ಮೈಸೂರು,ಸೆಪ್ಟಂಬರ್, 15,2026 (www.justkannada.in): ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿ ಹಾಡುವಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಖಂಡಿಸಿ ಇದೇ ಸೆಪ್ಟೆಂಬರ್ 15 ರಿಂದ 5 ದಿನಗಳ ಕಾಲ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಿಂದ 2 ಕಿ.ಮೀ. ಪಾದಯಾತ್ರೆ ನಡೆಸಲಾಗುತ್ತಿದೆ. ಅದರಂತೆ ಮೈಸೂರು ವಿಭಾಗದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸೆಪ್ಟಂಬರ್ 15 ರಿಂದ 19 ನೇ ತಾರೀಖನವರೆಗೆ ಪಾದಯಾತ್ರೆಯನ್ನು ನಡೆಸಲಾಗುತ್ತದೆ ಎಂದು ಮೈಸೂರು ವಿಭಾಗದ ಬಿಜೆಪಿ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾ.ಈಸ.ಸಿ ನಿಂಗರಾಜ್ ಗೌಡ, ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಖಂಡನೀಯ. ಸರ್ಕಾರದ ನಿರ್ಧಾರ ದುರದೃಷ್ಟಕರವಾಗಿದ್ದು, ಇದು ವಂದೇ ಮಾತರಂ ಗೀತೆಗೆ ಮಾತ್ರವದಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಘೋರ ಅವಮಾನವಾಗಿದೆ.
ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ “ರಾಷ್ಟ್ರೀಯ ಗೌರವಕ್ಕೆ ಅವಮಾನ ತಿದ್ದುಪಡಿ ತಡೆಗಟ್ಟುವಿಕೆ (ತಿದ್ದುಪಡಿ) ಕಾಯ್ದೆ 2026 ಅನ್ನು ಅನುಮೋದಿಸಿ, ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಸಂವಿಧಾನತ್ಮಕವಾಗಿ ಕಡ್ಡಾಯಗೊಳಿಸಿದೆ. ಈ ಕಾನೂನಿನ ಮೂಲಕ ರಾಷ್ಟ್ರಗೀತೆಗೆ ಇರುವ ಸಮಾನ ಗೌರವ ಮತ್ತು ಸ್ಥಾನಮಾನವನ್ನು ವಂದೇ ಮಾತರಂಗೆ ನೀಡಲಾಗಿದೆ.
ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ; ಅದು ಭಾರತದ ಸ್ವಾತಂತ್ರ್ಯ ಹೋರಾಟದ ಚೈತನ್ಯ, ತ್ಯಾಗ ಮತ್ತು ರಾಷ್ಟ್ರಭಕ್ತಿಯ ಪ್ರತೀಕ. ಅಂತಹ ಐತಿಹಾಸಿಕ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸುವುದು, ಅದರ ಪರಂಪರೆ ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಸ್ವಂತ ನಿರ್ಧಾರ ಕೈಗೊಳ್ಳುವ ರಾಜಕೀಯ ನೈತಿಕತೆಯನ್ನೇ ಕಳೆದುಕೊಂಡಿದೆ. ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆಯಬೇಕಾದ ದಯನೀಯ ಸ್ಥಿತಿಗೆ ತಲುಪಿದೆ. ಹೀಗಾಗಿ ತುಷ್ಟೀಕರಣ ರಾಜಕಾರಣಕ್ಕಾಗಿ ವಂದೇ ಮಾತರಂ ಅನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿದೆ ಎಂದು ಕಿಡಿಕಾರಿದ್ದಾರೆ.
ಅಲ್ಪಸಂಖ್ಯಾತರ ಮತಗಳ ಪ್ರಶ್ನೆ ಬಂದಾಗ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ತಮ್ಮ ಅವಿವೇಕಿತನದ ನಿರ್ಧಾರವನ್ನು ವಿತಂಡವಾದದ ಮೂಲಕ ಸಮರ್ಥಿಸಿಕೊಳ್ಳುವುದು ಕಾಂಗ್ರೆಸ್ ನ ಓಲೈಕೆ ರಾಜಕಾರಣದ ಮತ್ತೊಂದು ಮುಖವಾಗಿದೆ. ಇಂದು ವಂದೇ ಮಾತರಂಗೆ ಕತ್ತರಿ ಹಾಕುವವರು ನಾಳೆ ಇದೇ ತರ್ಕವನ್ನು ನಾಡಗೀತೆಯ ಮೇಲೂ ಅನ್ವಯಿಸುತ್ತಾರೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯಲ್ಲಿಯೂ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮಹಾಪುರುಷರ ಉಲ್ಲೇಖಗಳಿವೆ. ನಾಳೆ ಅಸಂಖ್ಯಾತರು ಆ ಉಲ್ಲೇಖಗಳಿಗೆ ಆಕ್ಷೇಪ ವ್ಯಕ್ತಪಡಿಸಿದರೆ, ನಾಡಗೀತೆಯ ಸಾಲುಗಳಿಗೂ ಕತ್ತರಿ ಹಾಕುತ್ತೀರಾ? ಕಾಂಗ್ರೆಸ್ ಸರ್ಕಾರ ಇದಕ್ಕೆ ರಾಜ್ಯದ ಜನತೆಗೆ ಉತ್ತರಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಸಂಕೇತವಾದ ವಂದೇ ಮಾತರಂಗೆ ರಾಜ್ಯ ಸರ್ಕಾರ ಮಾಡುತ್ತಿರುವ ಅಪಮಾನದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯ ಭಂಗ ಉಂಟಾದರೆ, ಅದಕ್ಕೆ ಸಂಪೂರ್ಣ ಹೊಣೆ ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಈ.ಸಿ ನಿಂಗರಾಜುಗೌಡ ಎಚ್ಚರಿಸಿದ್ದಾರೆ.
Key words: Padayatra, Vande Mataram, verses, Government, Dr. E.C. Ningaraj Gowda







