ಮೈಸೂರು ವಿವಿ ನಿವೃತ್ತ ನೌಕರರಿಗೆ ಪಿಂಚಣಿ ವಿಳಂಬ ಅತ್ಯಂತ ಕಳವಳಕಾರಿ-ಡಾ. ಟಿ.ಆರ್. ಚಂದ್ರಶೇಖರ್

ಮೈಸೂರು,ಡಿಸೆಂಬರ್,29,2025 (www.justkannada.in): ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಅಧ್ಯಾಪಕರು ಮತ್ತು ನೌಕರರಿಗೆ ತಿಂಗಳ ಪಿಂಚಣಿ ಪಾವತಿ ನಿರಂತರವಾಗಿ ವಿಳಂಬವಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು  ಸಿಂಡಿಕೇಟ್ ಸದಸ್ಯ ಡಾ. ಟಿ.ಆರ್. ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಾ. ಟಿ.ಆರ್. ಚಂದ್ರಶೇಖರ್,  ದಶಕಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ನಾಗರಿಕರು ಇಂದು ಜೀವನಾವಶ್ಯಕತೆಗಳು ಮತ್ತು ವೈದ್ಯಕೀಯ ವೆಚ್ಚಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು 109 ವರ್ಷಗಳ ಇತಿಹಾಸವಿರುವ ನಮ್ಮ ಮೈಸೂರು  ವಿಶ್ವವಿದ್ಯಾಲಯದ ಆಡಳಿತದ ಗಂಭೀರ ವೈಫಲ್ಯವನ್ನು ಬಹಿರಂಗಪಡಿಸುತ್ತದೆ. ಪಿಂಚಣಿ ಯಾವುದೇ ದಾನವಲ್ಲ ಅದು ನಿವೃತ್ತ ನೌಕರರ ಕಾನೂನುಬದ್ಧ ಹಕ್ಕು ಮತ್ತು ವಿಳಂಬಿತ ವೇತನ,  ಪಿಂಚಣಿ ಪಾವತಿಯಲ್ಲಿ ವಿಳಂಬವಾಗುವುದು.  ಭಾರತ ಸಂವಿಧಾನದ ಕಲಂ 21 (ಜೀವನ ಮತ್ತು ಗೌರವದ ಹಕ್ಕು) ಉಲ್ಲಂಘನೆಯಾಗುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್ ಪುನಃ ಪುನಃ ಸ್ಪಷ್ಟಪಡಿಸಿದೆ.

ವಿಶ್ವವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಕುಲಪತಿಗಳ ಕರ್ತವ್ಯವೇ ಪಿಂಚಣಿ ಬಾಧ್ಯತೆಗಳಿಗೆ ಮೊದಲ ಆದ್ಯತೆ ನೀಡುವುದು ಮತ್ತು ಶಾಶ್ವತ ಪರಿಹಾರ ರೂಪಿಸುವುದಾಗಿದೆ. “ಆಂತರಿಕ ನಿಧಿಗಳ ಕೊರತೆ”ಎಂಬ ಕಾರಣವನ್ನು ಮುಂದಿಟ್ಟುಕೊಳ್ಳುವುದು ಆಡಳಿತದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ. ಇಂದು ಅನೇಕ ನಿವೃತ್ತರು ತಿಂಗಳು ತಿಂಗಳೂ ಪಿಂಚಣಿಗಾಗಿ ನಿರೀಕ್ಷೆಯಲ್ಲೇ ಬದುಕುತ್ತಿದ್ದಾರೆ. ವೈದ್ಯಕೀಯ ವೆಚ್ಚಗಳಿಗೆ ಸಾಲ ಮಾಡಬೇಕಾದ ಸ್ಥಿತಿಗೆ ತಲುಪಿದ್ದಾರೆ. ತಮ್ಮ ಜೀವನಪೂರ್ತಿ, ತಮ್ಮ ಸೇವೆಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆಯೊಂದಿಗೆ ನೋವಿನಲ್ಲಿ ಬದುಕುತ್ತಿದ್ದಾರೆ. ಈ ಪರಿಸ್ಥಿತಿ ಮೈಸೂರು ವಿಶ್ವವಿದ್ಯಾಲಯದ ನೈತಿಕತೆ, ಮಾನವೀಯತೆ ಮತ್ತು ಆಡಳಿತ ಸಾಮರ್ಥ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ನಿವೃತ್ತ ಅಧ್ಯಾಪಕರು ಮತ್ತು ನೌಕರರನ್ನು ನಿರ್ಲಕ್ಷಿಸುವ ಯಾವುದೇ ಸಂಸ್ಥೆ ತನ್ನದೇ ಇತಿಹಾಸ ಮತ್ತು ಗೌರವವನ್ನು ಮರೆತಂತೆ ಆಗುತ್ತದೆ ಎಂಬ ಅರಿವು ಆಡಳಿತ ನಡೆಸುವವರಿಗೆ ಇರಬೇಕಾದದ್ದು ನೈತಿಕ ಜವಾಬ್ದಾರಿಯಾಗಿರುತ್ತದೆ ಎಂದು ಡಾ. ಟಿ.ಆರ್. ಚಂದ್ರಶೇಖರ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪಿಂಚಣಿದಾರರ ಹಿತದೃಷ್ಟಿಯಿಂದ ತಕ್ಷಣ, ನಿಯಮಿತ ಮತ್ತು ಸಮಯೋಚಿತ ಪಿಂಚಣಿ ಪಾವತಿಯನ್ನು ಖಚಿತಪಡಿಸಬೇಕು ಮತ್ತು ಪಿಂಚಣಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಸ್ಪಷ್ಟ ಕಾರ್ಯಯೋಜನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.  ಎನ್ ಕೆ ಲೋಕನಾಥ್ ಅವರಿಗೆ  ಆಗ್ರಹಿಸಿದ್ದಾರೆ.

Key words: Delay, pension, retired, employees, Mysore University, Dr. T.R. Chandrashekhar