ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ – ಸಿಎಂ ಸಿದ್ದರಾಮಯ್ಯ.

ಬೆಂಗಳೂರು, ಅಕ್ಟೋಬರ್ 28,2023(www.justkannada.in):  ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯವನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ವಾಲ್ಮೀಕಿ ಜಯಂತಿಯ ಅಂಗವಾಗಿ ಇಂದು ವಿಧಾನಸೌಧದ  ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಹರ್ಷಿ  ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.

ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ  ಬೆಳಗಾವಿಯ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಡುವ ತೀರ್ಮಾನವನ್ನು ಕೈಗೊಳ್ಳಲಾಯಿತು. ಆದಕಾರಣ ಎಸ್ ಸಿ ಎಸ್ ಪಿ ಹಾಗೂ ಟಿಎಸ್ ಪಿ ಯೋಜನೆಯಡಿ ಹೆಚ್ಚು ಅನುದಾನ ಖರ್ಚು ಮಾಡಲು ಸಾಧ್ಯವಾಯಿತು. ಮೊದಲು ಈ ಯೋಜನೆಗಳಡಿ ಕೇವಲ 6 ಸಾವಿರ ಅನುದಾನ ಮೀಸಲಿಡಲಾಗುತ್ತಿತ್ತು. ಆದರೆ ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಈ ಮೊತ್ತವನ್ನು 6 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಿಗೆ ಮಾಡಲಾಯಿತು. ಹಿಂದಿನ ಸರ್ಕಾರದವರು ಈ ಮೊತ್ತವನ್ನು ಹೆಚ್ಚಿಸಲಿಲ್ಲ. ನಮ್ಮ ಸರ್ಕಾರ ಈ ವರ್ಷದ ಆಯವ್ಯಯದಲ್ಲಿ ಈ ವರ್ಗಗಳಿಗೆ 34 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

ಎಸ್ ಸಿ ಎಸ್ ಟಿ ಜನರಿಗೆ ಅನುದಾನ ರಾಜ್ಯಾಂಗ ಬದ್ಧ :

ರಾಜ್ಯದ ಒಟ್ಟು ಜನಸಂಖ್ಯೆಯ ಶೇ.17.1ರಷ್ಟು ಎಸ್ ಸಿ ಹಾಗೂ ಶೇ.7 ರಷ್ಟು ಎಸ್ ಟಿ ವರ್ಗಕ್ಕೆ ಸೇರಿದವರಿದ್ದಾರೆ. 2011ರ ಜನಗಣತಿ ಪ್ರಕಾರ, ಶೇ.24.1 ರಷ್ಟು ಎಸ್ ಸಿ ಹಾಗೂ ಎಸ್ ಟಿ ವರ್ಗದ ಜನಸಂಖ್ಯೆಯಿದೆ. ಈ ಜನಸಂಖ್ಯೆಗನುಗುಣವಾಗಿ ಎಸ್ ಸಿ ಎಸ್ ಟಿ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡುವ ಬಗ್ಗೆ ಕಾನೂನು ತಂದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ. ಯಾವುದೇ ಸರ್ಕಾರಗಳು ಬಂದರೂ ಈ ಕಾನೂನನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಈ ಕಾನೂನು ನಂತರ 2013 ರಿಂದ 2018ರವರೆಗೆ ನಮ್ಮ ಸರ್ಕಾರ ಒಟ್ಟು 88 ಸಾವಿರ ಕೋಟಿ ರೂ.ಗಳನ್ನು ಎಸ್ ಸಿ ಎಸ್ಟಿ ಜನರಿಗೆ ಮೀಸಲಿಡಲಾಗಿತ್ತು.  ಈ ಪ್ರಮಾಣದ ಜನಸಂಖ್ಯೆಗೆ ಈ ಅನುದಾನ ರಾಜ್ಯಾಂಗಬದ್ಧವಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಶಸ್ತಿ ವಿಜೇತರ ಸಾಧನೆಗಳು ಸ್ಪೂರ್ತಿಯಾಗಲಿ :

ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಶುಭಾಶಯಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋರಿದರು. ಈ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ಕನ್ನಡ ನಾಡಿನ ಜನತೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಪ್ರಶಸ್ತಿ ಪುರಸ್ಕೃತರ ಸಾಧನೆಗಳು ಎಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ರಾಜನಹಳ್ಳಿ ಗುರುಪೀಠದ   ಶ್ರೀ ವಾಲ್ಮೀಕಿ ಪ್ರಸಂನಾನಂದಪುರಿ ಸ್ವಾಮೀಜಿ , ಸಚಿವ  ಡಾ: ಹೆಚ್.ಸಿ.ಮಹದೇವಪ್ಪ,  ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಉಗ್ರಪ್ಪ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Key words: Establishment – separate -Ministry – Development –ST-  CM Siddaramaiah