Thursday, August 13, 2026

BDA Apartments

Home Crime ಹುಣಸೂರು ಚಿನ್ನದಂಗಡಿ ದರೋಡೆ ಕೇಸ್: 5 ತಂಡ ರಚನೆ: ಆರೋಪಿಗಳ ಭಾವಚಿತ್ರ ಆಧರಿಸಿ ತಲಾಶ್

ಹುಣಸೂರು ಚಿನ್ನದಂಗಡಿ ದರೋಡೆ ಕೇಸ್: 5 ತಂಡ ರಚನೆ: ಆರೋಪಿಗಳ ಭಾವಚಿತ್ರ ಆಧರಿಸಿ ತಲಾಶ್

ಮೈಸೂರು,ಡಿಸೆಂಬರ್,29,2025 (www.justkannada.in): ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸೆರೆಗಾಗಿ 5 ತಂಡಗಳನ್ನು ರಚನೆ ಮಾಡಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದು  ಆರೋಪಿಗಳ ಭಾವಚಿತ್ರ ಆಧರಿಸಿ ತಲಾಶ್ ನಡೆಸುತ್ತಿದ್ದಾರೆ.

ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ‌2.30ರ  ವೇಳೆಯಲ್ಲಿ ಹುಣಸೂರಿನ ಪಟ್ಟಣದಲ್ಲಿ ಜ್ಯೂವಲರಿ ಶಾಪ್ ಗೆ 5 ಜನರ ತಂಡ ನುಗ್ಗಿ ಸಿಬ್ಬಂದಿಗೆ ಗನ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಎಷ್ಟು ಮೌಲ್ಯದ ವಜ್ರ ಚಿನ್ನಾಭರಣ ದರೋಡೆ ಆಗಿದೆ ಎಂಬ ಮಾಹಿತಿ ಲಭ್ಯವಿಲ್ಲ. ಅಂಗಡಿಯವರ ಚಿನ್ನದ ದಾಸ್ತಾನು ಹಾಗೂ ಮಿಸ್ಸಿಂಗ್ ಲೆಕ್ಕಾಚಾರದ ನಂತರ  ಮೌಲ್ಯ ಗೊತ್ತಾಗಲಿದೆ.

ಇನ್ನು ಆರೋಪಿಗಳ ಪತ್ತೆಗಾಗಿ  5 ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ 5 ಪೊಲೀಸರ ತಂಡ ರಚನೆ ಮಾಡಲಾಗಿದ್ದು, ಸಿಸಿ ಟಿವಿ ದೃಶ್ಯದಲ್ಲಿ ಆರೋಪಿಗಳ ಮುಖಗಳು ಪತ್ತೆ ಮಾಡಲಾಗಿದೆ. ಆರೋಪಿಗಳು ಎಲ್ಲಿಯವರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ18 ಚಕ್‌ಪೋಸ್ಟ್ ಗಳಿದ್ದು  ಎಲ್ಲ ಕಡೆಗಳಲ್ಲೂ ಪೊಲೀಸರು ಅಲರ್ಟ್ ಆಗಿದ್ದಾರೆ. ದರೋಡೆ ಮಾಡಿ ಖದೀಮರು ಕೇರಳ ಕಡೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದಂಗಡಿ ಮ್ಯಾನೇಜರ್, ಸಿಬ್ಬಂದಿ ಕೈವಾಡ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದು ಪರಿಚಿತರಿಂದಲೇ ಕೃತ್ಯ ನಡೆಸಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳ ಭಾವಚಿತ್ರ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಭಾವಚಿತ್ರ ಆಧರಿಸಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.  ಐವರು ಆರೋಪಿಗಳು ಹಿಂದಿ ಭಾಷೆ ಮಾತನಾಡುತ್ತಿದ್ದರು. ನಂಬರ್ ಪ್ಲೇಟ್ ಇಲ್ಲದ ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಕೈನಲ್ಲಿ ಎರಡೆರಡು ಪಿಸ್ತೂಲ್ ಹಿಡಿದು ಒಳನುಗ್ಗಿದ್ದರು. ದರೋಡೆ ಬಳಿಕ ಕ್ಷಣಾರ್ಧದಲ್ಲಿ ಚಿನ್ನಾಭರಣ ಕದ್ದು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳು ಎಸ್ಕೇಪ್ ಆಗಿದ್ದರು.

ಬೈ ಪಾಸ್ ರಸ್ತೆಯಲ್ಲಿ ಮಡಿಕೇರಿ ರಸ್ತೆ ಕಡೆ ದುಷ್ಕರ್ಮಿಗಳು ತೆರಳಿದ್ದು, ಚಿನ್ನದಂಗಡಿಯ ಮಾಲೀಕರು ಕೇರಳ ಮೂಲದವರಾದ ಕಾರಣ ಕೇರಳದತ್ತ ತೆರಳಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಪೊಲೀಸರ ಒಂದು ಕೇರಳದತ್ತ ಮುಖ ಮಾಡಿದರೆ ಮತ್ತೊಂದು ತಂಡ ಮಡಿಕೇರಿಯತ್ತ ತೆರಳಿದೆ.  ಇನ್ನು  ಮೈಸೂರು ಸುತ್ತಲೂ ಒಂದು ತಂಡದಿಂದ ತಲಾಶ್ ನಡೆಸುತ್ತಿದ್ದರೇ ಹಾಸನದತ್ತ ಒಂದು ತಂಡ ತೆರಳಿದೆ. ಹುಣಸೂರಿನ ಚಿನ್ನದ ಅಂಗಡಿ ಸುತ್ತು ಮುತ್ತ ಮತ್ತೊಂದು ತಂಡ ತನಿಖೆ ನಡೆಸುತ್ತಿದೆ.

Key words: Hunsur, gold shop, robbery case, 5 teams, accused