Wednesday, August 12, 2026

BDA Apartments

Home Front Page EXCLUSIVE : ಮೈಸೂರಿನಲ್ಲಿ ಇತಿಹಾಸದ ಪುಟ ಸೇರಿತು ಮಹಾತ್ಮ ಗಾಂಧಿ ಉದ್ಘಾಟಿಸಿದ ಈ ಕಟ್ಟಡ…!

EXCLUSIVE : ಮೈಸೂರಿನಲ್ಲಿ ಇತಿಹಾಸದ ಪುಟ ಸೇರಿತು ಮಹಾತ್ಮ ಗಾಂಧಿ ಉದ್ಘಾಟಿಸಿದ ಈ ಕಟ್ಟಡ…!

ಮೈಸೂರು, ಅ.23, 2019 : ( www.justkannada.in news ) : ‘ ಇತಿಹಾಸ ಅರಿಯದ ಹೊರತು ಇತಿಹಾಸ ಸೃಷ್ಠಿಸಲು ಸಾಧ್ಯವಿಲ್ಲ ‘ ಅನ್ನೋ ಮಾತಿದೆ. ಆದರೆ ಅಂಥ ಇತಿಹಾಸವೊಂದನ್ನು ಮುಂದಿನ ಪೀಳಿಗೆ ತಿಳಿಯುವ ಅವಕಾಶವನ್ನೇ ನೀಡದಿರುವುದು ವಿಪರ್ಯಾಸವೇ ಸರಿ. ಅಭಿವೃದ್ಧಿಯ ಹೆಸರಿನಲ್ಲಿ ಐತಿಹಾಸಿಕ ಸ್ಥಳಗಳನ್ನು ಕಣ್ಮರೆಯಾಗಿಸುತ್ತಿರುವುದು ಅಕ್ಷಮ್ಯ. ಈ ಪಟ್ಟಿಗೆ ಈಗ ಮತ್ತೊಂದು ಹೊಸ ಸೇರ್ಪಡೆಯಾಗಿದೆ.

ಮೈಸೂರು ಅರಸು ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿ, ಅಭಿವೃದ್ಧಿಪರ ನಿಲುವಿನ ಕಾರಣ ಅಂದಿನ ಮೈಸೂರು ರಾಜ್ಯ ಅನೇಕ ಹೊಸತನಗಳಿಗೆ ಈಗಲೂ ಸಾಕ್ಷಿಯಾಗಿದೆ. ಇಂಥ ಒಂದು ಸಾಕ್ಷಿ ಇದೀಗ ನೆಲಸಮವಾಗಿದೆ. ಇದಕ್ಕೆ ಕಾರಣ ‘ಅಭಿವೃದ್ಧಿ’.

ಮೈಸೂರು- ಬೆಂಗಳೂರು ಮಾರ್ಗದ ನಾಲ್ಕು ಪಥ ರಸ್ತೆಯನ್ನು ಇದೀಗ ವಿಸ್ತರಿಸಲು ರಾಜ್ಯ ಸರಕಾರ ಮುಂದಾಗಿರುವುದು ಸರಿಯಷ್ಟೆ. ಬೆಂಗಳೂರಿನ ಬಿಡದಿ ಕಡೆಯಿಂದ ಹಾಗೂ ಮೈಸೂರಿನ ಕೊಲಂಬಿಷಯ ಏಷಿಯಾ ವೃತ್ತದ ಕಡೆಯಿಂದ ರಸ್ತೆ ಅಗಲೀಕರಣ ಕಾರ್ಯ ಭರದಿಂದ ಸಾಗುತ್ತಿದೆ.

ಇತಿಹಾಸದ ಪುಟಗಳಲ್ಲಿ ತನ್ನದೇ ಆತ ವಿಶೇಷ ಚಾಪು ಮೂಡಿಸಿದ್ದ ಮೈಸೂರಿನ ಕೆ.ಆರ್.ಮಿಲ್ ಕಾರ್ಖಾನೆ ಇನ್ನು ಕೇವಲ ನೆನಪು ಮಾತ್ರ. ಸ್ವಾತಂತ್ರ ಪೂರ್ವದಲ್ಲಿ ಮಹಾತ್ಮ ಗಾಂಧಿ ಕರೆಗೆ ಆಸರೆಯಾಗಿ ಮೈಸೂರು ಮಹಾರಾಜರು ಆರಂಭಿಸಿದ ಕೈಮಗ್ಗದ ಗಿರಣಿ ಇಂದು ಇತಿಹಾಸದ ಪುಟದಲ್ಲಿ ಸೇರ್ಪಡೆಯಾಗಿದೆ.

