3ನೇ ಕೋವಿಡ್-19  ಅಲೆ ಎದುರಿಸಲು ಸಜ್ಜಾಗಿ:  ಕಲಬುರಗಿ ಜಿಲ್ಲಾಡಳಿತಕ್ಕೆ ಸಚಿವ ಮುರುಗೇಶ್ ನಿರಾಣಿ ಸೂಚನೆ.

ಬೆಂಗಳೂರು,ಜೂನ್,27,2021(www.justkannada.in):  ರಾಜ್ಯದಲ್ಲಿ ಮೂರನೇ ಕೋವಿಡ್ -19 ಅಲೆ ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ  ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಸೂಚಿಸಿದ್ದಾರೆ.jk

ಎರಡನೇ ಅಲೆಯನ್ನು ನಿಯಂತ್ರಣ ಮಾಡಿದ ಮಾದರಿಯಲ್ಲೇ ಮೂರನೇ ಅಲೆ ನಿಯಂತ್ರಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು, ವಿಶೇಷವಾಗಿ 3ಟಿ (ಪರೀಕ್ಷೆ, ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ) ಸೂತ್ರವನ್ನು ಪಾಲಿಸಬೇಕೆಂದು ಅವರು ಸಲಹೆ ಮಾಡಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ  ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣಕ್ಕೆ ವಿಶೇಷ ಒತ್ತು ಕೊಟ್ಟು ಕೋವಿಡ್ ಸೋಂಕು ನಿಯಂತ್ರಿಸಬೇಕು, ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಅಭಿಯಾನದ ಶಿಬಿರಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದ್ದಾರೆ.

ಎರಡನೇ ಅಲೆ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯು ಅತಿ ವೇಗವಾಗಿ ಕೋವಿಡ್ ಸೋಂಕು ನಿಯಂತ್ರಿಸಿದ ಮೊದಲ 5 ಜಿಲ್ಲೆಗಳಲ್ಲಿ ಮೂರನೇ ಸ್ಥಾನ ಪಡೆದಿದೆ, ಮೂರನೇ ಅಲೆಯ ಸಂದರ್ಭದಲ್ಲಿ 31 ಜಿಲ್ಲೆಗಳಿಗೂ ನಮ್ಮ ಜಿಲ್ಲೆ ಮಾದರಿಯಾಗಬೇಕೆಂದು ಹೇಳಿದ್ದಾರೆ.

ಈ ಬಾರಿ ಜಿಲ್ಲಾಡಳಿತ, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಬೇಕು, ಪ್ರತಿದಿನ ಸರಣಿ ಸಭೆಗಳನ್ನು ನಡೆಸಿ ಜಿಲ್ಲೆಯ ಸ್ಥಿತಿಗತಿಗಳನ್ನು ಪರಾಮರ್ಶೆ ನಡೆಸಬೇಕೆಂದು ಸಚಿವ ಮುರುಗೇಶ್ ನಿರಾಣಿ ನಿದರ್ಶನ ನೀಡಿದ್ದಾರೆ.

ವಿವಿಧ ಇಲಾಖೆಗಳ ಸಮನ್ವಯದಲ್ಲಿ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಬೇಕು, ಗ್ರಾಮಪಂಚಾಯಿತಿ, ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟಗಳಲ್ಲಿ ಯಾವ ಯಾವ ಕಡೆ ಗಂಭೀರ ಸಮಸ್ಯೆಗಳಿವೆ ಎಂಬುದರ ಮಾಹಿತಿಯನ್ನು ಮುಂಚಿತವಾಗಿಯೇ ಪಡೆದು ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳುವಂತೆ ಹೇಳಿದ್ದಾರೆ.

ಜನಪ್ರತಿನಿಧಿಗಳ ಜೊತೆ ಪ್ರತಿದಿನ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಮತ್ತಿತರರು ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಜಿಲ್ಲಾ ಹಂತದ ಸ್ಥಳೀಯ ನಾಯಕರು, ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸುವಂತೆ ಸಚಿವ ನಿರಾಣಿ ಅವರು ಸೂಚನೆ ನೀಡಿದ್ದಾರೆ.

ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗಾಗಿ ಹಾಸಿಗೆಗಳು, ಐಸಿಯು ಮತ್ತು ಮಿನಿ ಐಸಿಯು ಘಟಕಗಳನ್ನು ಈಗಿನಿಂದಲೇ ಸಿದ್ಧಗೊಳಿಸಬೇಕು, ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಪರಿಪಾಟ  ನಿಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ.

ಈಗಾಗಲೇ ಜಿಲ್ಲಾಡಳಿತವು ಬೇರೆ ಬೇರೆ ರಾಜ್ಯಗಳಿಂದ ಬರುವವರಿಗೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ. ಕಲಬುರಗಿ ಜಿಲ್ಲೆಯು ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಗೆ ಗಡಿ ಹಂಚಿಕೊಂಡಿರುವುದರಿಂದ ಗಡಿ ಭಾಗದಲ್ಲಿ  ತಪಾಸಣೆಯನ್ನು ಹೆಚ್ಚು ಮಾಡಬೇಕೆಂದು ತಿಳಿಸಿದ್ದಾರೆ.

ಕೋವಿಡ್ 3ನೆ ಅಲೆ ಸವಾಲಾಗಿ ಪರಿಣಮಿಸುತ್ತಿರುವುದರಿಂದ ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡಬೇಕು, ಪ್ರತಿಯೊಂದು ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಔಷಧಗಳು, ಲಸಿಕೆ, ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕು, ಅಗತ್ಯವಿರುವ ಕಡೆ ಹೆಚ್ಚಿನ ಮೂಲಭೂತ ಸೌಕರ್ಯಗಳು ಹಾಗೂ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೂ ಗಮನ ಹರಿಸಬೇಕೆಂದು ಮುರುಗೇಶ್ ನಿರಾಣಿ ಸೂಚಿಸಿದ್ದಾರೆ.

ಸೋಂಕು ನಿಯಂತ್ರಿಸುವಲ್ಲಿ ಕೋವಿಡ್ ವಾರಿಯರ್ಸ್‍ಗಳ ಪಾತ್ರ ಪ್ರಮುಖವಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದು ನಮ್ಮ ಮನೆಯ ಸಮಸ್ಯೆಯೆಂದು ಕೊಂಡು ಪ್ರತಿಯೊಬ್ಬರು ಸೋಂಕು ತಡೆಗಟ್ಟಲು  ಶಪಥ ಮಾಡಬೇಕೆಂದು ಸಚಿವ ಮುರುಗೇಶ್  ಕಿವಿಮಾತು  ಹೇಳಿದ್ದಾರೆ.

Key words: face – 3rd covid-19 –Wave-  Minister- Murugesh nirani- kalburgi district