ಕಾಂಗ್ರೆಸ್ ಕನಿಷ್ಠ 135-140 ಸ್ಥಾನಗಳನ್ನು ಗೆದ್ಧು, ಕೋಮುವಾದಿಗಳನ್ನು ಅಧಿಕಾರದಿಂದ ಕಿತ್ತು ಬಿಸಾಕಬೇಕು- ಸಿದ್ಧರಾಮಯ್ಯ ಕರೆ.

ಬೆಂಗಳೂರು,ಏಪ್ರಿಲ್,1,2022(www.justkannada.in): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್  ಪಕ್ಷ ಕನಿಷ್ಠ 135-140 ಸ್ಥಾನಗಳನ್ನು ಗೆದ್ಧು, ಈ ಮೂಲಕ ಕೋಮುವಾದಿಗಳನ್ನು ಅಧಿಕಾರದಿಂದ ಕಿತ್ತು ಬಿಸಾಕಬೇಕು  ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕರೆ ನೀಡಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಆಡಿಟೋರಿಯಂನ ರಾಜೀವ್ ಭವನದಲ್ಲಿ ಎಐಸಿಸಿಯ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು..

ರಾಜ್ಯದಲ್ಲಿ ಬಿಜೆಪಿಯ ಅನೈತಿಕ ಸರ್ಕಾರವಿದೆ. ಬಿಜೆಪಿ ಪಕ್ಷ 2008, 2018 ಈ ಎರಡೂ ಬಾರಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. 2008 ರಲ್ಲಿ ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಅವರು ಅಧಿಕಾರ ಹಿಡಿದರು, ಮತ್ತೆ 2018 ರಲ್ಲಿ ಬಹುಮತ ಸಾಬೀತು ಮಾಡಲಾಗದೆ ಒಂದೇ ವಾರಕ್ಕೆ ರಾಜೀನಾಮೆ ನೀಡಿ, ಆ ನಂತರ ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಈ ಸರ್ಕಾರದ ಅವಧಿಯಲ್ಲಿ ಎರಡು ವರ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು, ಈಗ ಬಸವರಾಜ ಬೊಮ್ಮಾಯಿ ಆ ಸ್ಥಾನದಲ್ಲಿ ಇದ್ದಾರೆ. ಇದೊಂದು ಜನವಿರೋಧಿ, ಭ್ರಷ್ಟ ಸರ್ಕಾರ.

ದೇಶದ ಯುವಕರು, ಮಹಿಳೆಯರು, ಮಕ್ಕಳು, ಬಡವರು, ದಲಿತರು, ಹಿಂದುಳಿದ ಸಮುದಾಯಗಳ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಾಗಲೀ, ರಾಜ್ಯದ ಮುಖ್ಯಮಂತ್ರಿಯಾಗಲೀ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲ್ಲ. ಜನರ ಸಮಸ್ಯೆಗಳ ಬದಲಾಗಿ ಸಮಾಜವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಿರುವುದರಿಂದ ಹೆಚ್ಚು ಹೆಚ್ಚು ಕೋಮು ವೈಷಮ್ಯದ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ನಾವು ಸಂವಿಧಾನವನ್ನು ಧರ್ಮವಾಗಿ ನಂಬಿರುವವರು, ನಮಗೆ ಸಂವಿಧಾನವೇ ಸಂಜೀವಿನಿ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ ಆಶಯಗಳಂತೆ ಜೀವನ ಮಾಡಬೇಕು ಎಂದು ಸಿದ್ಧರಾಮಯ್ಯ ಹೇಳಿದರು.

