ವಿಪಕ್ಷ ನಾಯಕನಿಲ್ಲದೆ ಮೊದಲ ಅಧಿವೇಶನ: ಇದು ದುರ್ದೈವ- ಬಿಜೆಪಿಗೆ ತಿವಿದ ಸಚಿವ ಹೆಚ್.ಕೆ ಪಾಟೀಲ್

ಬೆಂಗಳೂರು,ಜುಲೈ,3,2023(www.justkannada.in): ರಾಜ್ಯದ ಇತಿಹಾಸದಲ್ಲಿ ವಿಪಕ್ಷ ನಾಯಕನಿಲ್ಲದೆ ಮೊದಲ ಅಧಿವೇಶನ ನಡೆಯುತ್ತಿದೆ.  ಇದು ದುರ್ದೈವ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್  ಬಿಜೆಪಿಗೆ ಮಾತಿನಲ್ಲೇ ತಿವಿದರು.

ಇಂದು ಮಾಧ್ಯಮದ ಜೊತೆ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ವಿರೋಧ ಪಕ್ಷದ ನಾಯಕನಿಲ್ಲದೇ ರಾಜ್ಯಪಾಲರ ಭಾಷಣ ಮಾಡಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ನಮ್ಮ ಸದನದಲ್ಲಿ ಯಾವಾಗಲೂ ವಿಪಕ್ಷ ನಾಯಕರು ಇದ್ದೇ ಇರುತ್ತಿದ್ದರು. ಆದರೆ ಬಿಜೆಪಿ ವಿಪಕ್ಷ ನಾಯಕರನ್ನ ಆಯ್ಕೆ ಮಾಡಿಲ್ಲ.  ವಿಪಕ್ಷ ನಾಯಕನ ಆಯ್ಕೆ ಬಿಜೆಪಿಯ ವಿಚಾರ ಇರಬಹುದು. ಆದರೆ ಸದನದ ಘನತೆ ಮತ್ತು ಸಂಸ್ಕೃತಿ, ಪರಂಪರೆಗೆ ಧಕ್ಕೆಯಾಗಿದೆ ಎಂದು ಟೀಕಿಸಿದರು.

ಗ್ಯಾರಂಟಿಗಳ ಅನುಷ್ಠಾನ ಬಗೆಗಿನ ಬದ್ಧತೆ ರಾಜ್ಯಪಾಲರು ತಿಳಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವ ದಿಸೆಯಲ್ಲಿ ಹೋಗುತ್ತೆ. ಇದನ್ನು ರಾಜ್ಯಪಾಲ ಗೆಹ್ಲೋಟ್​ ಭಾಷಣದ ಮೂಲಕ ತಿಳಿಸಿದ್ದಾರೆ. ಸರ್ಕಾರದ ಜನಪರವಾದ ಕಾಳಜಿ ಬಗ್ಗೆ ರಾಜ್ಯಪಾಲರು ಹೇಳಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಸಂದೇಶ ನೀಡಿದ್ದೇವೆ  ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.

Key words: First session- without -Opposition Leader – unfortunate- BJP- minister -HK Patil