ಕೆ.ಎಸ್.ಟಿ.ಡಿ.ಸಿಯಿಂದ ಒಂದು ದಿನದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ದರ್ಶನ ಪ್ಯಾಕೇಜ್

ಬೆಂಗಳೂರು, ಮಾ.22: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಆಯೋಜಿಸುತ್ತಿರುವ ವ್ಯವಸ್ಥಿತ ಪ್ರವಾಸಗಳಲ್ಲೊಂದಾದ ದಕ್ಷಿಣ ಕರ್ನಾಟಕ ಪ್ರವಾಸದ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನಕ್ಕೆ ಶೀಘ್ರ ದರ್ಶನ ವ್ಯವಸ್ಥೆ ಕಲ್ಪಿಸಿ, ಬೆಂಗಳೂರು – ಧರ್ಮಸ್ಥಳ – ಕುಕ್ಕೆ ಸುಬ್ರಮಣ್ಯ ಸ್ಥಳಗಳಿಗೆ ಒಂದು ದಿನದ ವ್ಯವಸ್ಥಿತ ಪ್ರವಾಸವನ್ನು ಪ್ರತಿ ದಿನ ಆಯೋಜನೆ ಮಾಡಲು ನಿರ್ಧರಿಸಲಾಗಿದೆ.

ಈ ಪ್ರವಾಸವು ಪ್ರತಿ ದಿನ ರಾತ್ರಿ 10.00 ಗಂಟೆಗೆ ಬೆಂಗಳೂರಿನ ಯಶವಂತಪುರ ಕಛೇರಿಯಿಂದ ಹೊರಟು ಮರು ದಿನ ಬೆಳಗ್ಗೆ 6.00 ಗಂಟೆಗೆ ಉಜಿರೆ ತಲುಪಿ ಶ್ರೀ ಸೂರ್ಯ ಸದಾಶಿವ ದೇವಸ್ಥಾನವನ್ನು ವೀಕ್ಷಿಸಿದ ನಂತರ ಧರ್ಮಸ್ಥಳ ತಲುಪಿ 8.00 ರಿಂದ 11.00 ಗಂಟೆಗೆ ಶ್ರೀ ಮಂಜುನಾಥಸ್ವಾಮಿ ಶೀಘ್ರ ದರ್ಶನ – 12.30 ಕುಕ್ಕೆ ಸುಬ್ರಮಣ್ಯ – 3.30ಕ್ಕೆ ಕುಕ್ಕೆ ಸುಬ್ರಮಣ್ಯದಿಂದ ಹೊರಟು ರಾತ್ರಿ 10.00 ಗಂಟೆಗೆ ಬೆಂಗಳೂರು ತಲುಪುವುದು. ಈ ಪ್ರವಾಸದ ದರ ರೂ.2550/- (ಪ್ರತಿ ಒಬ್ಬರಿಗೆ) ಗಳನ್ನು ನಿಗದಿಪಡಿಸಲಾಗಿರುತ್ತದೆ.

ಈ ಸೇವೆಯ ಸದುಪಯೋಗ ಪಡೆಯಲಿಚ್ಛಿಸುವ ಪ್ರವಾಸಿಗರು ನಿಗಮದ ಯಶವಂತಪುರ ಕೇಂದ್ರ ಕಛೇರಿಯ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೌಂಟರ್ ಹಾಗೂ ರೆಡ್‌ಬಸ್ ಪೋರ್ಟಲ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದಾಗಿರುತ್ತದೆ ಎಂದು ನಿಗಮದ ಅಧ್ಯಕ್ಷೆ ಶೃತಿ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ
ಆನ್‌ಲೈನ್ ಬುಕ್ಕಿಂಗ್ : www.kstdc.co
ದೂರವಾಣಿ ಸಂಖ್ಯೆ : 080-4334 4334/35,
+91 8970650070/ +91 8970650075
ಜಾಲತಾಣ/ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ.