ಕಾಂಗ್ರೆಸ್ ಲಿಂಗಾಯತರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ- ನಳಿನ್ ಕುಮಾರ್ ಕಟೀಲ್ ಸವಾಲು.

ಮಂಗಳೂರು,ಏಪ್ರಿಲ್,18,2023(www.justkannada.in): ಬಿಜೆಪಿ ಮಾತ್ರ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತದೆ. ಬೇರೆ ಯಾವ ಪಾರ್ಟಿಗೂ ಆ ತಾಕತ್ತಿಲ್ಲ, ಕಾಂಗ್ರೆಸ್ ಲಿಂಗಾಯತರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ನಾವು ಯಡಿಯೂರಪ್ಪ ಮಾರ್ಗದರ್ಶನ ಮತ್ತು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ.‌  ಕಾಂಗ್ರೆಸ್ ಗೆ ಬಹಳ ಕ್ಷೇತ್ರದಲ್ಲಿ ಅಭ್ಯರ್ಥಿ ಕೊರತೆ ಇದೆ. ಡಿಸೆಂಬರ್ ನಲ್ಲೇ ಅವರು ಆಯ್ಕೆ ಪ್ರಕ್ರಿಯೆ ಆರಂಭಿಸಿದರೂ ಈವರೆಗೆ ಆಗಿಲ್ಲ. ನಾವು ಹತ್ತು ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮುಗಿಸಿದ್ದೇವೆ. ನಾಲ್ಕು ತಿಂಗಳಾದರೂ ಅವರಿಗೆ ಅಭ್ಯರ್ಥಿ ಕೊರತೆಯಿದೆ, ನಮ್ಮ ಪಕ್ಷದಲ್ಲಿ ಬಂಡಾಯವೇಳುವ ಅಭ್ಯರ್ಥಿಗಳನ್ನು ಕಾಯುತ್ತಿದ್ದಾರೆ ಎಂದು ಟೀಕಿಸಿದರು.

ನನಗೆ ಟಿಕೆಟ್ ಕೈತಪ್ಪಲು  ಬಿ.ಎಲ್.ಸಂತೋಷ್  ಕಾರಣ ಎಂಬ ಜಗದೀಶ್ ಶೆಟ್ಟರ್ ಆರೋಪ ಕುರಿತು ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ಜಗದೀಶ್ ಶೆಟ್ಟರ್ ಹಿರಿಯರ ಮನವೊಲಿಕೆ ನಂತರವೂ ಬಿಜೆಪಿ ಬಿಟ್ಟಿದ್ದಾರೆ. ಕೊನೆಯ ತನಕ ಪ್ರಯತ್ನ ಆಗಿದೆ. ನಮ್ಮಲ್ಲಿ ಪಾರ್ಲಿಮೆಂಟರಿ ಬೋರ್ಡ್, ಎಲೆಕ್ಷನ್ ಕಮಿಟಿ ನಿರ್ವಹಣೆ ಮಾಡಿ ಅಭ್ಯರ್ಥಿ ಆಯ್ಕೆ ಆಗುತ್ತದೆ. ಯಾರೇ ಒಬ್ಬರು ನಮ್ಮಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲ್ಲ. ಎಲ್ಲಾ ಒಮ್ಮತದ ಅಭಿಪ್ರಾಯದ ಮೇಲೆ ಚುನಾವಣಾ ಪ್ರಕ್ರಿಯೆ ನಡೆಯುತ್ತದೆ ಎಂದರು.

Key words: Congress – announce -Lingayat -CM candidate- Nalin Kumar Kateel -challenge.