ಬೆಂಗಳೂರು ಉತ್ತರ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಚಾಲನೆ ನೀಡಿದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ್

ಅಮರಾವತಿ (ಶಿಡ್ಲಘಟ್ಟ ತಾ.),ಮಾರ್ಚ್,20,2023(www.justkannada.in):  ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯುಳ್ಳ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಇದರ ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಈ ಮೂರು ಜಿಲ್ಲೆಗಳ ಶೈಕ್ಷಣಿಕ ಇತಿಹಾಸದಲ್ಲಿ ಇದು ಐತಿಹಾಸಿಕ ದಿನವಾಗಿದೆ. ಐದು ವರ್ಷಗಳ ಹಿಂದೆ ಆರಂಭವಾದ ಈ ವಿ.ವಿ.ಗೆ 172 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ಯಾಂಪಸ್ ನಿರ್ಮಿಸಿ, ಜ್ಞಾನ ನಗರವನ್ನು ಸೃಷ್ಟಿಸಲಾಗುವುದು” ಎಂದರು.

“ಈ ಪ್ರದೇಶವು ಕೃಷಿ ಆಧಾರಿತವಾಗಿದೆ. ಇದರ ಮೌಲ್ಯವರ್ಧನೆ ಆಗಬೇಕು ಎಂದರೆ ಅದಕ್ಕೆ ತಕ್ಕ ಜ್ಞಾನವನ್ನು ನಮ್ಮ ವಿ.ವಿ.ಗಳು ಸೃಷ್ಟಿಸಬೇಕು. ಯುವಜನರ ಈ ಸಂಕಲ್ಪ ಶಕ್ತಿಗೆ ಸರಕಾರವು ಪೂರಕ ಬೆಂಬಲ ನೀಡುತ್ತಿದೆ” ಎಂದು ಅವರು ನುಡಿದರು.

ನೆಪಮಾತ್ರದ ಪದವಿಗಳಿಂದ ಯಾವುದೇ ಪ್ರಯೋಜನವಿಲ್ಲ. ಗುಣಮಟ್ಟದ ಶಿಕ್ಷಣವು ಸಮಾಜದ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಶಕ್ತಿ ತುಂಬಬೇಕು ಎಂದು ಅವರು ಪ್ರತಿಪಾದಿಸಿದರು.

21ನೇ ಶತಮಾನವು ಜ್ಞಾನದ ಯುಗವಾಗಿದೆ. ಇಲ್ಲಿನ ಕ್ಯಾಂಪಸ್‌ನಲ್ಲಿ ಮಳೆನೀರು ಸಂಗ್ರಹ, ಸಾಮಾಜಿಕ ಅರಣ್ಯ, ಪರಿಸರಸ್ನೇಹಿ ತಂತ್ರಜ್ಞಾನ ಎಲ್ಲವನ್ನೂ ಅಳವಡಿಸಿ ಕೊಳ್ಳಲಾಗುವುದು. ಅಂತಿಮವಾಗಿ ಇದನ್ನು ವಿಶ್ವ ದರ್ಜೆಯ ಅರಿವಿನ ತಾಣವನ್ನಾಗಿ ಮಾಡಲಾಗುವುದು ಎಂದು ಅವರು ತಮ್ಮ ಹೆಬ್ಬಯಕೆ ವ್ಯಕ್ತಪಡಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸಮಾಜ ಮತ್ತು ವಿದ್ಯಾರ್ಥಿಗಳ ಪರವಾಗಿದೆ. ಇದರ ಅನುಷ್ಠಾನದಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. ಕಾರ್ಯಕ್ರಮದಲ್ಲಿ ಸಚಿವ ಕೆ.ಸುಧಾಕರ್, ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ, ಕುಲಸಚಿವ ವೆಂಕಟೇಶ್, ಶಾಸಕ ವಿ.ಮುನಿಯಪ್ಪ ಮುಂತಾದವರು ಉಪಸ್ಥಿತರಿದ್ದರು.

Key words: Foundation stone- laid – Bengaluru -North University -campus