ಮಧ್ಯಂತರ ಚುನಾವಣೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು..

ಬೆಂಗಳೂರು,ಜೂ,21,2019(www.justkannada.in): ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಮಾಜಿ ಪ್ರಧಾನಿ ಹೆಚ್,ಡಿ ದೇವೇಗೌಡರು ಹೊಸಬಾಂಬ್ ಸಿಡಿಸಿದ್ದಾರೆ.  ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ. ಈ ಬಗ್ಗೆ ಸಂಶಯವೇ ಇಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಬಿ.ಎಸ್ ಯಡಿಯೂರಪ್ಪ ಸಿಎಂ ಆಗಬಾರದು ಅಂತಾ ಕಾಂಗ್ರೆಸ್ ನವರು ಓಡಿ ಬಂದ್ರು. ಎಲ್ಲ ಚರ್ಚೆ ಮಾಡದೇ ಸರ್ಕಾರ ರಚನೆಗೆ ಮುಂದಾದ್ರು. ಕುಮಾರಸ್ವಾಮಿ ಅವರನ್ನೇ ಸಿಎಂ ಮಾಡಿ ಎಂದ್ರು. ಈಗ ಒನ್ ಥರ್ಡ್ ನಿಯಮವೂ ಇಲ್ಲ ಏನು ಇಲ್ಲ. ನಮ್ಮ ಒಂದು ಮಂತ್ರಿ ಸ್ಥಾನವನ್ನೂ ಕಾಂಗ್ರೆಸ್ ಗೆ ಸರಂಡರ್ ಮಾಡಿದ್ದೀವಿ. ಎಲ್ಲವನ್ನು ಸಹಿಸ್ಕೊಂಡು ಹೋಗ್ತಿದ್ದೇನೆ. ನಾನೇನಾದ್ರು ಮಾತಾಡಿದ್ನಾ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಲೋಕಸಭೆ ಚುನಾವಣೆ ಸಂಬಂಧ ಬೇಸರ ವ್ಯಕ್ತಪಡಿಸಿದ ಹೆಚ್.ಡಿ ದೇವೇಗೌಡರು, ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೆ. ತುಮಕೂರು ಕ್ಷೇತ್ರವನ್ನು ನಾವು ಕೇಳಲೇ ಇಲ್ಲ. ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನೇ ಕೊಡಿ ಎಂದಿದ್ದು. ಆದರೆ ಅವರು ಮೈಸೂರಿಗೋಸ್ಕರ ತುಮಕೂರು ಕ್ಷೇತ್ರ ಕೊಟ್ರು ಕಾಂಗ್ರೆಸ್ ವಿರುದ್ಧ ಅಸಮಾಧಾನ  ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಸೋಲಿಗೆ ನಾವು ಕಾರಣವೇ..? ಹಾಗೇನಾದ್ರು ಇದ್ರೆ ಬಹಿರಂಗವಾಗೇ ಹೇಳಬಹುದು. ಎಲ್ಲರೂ ಚರ್ಚೆ ಮಾಡದೆ ಬಂದ್ರೋ ಹಾಗೆ ಬಂದ್ರೋ ಗೊತ್ತಿಲ್ಲ. ಕುಮಾರಸ್ವಾಮಿಗೆ ಸಿಎಂ ಮಾಡಿ ಅಂದ್ರು ಆದರೆ ನಾನು ಖರ್ಗೆಗೆ ಸಿಎಂ ಮಾಡಿ ಎಂದಿದ್ದೆ. ಕಾಂಗ್ರೆಸ್ ಗೆ ಸರ್ಕಾರ ನಡೆಸುವ ಮನಸ್ಸಿದೆಯಾ ಇಲ್ವಾ ನಂಗೆ ಗೊತ್ತಿಲ್ಲ. ಇಲ್ಲಿ ಎಲ್ಲದಕ್ಕು ಆಕ್ಷನ್ ಆಂಡ್ ರಿಯಾಕ್ಷನ್ ನೆಸೆಸರಿ ಇಲ್ಲ ಎಂದು ಹೆಚ್,ಡಿ ದೇವೇಗೌಡರು ಹೇಳಿದರು.

