ಒಂದೇ ವೇದಿಕೆಯಲ್ಲಿ ಡಿಕೆಶಿ ಮತ್ತು ಅಶ‍್ವಥ್ ನಾರಾಯಣ್: ನಿರ್ಮಲಾನಂದನಾಥ ಶ್ರೀಗಳಿಂದ ಕಿವಿಮಾತು..

ಬೆಂಗಳೂರು,ಜೂನ್,27,2023(www.justkannada.in):  ರಾಜಕೀಯ ಬದ್ಧ ವೈರಿಗಳಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್  ಅವರು ಇಂದು  ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಬೆಂಗಳೂರಿನ ಸದಾಶಿವನಗರದ ರಮಣಮಹರ್ಷಿ ಉದ್ಯಾನವನದಲ್ಲಿ ನಡೆದ 514ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ  ಉಭಯ ನಾಯಕರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು.  ಈ ವೇಳೆ ಪರಸ್ಪರ ರಾಜಕೀಯವಾಗಿ ಬೈದಾಡಿಕೊಳ್ಳದಂತೆ ಡಿಕೆ ಶಿವಕುಮಾರ್ ಹಾಗೂ ಅಶ್ವತ್ಥ್ ನಾರಾಯಣ ಅವರಿಗೆ ನಿರ್ಮಲಾನಂದನಾಥ್ ಶ್ರೀಗಳು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಅಶ್ವತ್ಥ್ ನಾರಾಯಣ್, ನಾನು ಯಾವುದೇ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿಲ್ಲ​. ನಾಡಿಗೆ ಒಳಿತು ಮಾಡಬೇಕೆಂದು ರಾಜಕೀಯಕ್ಕೆ ಬಂದಿದ್ದೇವೆ. ಡಿ.ಕೆ.ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ. ರಾಜಕೀಯದಲ್ಲಿ ಸುಮ್ಮನೆ ಇದ್ದರೆ ಆಗುತ್ತಾ. ಪ್ರೇಕ್ಷಕರು ಅಂತಾರೆ, ಅದಕ್ಕೆ ಏನು ಹೇಳಬೇಕೋ ಹೇಳಿದ್ದೇನೆ ಎಂದರು.

ರಾಮನಗರಕ್ಕೆ ಯಾವ ಸರ್ಕಾರ ಕೊಡದಷ್ಟು ಯೋಜನೆ ಕೊಟ್ಟಿದ್ದೇವೆ. ರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸವೂ ಗೊತ್ತಾಗಲಿದೆ. ಕೆಂಪೇಗೌಡರು ಮಾಡಿದ 5% ಅಭಿವೃದ್ಧಿಯನ್ನ ಈ ಸರ್ಕಾರ ಮಾಡಲಿ. ನಾವು ರಾಮನಗರ ಅಭಿವೃದ್ಧಿ ಮಾಡಿದ್ದೇವೆ ಎಂದು ಮತ್ತೆ ಡಿಕೆ ಬ್ರದರ್ಸ್ ಗೆ ಪರೋಕ್ಷ ಟಾಂಗ್ ನೀಡಿದರು.

Key words: DK Shivakumar -Ashwalath Narayan Nirmalanandanath Shri-Kempegowda jayanthi