ವಂಚನೆ ಪ್ರಕರಣ: ಸ್ನೇಹಿತರಿಂದಲೇ ಮೋಸ ಆಗಿದೆ ಅಂತಾ ಗೊತ್ತಾದರೆ ಅದು ಯಾರಾದರೂ ಬಿಡಲ್ಲ ಎಂದ ದರ್ಶನ್

ಮೈಸೂರು, ಜುಲೈ 11, 2021 (www.justkannada.in): ಸ್ನೇಹಿತರಿಂದಲೇ ಮೋಸ ಆಗಿದೆ ಅಂತಾ ಗೊತ್ತಾದರೇ ಅದು ಯಾರಾದರೂ ಬಿಡಲ್ಲ ಎಂದು ನಟ ದರ್ಶನ್ ಹೇಳಿದರು.

ಮೈಸೂರಿನಲ್ಲಿ ವಿಚಾರಣೆ ಮುಗಿಸಿ ಹೊರಬಂದ ನಟ ದರ್ಶನ್ ಮಾಧ್ಯಮಗಳ ಜತೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಡಾಕ್ಯುಮೆಂಟ್ ಪೋರ್ಜರಿ ಆಗಿದೆ ಅಂತಾ ಗೊತ್ತಾಗಿತ್ತು. ಒಂದು ತಿಂಗಳ ಹಿಂದೆ ನನ್ನ ಗಮನಕ್ಕೆ ಬಂತು. ಬ್ಯಾಂಕ್ ಮ್ಯಾನೇಜರ್ ರನ್ನು ಯಾರು ಪರಿಚಯ ಮಾಡಿದ್ರು, ಹೇಗೆ ಪರಿಚಯ ಮಾಡಿದ್ರು ಅಂತಾ ಎಲ್ಲವೂ ಗೊತ್ತಾಗಲಿದೆ. ಆಯಮ್ಮ ಬಾಯಿ ಬಿಟ್ಟರೆ ಎಲ್ಲ ಗೊತ್ತಾಗುತ್ತದೆ ಎಂದು ತಿಳಿಸಿದರು.

ಎಲ್ಲವನ್ನೂ ಪೊಲೀಸರು ತನಿಖೆಯಲ್ಲಿ ಬಾಯಿ ಬಿಡಿಸ್ತಾರೆ. ಒಳಗಡೆ ಮಾಹಿತಿ ಏನು ಬರುತ್ತೆ ಅನ್ನೋದು ಗೊತ್ತಿಲ್ಲ. ಇವತ್ತು ಪೊಲೀಸ್ ಬನ್ನಿ ಅಂತಾ ಕರೆದಿದ್ದರು ಬಂದಿದ್ದೇನೆ‌. ನಾನು ಕಥೆ ಹೇಳಿದ್ರೆ ಚೆನ್ನಾಗಿರಲ್ಲ. ಅವ್ರು ಏನು ಹೇಳಿದ್ರು ಎಲ್ಲವು ಹೊರ ಬಂದ ಮೇಲೆ ಗೊತ್ತಾಗುತ್ತದೆ. ಸ್ನೇಹಿತರಿಂದಲೇ ಮೋಸ ಆಗಿದೆ ಅಂತಾ ಗೊತ್ತಾದರೇ. ಯಾರದರೂ ನಾನು ಬಿಡಲ್ಲ ಎಂದು ಎಚ್ಚರಿಸಿದರು. ಇದಕ್ಕೆ ರೆಕ್ಕೆ ಪುಕ್ಕ ಕಟ್ ಮಾಡೋದಲ್ಲ. ನಾನು ಅದರ ತಲೆಯನ್ನೆ ಕಟ್ ಮಾಡ್ತೀನಿ ಎಂದರು.

ಬ್ಯಾಂಕ್ ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದ ಮಹಿಳೆ
ಮೈಸೂರಿನ ಎನ್.ಆರ್. ಎಸಿಪಿ ಕಚೇರಿ ಬಳಿ ನಿರ್ಮಾಪಕ ಉಮಾಪತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಒಂದು ತಿಂಗಳ ಹಿಂದೆ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದ ಮಹಿಳೆ ಬ್ಯಾಂಕ್ ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದರು. ಲೋನ್ ತೆಗೊತಿದ್ದೀರಾ, ಯಾರಿಗಾದ್ರೂ ಶ್ಯೂರಿಟಿ ಹಾಕಿದ್ದೀರಾ ಅಂತಾ ಕೇಳಿದ್ರು. ನನಗೆ ಅನುಮಾನ ಬಂದು‌ ಕಳೆದ ತಿಂಗಳು ನನ್ನ ಕಚೇರಿ ವ್ಯಾಪ್ತಿಯಲ್ಲಿರೋ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ ಎನ್.ಸಿ.ಆರ್ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ಆನಂತರ ನನ್ನ, ದರ್ಶನ್ ಹಾಗೂ ಹರ್ಷಾ ಸಹಿಗಳು ನಕಲಿಯಾಗಿವೆ. ಆಸ್ತಿ ಪತ್ರಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಮೈಸೂರಿನಲ್ಲಿ ದೂರು ಕೊಟ್ಟಿದ್ದೇನೆ. ಈ ವಿಚಾರವನ್ನು ಆರಂಭದಲ್ಲೇ ದರ್ಶನ್ ಅವರ ಗಮನಕ್ಕೂ ತಂದಿದ್ದೆ. ಮೈಸೂರು ಅಸ್ತಿ‌ ಪತ್ರಗಳು ನಕಲಿ ಆಗಿದ್ದರಿಂದ ಇಲ್ಲಿ‌ ದೂರು ಕೊಟ್ರೆ ಒಳ್ಳೆಯದು ಅಂತಾ ದರ್ಶನ್ ಅವರೇ ಹೇಳಿದ್ರು. ಅದರಂತೆ ಪೊಲೀಸರು ಈವತ್ತು ವಿಚಾರಣೆಗೆ ಕರೆದಿದ್ರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ.

ಅರುಣಾಕುಮಾರಿ ಎಂಬ ಮಹಿಳೆ ನನಗೆ ಮುಂಚೆಯಿಂದ ಪರಿಚಯ ಇರಲಿಲ್ಲ. ಆಕೆ ಬಗ್ಗೆ ನನಗೆ ಅನುಮಾನ ಬಂದಿದ್ದರಿಂದಲೇ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೇನೆ. ಹೀಗಿರುವಾಗ ಆಕೆಯನ್ನು ದರ್ಶನ್ ಅವರಿಗೆ ಪರಿಚಯ ಮಾಡಿಸಲು ಸಾಧ್ಯವೇ. ಈ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನ ಪೊಲೀಸರೇ ಪತ್ತೆ ಹಚ್ಚಬೇಕು ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.