ರಾಜ್ಯ ಬಿಜೆಪಿ ಸರ್ಕಾರ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವಂತಾ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಮೊದಲಿಗೆ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದರು, ಆ ನಂತರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದರು, ಈಗ ಹಿಜಾಬ್, ಭಗವದ್ಗೀತೆ, ಹಲಾಲ್ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ, ಬಹುತ್ವದ ಬಗ್ಗೆ ಗೌರವ ಇಲ್ಲದ ಕಾರಣಕ್ಕೆ ಬಿಜೆಪಿಯವರು ಇಂತಹಾ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ಆ ಮೂಲಕ ಯುವಕರ ಮನಸ್ಸಲ್ಲಿ ದ್ವೇಷದ ವಿಷಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಸಂವಿಧಾನದಲ್ಲಿ ನಂಬಿಕೆ ಮತ್ತು ಬದ್ಧತೆಯನ್ನು ಹೊಂದಿರುವ ಪಕ್ಷ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಹಿಷ್ಣುತೆ, ಸಹಬಾಳ್ವೆ, ಸರ್ವಧರ್ಮ ಸಮನ್ವಯತೆಯ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಹಿಜಾಬ್ ಒಂದು ವಿವಾದವಾಗುವಂತಾ ವಿಷಯವೇ ಆಗಿರಲಿಲ್ಲ.‌ ನೂರಾರು ವರ್ಷಗಳಿಂದ ಮುಸ್ಲಿಂ ಸಮುದಾಯದವರು ಆಚರಿಸಿಕೊಂಡು ಬಂದ ಪದ್ಧತಿ ಆಗಿತ್ತು. ಸರ್ಕಾರ ಮನಸ್ಸು ಮಾಡಿದ್ದರೆ ಆರಂಭದಲ್ಲೇ ವಿವಾದವನ್ನು ಬಗೆಹರಿಸಿ, ದೇಶಾದ್ಯಂತ ವ್ಯಾಪಿಸದಂತೆ ತಡೆಯಬಹುದಿತ್ತು. ಆರ್.ಎಸ್.ಎಸ್, ಭಜರಂಗದಳ, ಹಿಂದೂ ಮಹಾಸಭಾದವರು ಸರ್ಕಾರದ ಕುಮ್ಮಕ್ಕಿನಿಂದ ದೊಡ್ಡ ವಿಷಯವನ್ನಾಗಿ ವಿದ್ಯಾರ್ಥಿಗಳ ಮುಂದಿಟ್ಟು, ಮುಸ್ಲಿಮರನ್ನು ಖಳನಾಯಕರನ್ನಾಗಿ ಬಿಂಬಿಸಿದ್ದಾರೆ. ಇದರಲ್ಲಿ ಎಸ್.ಡಿ.ಪಿ.ಐ ಕುಮ್ಮಕ್ಕು ಕೂಡ ಇದೆ. ಈ ಕಾರಣಕ್ಕಾಗಿ ಕೋಮು ಸೌಹಾರ್ದತೆ ಹಾಳು ಮಾಡುತ್ತಿರುವ ಈ ಎಲ್ಲಾ ಸಂಘಟನೆಗಳನ್ನು ನಿಷೇಧಿಸಿ ಎಂದು ಸದನದಲ್ಲಿ ಹೇಳಿದ್ದೆ. ಈ ಕೆಲಸವನ್ನು ಸರ್ಕಾರ ಮಾಡಲ್ಲ, ಕಾರಣ ಈ ಎಲ್ಲಾ ಸಂಘಟನೆಗಳು ಇದ್ದಾಗ ಮಾತ್ರ ಸಮಾಜದಲ್ಲಿ ಬಾಂಧವ್ಯವನ್ನು ಹಾಳು ಮಾಡಲು ಸಾಧ್ಯವಾಗುತ್ತೆ. ಮತ ದ್ರುವೀಕರಣಕ್ಕಾಗಿ ಈ ಎಲ್ಲಾ ವಿಚಾರಗಳನ್ನು ಮುಂದಿನ ಒಂದು ವರ್ಷಗಳವರೆಗೆ ಜನರ ಮುಂದಿಡುವ ಕೆಲಸ ಬಿಜೆಪಿಯವರು ಮಾಡುತ್ತಾರೆ. ಕಾಂಗ್ರೆಸಿಗರಾದ ನಾವು ಸಮಾಜದ ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಶೋಷಿತ ಜನರಿಗೆ ರಕ್ಷಣೆ ಕೊಡಬೇಕು. ಈ ವಿಚಾರ ಮಾತಾಡಿದ್ರೆ ಯಾರೇನು ತಪ್ಪು ತಿಳಿಯುತ್ತಾರೋ ಎಂಬ ಆಲೋಚನೆಗಳಿದ್ದರೆ ಅದನ್ನು ನಾವೆಲ್ಲ ಮೊದಲು ಬಿಡಬೇಕು. ನಮಗೆ ಜಾತ್ಯಾತೀತತೆಯಲ್ಲಿ ಸ್ಪಷ್ಟತೆ ಇರಬೇಕು ಎಂದು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಈ ದೇಶ ಯಾವುದೋ ಒಂದು ಜಾತಿ ಧರ್ಮದ ಜನರ ದೇಶವಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಸಿಖ್ಖರು ಹೀಗೆ ಎಲ್ಲ ಧರ್ಮಗಳ ಜನರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದಕ್ಕಿದೆ. ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾದರೆ ಎಲ್ಲ ವರ್ಗದ ಜನರಿಗೆ ನ್ಯಾಯ ಕೊಡಬೇಕು. ನಾವು ಸಂವಿಧಾನದ ಜಾತ್ಯಾತೀತ ಸಿದ್ದಾಂತದ ರಕ್ಷಣೆಗೆ ಇನ್ನಷ್ಟು ಆಕ್ರಮಣಶೀಲತೆಯಿಂದ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಅವರಾಗಲೀ, ರಾಹುಲ್ ಗಾಂಧಿಯವರಾಗಲೀ ಯಾವುದೇ ರೀತಿಯ ರಾಜಿಗೆ ಸಿದ್ಧರಿಲ್ಲ. ಯುವಕರನ್ನು ಪಕ್ಷಕ್ಕೆ ಕರೆತಂದು ಅವರಿಗೆ ಹೆಚ್ಚಿನ ಜವಬ್ದಾರಿ ನೀಡುವ ಕೆಲಸ ಮಾಡಬೇಕು ಎಂದು ರಾಹುಲ್ ಗಾಂಧಿಯವರು ಸದಾ ಹೇಳುತ್ತಿರುತ್ತಾರೆ.