ಮೈಸೂರು ಜಿಲ್ಲೆಯ ಸಾವಿರಾರು ಕಾರ್ಮಿಕ ಕುಟುಂಬಕ್ಕೆ ಜೀವನಾಧಾರವಾಗಿತ್ತು ಈ ಕೆ.ಆರ್.ಮಿಲ್ ಕಾರ್ಖಾನೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯ ನಿರ್ವ ಹಿಸುತ್ತಿದ್ದ ಈ ಕಾರ್ಖಾನೆ ಪ್ರಜಾಪ್ರಭುತ್ವ ಆಡಳಿತ ಬಂದ ಮೇಲೆ ಅವಸಾನದಂಚಿಗೆ ತಲುಪಿ ಬೀಗ ಮುದ್ರೆ ಜಡಿಯಲಾಗಿತ್ತು.

ಕೆಆರ್ ಮಿಲ್ ಆರಂಭಿಸುವುದರಿಂದ ಜವಳಿ ಉದ್ಯಮದ ಅಭಿವೃದ್ಧಿ ಜತೆಗೆ 20 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ ಎಂಬ ಕೂಗು ಕೇಳುವ ಸಮಯದಲ್ಲೇ ಕಟ್ಟಡವನ್ನೇ ರಸ್ತೆ ಅಗಲೀಕರಣಕ್ಕಾಗಿ ಕಟ್ಟಡವನ್ನೇ ನೆಲಸಮ ಮಾಡಲಾಗಿದೆ.

ಗಾಂಧಿ ನಂಟು :

ಮೊದಲ ಬಾರಿಗೆ ಗಾಂಧೀಜಿ ಮೈಸೂರಿಗೆ  ಬಂದಾಗ ಆಗ ತಾನೇ ಸ್ಥಾಪನೆಗೊಂಡಿದ್ದ ಕೃಷ್ಣರಾಜೇಂದ್ರ ಬಟ್ಟೆ ಗಿರಣಿ (ಕೆ.ಆರ್.ಮಿಲ್ ) ಉದ್ಘಾಟಿಸಿದ್ದರು. ಎರಡನೇ ಬಾರಿಗೆ ಬಂದಾಗ ಇದೇ ಗಿರಣಿಯ ಕಾರ್ಮಿಕರು ರಾತ್ರಿ- ಹಗಲು ಹೆಚ್ಚುವರಿ ಕೆಲಸ ಮಾಡಿ, ಅದರಿಂದ ಬಂದ ಹಣವನ್ನು ಗಾಂಧೀಜಿಗೆ ನೀಡಿದ್ದರು.

ಗಾಂಧೀಜಿ ಮೈಸೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು 1927ರಲ್ಲಿ. ಅವರಿಗೆ ಮೈಸೂರಿನ ಸೆಳೆತ ಹೇಗಿತ್ತೆಂದರೆ ಭೇಟಿ ನೀಡಿದ ಕೇವಲ ಏಳು ವರ್ಷಕ್ಕೆ ಅಂದರೆ 1934ರಲ್ಲಿ ಮತ್ತೊಮ್ಮೆ ಭೇಟಿ ನೀಡಿದ್ದರು. ಎರಡು ಬಾರಿ ಭೇಟಿ ನೀಡಿದಾಗಲೂ ಅವರು ಶೇಷಾದ್ರಿ ಅಯ್ಯರ್ ರಸ್ತೆಯ ಶೇಷಾದ್ರಿ ಹೌಸ್ ನಲ್ಲಿ ತಂಗಿದ್ದರು ಎಂಬುದು ಮತ್ತೊಂದು ವಿಶೇಷ. ಅವತ್ತಿನ ಶೇಷಾದ್ರಿ ಹೌಸ್ ಇಂದು ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಾಗಿದೆ.

——-

key words : mysore-bangalore-road-widening-k.r.mill-building-demolished-gandhi-inagurated-k.r.mill-pre.independence