ಬಂಡೀಪುರ ಅಭಯಾರಣ್ಯ ಮಾರ್ಗದಲ್ಲಿ ಸಂಚರಿಸುವ ಅಂತರರಾಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ನಿಗದಿ.

ಗುಂಡ್ಲುಪೇಟೆ,ಏಪ್ರಿಲ್,22,2023(www.justkannada.in):  ಬಂಡೀಪುರ ಅಭಯಾರಣ್ಯ ಮಾರ್ಗ ಸಂಚರಿಸುವ ಅಂತರ ರಾಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ನಿಗದಿ ಮಾಡಿ ಆದೇಶ ಹೊರಡಿಸಲಾಗಿದ್ದು, ಈ ಮೂಲಕ ಅಂತರರಾಜ್ಯ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಈಗ ಟೋಲ್ ಜೊತೆಗೆ ಬಂಡೀಪುರ ಪ್ರವೇಶಕ್ಕೂ ಶುಲ್ಕ ಕಟ್ಟಬೇಕಿದೆ.  ರಾತ್ರಿ 9 ಗಂಟೆಯಿಂದ  ಬೆಳಗ್ಗೆ 6 ಗಂಟೆವರಗೆ ಪ್ರವೇಶ ನಿಷೇದ ಒಂದು ಕಡೆಯಾದರೆ ಇನ್ನು ಮುಂದೆ ಬಂಡಿಪುರ  ಪ್ರವೇಶಕ್ಕೂ ಶುಲ್ಕ ಕಟ್ಟಬೇಕಿದೆ. ಬಂಡಿಪುರದ ಹುಲಿ ಸಂರಕ್ಷಿತ ಅರಣ್ಯದ ನಿರ್ದೇಶಕರು ಈ ಹೊಸ ಆದೇಶ ಹೊರಡಿಸಿದ್ದಾರೆ.

ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಅಂತರ ರಾಜ್ಯ ವಾಹನಗಳು ಸಂಚರಿಸುತ್ತಿದ್ದು, ವನ್ಯಜೀವಿ ಅಪಘಾತ ತಡೆಯಲು, ವೀಕ್ಷಣಾ ರೇಖೆ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಾಗೂ ಪ್ಲಾಸ್ಟಿಕ್ ಮುಕ್ತ ರಸ್ತೆಯಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಬಂಡಿಪುರದ ಮಾರ್ಗ ಮಧ್ಯೆ ಹಾದುಹೋಗುವ 4 ಚೆಕ್ ಪೋಸ್ಟ್ ಗಳಲ್ಲಿ ಪ್ರವೇಶ ಶುಲ್ಕ ಕಟ್ಟಲು ವ್ಯವಸ್ಥೆ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 181 ಗುಂಡ್ಲುಪೇಟೆ -ಊಟಿ  ರಸ್ತೆ ಮಾರ್ಗ ಮೇಲುಕಾಮನಹಳ್ಳಿ ಮತ್ತು ಕೆಕ್ಕನಹಳ್ಳ ಚೆಕ್ ಪೋಸ್ಟ್ , ರಾಷ್ಟ್ರೀಯ ಹೆದ್ದಾರಿ 766 ಗುಂಡ್ಲುಪೇಟೆಯಿಂದ ಕ್ಯಾಲಿಕಟ್ ರಸ್ತೆ ಮಾರ್ಗ ಮೂಲೆಹೊಳೆ ಚೆಕ್ ಪೋಸ್ಟ್ ಮತ್ತು ಮದ್ದೂರು ಚೆಕ್ ಪೋಸ್ಟ್ ಬಳಿ ಶುಲ್ಕ ಕಟ್ಟಲು ಸೂಚನೆ ನೀಡಿದ್ದಾರೆ.  ಲಘು ವಾಹನಗಳಿಗೆ ₹ 20, ಭಾರಿ ವಾಹನಗಳಿಗೆ ₹ 50 ದರ ನಿಗದಿ ಮಾಡಿ ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.  ಕರ್ನಾಟಕ ನೋಂದಣಿ ಹೊರತುಪಡಿಸಿ ಅನ್ಯರಾಜ್ಯದ ವಾಹನಗಳಿಗೆ ಅರಣ್ಯ ಇಲಾಖೆ ಶುಲ್ಕ ವಿಧಿಸಿದೆ.

Key words: entry fee –interstate- vehicles – Bandipur Sanctuary -route.