ಶಾಂತಿ, ಕಾನೂನು ಸುವ್ಯವಸ್ಥೆ ಇಲ್ಲದ ದೇಶ, ರಾಜ್ಯ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ದೇಶ ಅಭಿವೃದ್ಧಿ ಆಗಬೇಕಾದರೆ ಸಮಾಜದಲ್ಲಿ ಸಾಮರಸ್ಯ ಇರಬೇಕು. ಈ ಸಾಮರಸ್ಯ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 135-140 ಸ್ಥಾನಗಳನ್ನು ಗೆಲ್ಲಲೇಬೇಕು, ಆ ಮೂಲಕ ಕೋಮುವಾದಿಗಳನ್ನು ಅಧಿಕಾರದಿಂದ ಕಿತ್ತು ಬಿಸಾಕಬೇಕು. ಹೀಗಾಗಿ ಆ ವ್ಯಕ್ತಿ, ಈ ವ್ಯಕ್ತಿ ಎಂದು ವೈಯಕ್ತಿಕ ಚಿಂತನೆ ಮಾಡದೆ ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹೋರಾಟ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಎಲ್ಲರೂ ತಮ್ಮ ಸಲಹೆ ಸೂಚನೆಗಳನ್ನು ಪಕ್ಷಕ್ಕೆ ನೀಡಿ, ನಿಮ್ಮ ಅಭಿಪ್ರಾಯವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಚುನಾವಣೆಗೆ ಆರು ತಿಂಗಳು ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಆಗ ಅವರು ತಮ್ಮೆಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಪರಿಣಾಮಕಾರಿಯಾಗಿ ಚುನಾವಣೆ ಎದುರಿಸಲು ಸಾಧ್ಯವಾಗುತ್ತೆ ಎಂದು ರಾಹುಲ್ ಗಾಂಧಿ ಅವರ ಬಳಿ ಮನವಿ ಮಾಡಿದ್ದೇವೆ. ಅದಕ್ಕವರು ಒಪ್ಪಿದ್ದಾರೆ.

ರಾಷ್ಟ್ರೀಯ ನಾಯಕರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಯಾಗಿದೆ. ಈ ಅಭಿಯಾನದ ಯಶಸ್ಸಿಗೆ ಕಾರಣೀಕರ್ತರಾದ ಪಕ್ಷದ ಎಲ್ಲಾ ಶಾಸಕರು, ಮುಖಂಡರು, ಕಾರ್ಯಕರ್ತರಿಗೆ ನನ್ನ ಧನ್ಯವಾದಗಳು. ನಮ್ಮ ಪಕ್ಷದ ಗೆಲುವಿಗೆ ಇದಷ್ಟೇ ಸಾಲದು, ಇದರ ಜೊತೆಗೆ ನಾವೆಲ್ಲ ಮನೆ ಮನೆಗೆ ತೆರಳಿ ಬಿಜೆಪಿಯ ಕೋಮುವಾದದ ನಾಟಕವನ್ನು ಜನರಿಗೆ ಅರ್ಥಮಾಡಿಸುವ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ರಾಜ್ಯ ಸರ್ಕಾರದ 40% ಕಮಿಷನ್ ದಂಧೆಯ ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದು ಆರು ತಿಂಗಳಾಯ್ತು, ಚೌಕಿದಾರ್ ಮೋದಿ ಅವರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರದ 40% ಕಮಿಷನ್ ಹಗರಣವನ್ನು ಸದನದಲ್ಲಿ ಪ್ರಸ್ತಾಪ ಮಾಡಲು ಅವಕಾಶ ನೀಡಿಲ್ಲ. ಬಿಜೆಪಿ ಶಾಸಕರೇ ತಮ್ಮ ಪಕ್ಷದ ಸಚಿವರ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಆದರೆ ಸರ್ಕಾರ ಭಂಡತನದಿಂದ ವರ್ತಿಸುತ್ತಿದೆ.

ಇಂತಹ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ 24/7 ಹೋರಾಟವನ್ನು ಇಂದಿನಿಂದಲೇ ಆರಂಭಿಸೋಣ. ಸಮಾಜ, ದೇಶದ ಉಳಿವಿಗಾಗಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರೋಣ ಎಂದು ಸಿದ್ಧರಾಮಯ್ಯ ಹೇಳಿದರು.

Key words: Congress 135-140 seats –former cm-Siddaramaiah