ಮೈಸೂರು, ಮೇ, 21,2026 (www.justkannada.in): ಮೈಸೂರಿನಲ್ಲಿ ಸೌಂದರ ರಾಜ್ ಅಲಿಯಾಸ್ ‘ಚಿನ್ನತಂಬಿ’ ಎಂಬಾತನ ವಿರುದ್ಧ ಚಿನ್ನಕ್ಕೆ ಹೆಚ್ಚಿನ ಬೆಲೆ ಕೊಡುವುದಾಗಿ ಗಿರಿವಿ ಇಟ್ಟುಕೊಂಡು ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ಸಾಕಷ್ಟು ಜನರಿಗೆ ವಂಚಿಸಿರುವ ಪ್ರಕರಣ ಈಗಾಗಲೇ ಬೆಳಕಿಗೆ ಬಂದಿದೆ. ಮೈಸೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿ ಈ ವಂಚಕನ ಬಳಿ ಚಿನ್ನ ಅಡವಿಟ್ಟು ಮೋಸ ಹೋಗಿರುವ ಸಾರ್ವಜನಿಕರು ದೂರು ನೀಡುವಂತೆ ಸೂಚಿಸಿದ್ದಾರೆ.
ಚಿನ್ನದ ಗಿರಿವಿ ಅಂಗಡಿ ಇಟ್ಟುಕೊಂಡು ಜನರಿಗೆ ಮೋಸ ಮಾಡುತ್ತಿದ್ದ ಸೌಂದರ್ ರಾಜ್ ಅಲಿಯಾಸ್ ಚಿನ್ನತಂಬಿ ವಂಚನೆ ಬಯಲಾಗಿದ್ದು ಅಡವಿಟ್ಟಿದ್ದ ಸುಮಾರು 600 ಕೆ.ಜಿ ಚಿನ್ನ ಕರಗಿಸಿ ಜನರಿಗೆ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಈ ಆರೋಪ ಮಾಡಿರುವುದು ಬಿಜೆಪಿ ಶಾಸಕ ಶ್ರೀವತ್ಸ. ಈ ಬಗ್ಗೆ ಮಾತನಾಡಿರುವ ಅವರು, ಸುಮಾರು 600 ಕೆಜಿ ಚಿನ್ನ ಕರಗಿಸಿ ಜನರಿಗೆ ವಂಚನೆ ಮಾಡಲಾಗಿದೆ. ಮೈಸೂರು ಪೊಲೀಸರ ಮೇಲೆ ಜನರಿಗೆ ನಂಬಿಕೆ ಹೋಗಿದೆ, ನನಗೂ ನಂಬಿಕೆ ಇಲ್ಲ. ಪ್ರಕರಣ ಕುರಿತು ಕಳೆದ ವಾರವೇ ಡಿಐಜಿ ಹಾಗೂ ಐಜಿ ಅವರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ 200ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಯಾರೇ ಮೋಸ ಹೋಗಿದ್ದರೂ ಮುಂದೆ ಬಂದು ದೂರು ನೀಡಿ. ಎಲ್ಲರಿಗೂ ನ್ಯಾಯ ಸಿಗುತ್ತದೆ” ಎಂದು ಶಾಸಕ ಶ್ರೀವತ್ಸ ತಿಳಿಸಿದ್ದಾರೆ.
600 ಕೆಜಿ ಚಿನ್ನ ಅಂದರೆ ಕಡಿಮೆ ಅಲ್ಲ. ಹಣದ ವ್ಯವಹಾರವೂ ಬಹಳ ಪ್ರಮಾಣದಲ್ಲಿ ನಡೆದಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಅನ್ನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ ಶಾಸಕ ಶ್ರೀವತ್ಸ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ(ಇಡಿ)ಗೂ ಪತ್ರ ಬರೆಯಲಾಗುತ್ತದೆ ಎಂದರು.
ಈ ಮೂಲಕ ”ಚಿನ್ನತಂಬಿ” ಪ್ರಕರಣ “ಅಂಬಾರಿ” ತೂಕಕ್ಕೆ ಸೆಡ್ಡು ಹೊಡೆಯುವಂತಿದ್ದು ಮೋಸ ಹೋದ ಜನರಿಗೆ ನ್ಯಾಯ ಸಿಗುತ್ತಾ ಕಾದು ನೋಡಬೇಕಿದೆ. 
Key words: Mysore, Chinnathambi, Gold, Fraud case, MLA, Srivatsa







