಯೇ ಆರೋಪಿಸಿದರು.

ಈ ಇಲಾಖೆಯೊಂದಿಗೆ ರೈತರು, ಗ್ರಾಮೀಣರು ಹೆಚ್ಚಾಗಿ ಸಂಪರ್ಕ ಹೊಂದಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಾಕಷ್ಟು ನಮೂನೆಗಳು ಸಾಮಾನ್ಯರಿಗೆ ಅರ್ಥವಾಗದ ಆಂಗ್ಲಭಾಷೆಯಲ್ಲಿರುತ್ತವೆ. ಅಂತಹ ಸಂದರ್ಭದಲ್ಲಿ ಹೇಗಾದರೂ ಸರಿ ನೋಂದಣಿಯಾದರೆ ಸಾಕು ಎಂಬ ಮನೋಭಾವದಲ್ಲಿ ಅಧಿಕಾರಿಗಳು ಹೇಳಿದ ಕಡೆಗಳಿಗೆ ಸಹಿ ಮಾಡುವ ಅನಿವಾರ್ಯತೆ ಒದಗುತ್ತದೆ. ಜೊತೆಗೆ ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಬೇಕು ಎಂಬ ಕಾರಣಕ್ಕೆ ಸರ್ಕಾರ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೂ ಸಹ ಕನ್ನಡೀಕರಣಗೊಳ್ಳದ ಕಾರಣಕ್ಕೆ ಸಾರ್ವಜನಿಕರು ತೊಂದರೆಗೆ ಸಿಲುಕುತ್ತಿದ್ದಾರೆ. ಹಾಗಾಗಿ ಇನ್ನೊಂದು ತಿಂಗಳೊಳಗೆ ಇಲಾಖೆಯ ಎಲ್ಲ ಹಂತಗಳಲ್ಲೂ ಶೇ.100ರಷ್ಟು ಕನ್ನಡ ಅನುಷ್ಠಾನಗೊಳಿಸುವಂತೆ ಆದೇಶಿಸಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದ ಕಾವೇರಿ ಆನ್ಲೈನ್ ಸೇವೆ ಕೂಡ ಇಂಗ್ಲಿಷ್ ನಲ್ಲಿದೆ ಎಂದು ಉದಾಹರಣೆ ಸಹಿತ ವೆಬ್ ಸೈಟ್ ಪ್ರದರ್ಶಿಸಿ ಮಾತು ಮುಂದುವರಿಸಿದ ನಾಗಾಭರಣ ಅವರು, ಇನ್ನು ಮುಂದೆ ಕಡ್ಡಾಯವಾಗಿ ದಸ್ತಾವೇಜುಗಳು ಕನ್ನಡದಲ್ಲಿದ್ದರೆ ಮಾತ್ರ ನೋಂದಣಿ ಮಾಡುವಂತೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸೂಚಿಸಿದರು.

ಮಾನ್ಯ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಶ್ರೀ ಬೇಳೂರು ಸುದರ್ಶನ ಅವರು ಮಾದರಿ ಜಾಲತಾಣಗಳ ಬಗ್ಗೆ ಮಾಹಿತಿ ನೀಡಿದರು.  ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಾದ ಕೆ.ಪಿ.ಮೋಹನ್ ರಾಜ್, ಮಹಾ ಪರಿವೀಕ್ಷಕರಾದ ಇ.ಪಿ.ಮಧುಸೂಧನ್, ವೆಬ್ ಪೋರ್ಟಲ್ನ ಯೋಜನಾಧಿಕಾರಿ ಸತೀಶ್, ಕನ್ನಡ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಮಧುಸೂಧನ್, ಡಾ. ಎ. ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.