ರಾಜಕಾರಣದಲ್ಲಿ ಅನೇಕ ಏಳು ಬೀಳು ಇರುತ್ತೆ. ನನ್ನ ಜೊತೆಯಲ್ಲೇ ಇದ್ದು, ನನ್ನ ಜೊತೆಯಲ್ಲೇ ಬೆಳೆದವರು ನನ್ನನ್ನು ಬಿಟ್ಟು ಹೋದ್ರು. ನಾನು ಧೃತಿಗೆಡದೆ ಮುಂದೆ ಬಂದಿದ್ದೇನೆ . ಮೈತ್ರಿ ಸರ್ಕಾರ ಮಾಡಲೇ ಬೇಕು ಅಂತ ನಂಗೇನು ಇರ್ಲಿಲ್ಲ. ದೆಹಲಿ ನಾಯಕರು ಬಂದು ನಿಮ್ಮ ಮಗನನ್ನ ಮುಖ್ಯಮಂತ್ರಿ ಮಾಡ್ಬೇಕು ಅಂದ್ರು. ಸಾರ್ವತ್ರಿಕ ಚುನಾವಣೆ ನಂತರ ಹೈಕಮಾಂಡ್ ಸ್ವಲ್ಪ ಶಕ್ತಿ ಕಳೆದುಕೊಂಡಿದೆ . ಸರ್ಕಾರ ಎಷ್ಟ್ ದಿನ ಇರುತ್ತೋ ಗೊತ್ತಿಲ್ಲ. ಕಾಂಗ್ರೆಸ್ ಮುಖಂಡರ ಕೈಯಲ್ಲಿ ಇದೆ. ಜೆಡಿಎಸ್ ಜೊತೆ ಹೊರಟ್ರೆ ಕಾಂಗ್ರೆಸ್ ಪಕ್ಷ ಹೋಗುತ್ತೆ ಅನ್ನೋ ಸಂಕಟ ಇದೆ ಹೀಗಾಗಿ ನಮ್ಮ ಮಂತ್ರಿ ಸ್ಥಾನವನ್ನೂ ತೆಗೆದ್ಕೊಂಡಿದ್ದಾರೆ. ಎಲ್ಲಾ ಸಹಿಸ್ಕೊಂಡ್ ಹೋಗ್ತಿದ್ದೇನೆ ಎಂದು ಹೆಚ್.ಡಿ ದೇವೇಗೌಡರು ಬೇಶರ ವ್ಯಕ್ತಪಡಿಸಿದ್ದಾರೆ.

ಇಂದು ಯೋಗ ದಿನ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು,  ಪ್ರಾಚೀನ ಕಾಲದಿಂದಲೂ ಆರೋಗ್ಯ ಕಾಪಾಡಲು ಯೋಗ ಮಾಡಲಾಗ್ತಿದೆ. ವಿದ್ಯಾರ್ಥಿಗಳಾಗಿದ್ದಾಗ ಅಂದಿನ ಉಪಧ್ಯಾಯರು ಸೂರ್ಯ ನಮಸ್ಕಾರ ಮಾಡಿಸ್ತಿದ್ರು. ಸೂರ್ಯ ನಮಸ್ಕಾರ ಮಾಡೋದು ಬಹಳ ಒಳ್ಳೆಯದು. ಬಾಲ್ಯದಿಂದಲೂ ನಾನು ಯೋಗ ಅಭ್ಯಾಸ ಮಾಡ್ತಿದ್ದೆ. ಇತ್ತೀಚೆಗೆ ನರೇಂದ್ರ ಮೋದಿ ಪ್ರಧಾನಿಯಾದಾಗ ಯೋಗಕ್ಕೆ ಹೆಚ್ಚು ಮಹತ್ವ ನೀಡಿದ್ರು. ರಾಂಚಿಯಲ್ಲಿಯೂ ಸಹ ಅವರು ಭಾಗಿಯಾಗಿ ಯೋಗ ಮಾಡಿದ್ದಾರೆ . ಯುವ ಪೀಳಿಗೆಗಳಿಗೆ ಇದರ ಅವಶ್ಯಕತೆ ಇದೆ. ಏಕಾಗ್ರತೆ, ಆರೋಗ್ಯಕ್ಕೆ ಯೋಗ ಅಗತ್ಯ ಇದೆ. ಪ್ರಧಾನಿ ಯೋಗಕ್ಕೆ ಕೊಟ್ಟ ಮಹತ್ವವನ್ನ ನಾನು ಸ್ವಾಗತ ಮಾಡ್ತೇನೆ ಎಂದು ತಿಳಿಸಿದರು.

Key words: Former Prime Minister- HD Deve Gowda – new bomb-about – midterm elections