‘ನನ್ನ ಸೋಲಿಸಿ ಈಗ ಟಿಕೆಟ್‌ ಗೆ ಬಂದಿದ್ದೀರಾ. ನಾಚಿಕೆ ಆಗಲ್ವಾ ನಿಮಗೆ..?’ ತರಾಟೆ ತೆಗೆದುಕೊಂಡ ಮಾಜಿ ಸಿಎಂ ಸಿದ್ಧರಾಮಯ್ಯ.

ಮೈಸೂರು,ನವೆಂಬರ್,19,2021(www.justkannada.in):  ನನ್ನ ಸೋಲಿಸಿ ಈಗ ಟಿಕೆಟ್‌ ಗೆ ಬಂದಿದ್ದೀರಾ. ನಾಚಿಕೆ ಆಗಲ್ವಾ ನಿಮಗೆ. ಹೀಗೆ ಚಾಮುಂಡೇಶ್ವರಿ ಕ್ಷೇತ್ರದ ಸೋಲು ನೆನೆದು ಮಾಜಿ ಸಿಎಂ ಸಿದ್ಧರಾಮಯ್ಯ ತರಾಟೆ ತೆಗೆದುಕೊಂಡಿದ್ದು ಕೆ. ಮರೀಗೌಡ ಅವರ ಅಭಿಮಾನಿಗಳಿಗೆ.

ಹೌದು ಇಂದು ಮೈಸೂರಿನ ಸಿದ್ದರಾಮಯ್ಯರ ನಿವಾಸದ ಬಳಿ ಆಗಮಿಸಿದ ಮರೀಗೌಡ ಅವರ ಅಭಿಮಾನಿಗಳು ಮರಿಗೌಡರಿಗೆ ಎಂಎಲ್ ಸಿ ಟಿಕೆಟ್ ನೀಡುವಂತೆ ಕಾರ್ ಅಡ್ಡಗಟ್ಟಿ ಒತ್ತಾಯಿಸಿದರು. ಈ ವೇಳೆ ಗರಂ ಆದ ಮಾಜಿ ಸಿಎಂ ಸಿದ್ಧರಾಮಯ್ಯ, ನನ್ನ ಸೋಲಿಸಿ ಈಗ  ಟಿಕೆಟ್ ಕೇಳೋಕೆ ಬಂದಿದ್ದೀರಾ..ನಾಚಿಕೆ ಆಗಲ್ವಾ ನಿಮಗೆ. ಯಾರಿಗೆ ಏನು ಕೊಡಬೇಕು ಅಂತಾ ಗೊತ್ತಿದೆ. ನಡೀರಿ ನಡೀರಿ ಅತ್ಲಗಿ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ವಜಾ ಮಾಡುವಂತೆ ರಾಜ್ಯ ಪಾಲರಿಗೆ ಪತ್ರ ಬರೆಯುತ್ತೇನೆ.

ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರತಿ ಕಾಮಗಾರಿ ಟೆಂಡರ್ ಪಡೆಯಲು ಶೇ.40ರಷ್ಟು ಪರ್ಸೆಂಟೇಜ್ ಕೊಡಬೇಕು ಅಂತ ಆರೋಪಿಸಿದ್ದಾರೆ. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಎಂಬುದನ್ನೂ ವಿವರಿಸಿದ್ದಾರೆ‌. ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಯಾವಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಎಂಬುದನ್ನು ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಹೇಳಿದ್ದಾರೆ. ಈ ಆರೋಪಗಳನ್ನ ನಾನು ಮಾಡಿದ್ದರೆ ಪ್ರತಿಪಕ್ಷದವರು ಅನ್ನಬಹುದಿತ್ತು. ಆದರೆ ಟೆಂಡರ್ ಪಡೆಯುವವರೆ ಶೇ.40 ಪರ್ಸೆಂಟ್ ಆರೋಪ ಮಾಡಿರುವುದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮುಂದುವರೆಯಬಾರದು. ಪ್ರಧಾನಿ ಮೋದಿಯವರು ‘ನಾ ಕಾವೂಂಗಾ ನಾ ಕಾನೇದೂಂಗಾ’ ಅನ್ನುತ್ತಿದ್ದರು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಮಿಷನ್ ಪಡೆಯುವ ಸರ್ಕಾರವನ್ನ ನಾನು ಜೀವಮಾನದಲ್ಲಿ ನೋಡಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ದೆಹಲಿ ರೈತರ ಹೋರಾಟದಲ್ಲಿ ಮೃತಪಟ್ಟವರಿಗೆ ತಲಾ 25ಲಕ್ಷ ಪರಿಹಾರ ನೀಡಬೇಕು.

ದೆಹಲಿ ರೈತರ ಹೋರಾಟದಲ್ಲಿ ಮೃತಪಟ್ಟವರಿಗೆ ತಲಾ 25ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಸಿದ್ಧರಾಮಯ್ಯ, ಇದುವರೆಗೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವವರೂ ರೈತರೇ ಅಲ್ಲ ಅನ್ನುತ್ತಿದ್ದರು. ಈಗ ಮೂರು ಕಾಯ್ದೆಗಳನ್ನು ವಾಪಸ್ಸ್ ತೆಗೆದುಕೊಂಡಿದ್ದಾರೆ. ಈಗ ರೈತರ ಹೋರಾಟಕ್ಕೆ ಮಣಿದು ಕೃಷಿ ಕಾಯ್ದೆಗಳನ್ನು ವಾಪಸ್ಸ್ ಪಡೆದಿದ್ದಾರೆ. ಬಿಜೆಪಿಯವರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಅಂತ ನಾನು ಹೇಳುವುದಿಲ್ಲ. ಇದು ರೈತರ ಹೋರಾಟಕ್ಕೆ ಸಂದ ಜಯ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ರೈತರ ನ್ಯಾಯಯುತವಾದ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.

Key words: mysore-former CM- Siddaramaiah-Class-fan-election-ticket.