ಚಂದದ ಬೊಂಬೆ ತಯಾರಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಚಂದನಾ

ಮೈಸೂರು, ಫೆಬ್ರವರಿ.11: ಕಲೆ ಎಂಬುದು ಒಬ್ಬರ ಸ್ವತ್ತಲ್ಲ. ಕಲ್ಪನಾ ಲೋಕದ ಬಣ್ಣ ಬಣ್ಣದ ಕಲ್ಪನೆಗಳಿಗೆ ರೂಪ ನೀಡುವ ಕಲೆಯು, ಆಸಕ್ತರ ಸೃಜನಶೀಲತೆಯ ಮೂಸೆಯಲ್ಲಿ ಅರಳುವ ಸುಂದರವಾದ ಹೂವು. ಅಂತಹ ವಿಶೇಷವಾದ ಕಲೆಯಲ್ಲಿ ತನ್ನೊಳಗೆ ಅಡಗಿದ್ದ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿ ರಾಷ್ಟ್ರ ಮಟ್ಟದ ದೃಶ್ಯ ಕಲೋತ್ಸವದಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ ಮೈಸೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚಂದನಾ.

ಶಿಕ್ಷಣ ಕ್ಷೇತ್ರದಲ್ಲಿ ಕಲೆ, ಸಂಶೋಧನೆಗಳನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಭಾರತ ಸರ್ಕಾರದ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್.ಸಿ.ಇ.ಆರ್.ಟಿ) ವತಿಯಿಂದ ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ಜನವರಿ 15 ಮತ್ತು 16 ರಂದು ಎರಡು ದಿನಗಳ ಕಾಲ ರಾಷ್ಟ್ರಮಟ್ಟದ ದೃಶ್ಯಕಲೋತ್ಸವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಕೋವಿಡ್-19 ವಿಶ್ವವ್ಯಾಪಿ ಹರಡುತ್ತಿರುವ ಕಾರಣ ಈ ಬಾರಿಯ ಸ್ಪರ್ಧೆಯು ಆನ್‍ಲೈನ್ ಮುಖಾಂತರ ವರ್ಚುವಲ್ ಆಗಿ ನಡೆಯಿತು. ಈ ಸ್ಪರ್ಧೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 36 ರಾಜ್ಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅದರಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಚಂದನಾ ಎ. ಭಾಗವಹಿಸಿ, ವ್ಯರ್ಥ ವಸ್ತುಗಳನ್ನು ಬಳಸಿಕೊಂಡು ಬೊಂಬೆ, ಆಟಿಕೆ ತಯಾರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

ಸೋರೆಕಾಯಿ ಬೊಂಬೆಗೆ ಜೀವಕೊಟ್ಟ ಕಲೆಗಾತಿ

ನಮ್ಮ ಸುತ್ತ ಮುತ್ತ ಪ್ರಕೃತಿದತ್ತವಾಗಿ ದೊರಕುವ ಉಪಯೋಗಕ್ಕೆ ಬಾರದ ಅನೇಕ ವಸ್ತುಗಳನ್ನು ನಾವು ತ್ಯಾಜ್ಯಗಳೆಂದೆ ಪರಿಗಣಿಸುತ್ತೇವೆ. ಆದರೆ ಅವುಗಳನ್ನೆ ಬಳಸಿಕೊಂಡು ಅದಕ್ಕೊಂದು ಜೀವ ನೀಡಿದ ಕಲೆಗಾತಿಯೇ ಈ ವಿದ್ಯಾರ್ಥಿನಿ ಚಂದನಾ ಎ.

ಇವರು ಕಹಿಸೋರೆಯನ್ನು ಬಳಸಿಕೊಂಡು ಬೊಂಬೆ ಹಾಗೂ ಆಟಿಕೆ ತಯಾರಿಸುತ್ತಿದ್ದ ಪರಿಗೆ ದೆಹಲಿಯಿಂದ ವೀಕ್ಷಿಸುತ್ತಿದ್ದ ತೀರ್ಪುಗಾರರು ಆಶ್ಚರ್ಯ ಸೂಚಿಸಿದ್ದಾರೆ. ಅಚಲವಾದ ಪ್ರಯತ್ನ, ಪ್ರತಿಭೆಯಿಂದ ಈ ಕಲಾವಿದ್ಯಾರ್ಥಿಯ ಕುಂಚದಲ್ಲಿ ಅರಳಿದ ಕಲಾಕೃತಿಗಳು ಕಲಾಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ.

ವಿಶ್ವದಾದ್ಯಂತ ಚೆನ್ನಪಟ್ಟಣ ಬೊಂಬೆಗಳು ಪ್ರಸಿದ್ಧಿ ಪಡೆದಿವೆ. ಸಾಮಾನ್ಯವಾಗಿ ಚೆನ್ನಪಟ್ಟಣದಲ್ಲಿ ಬೊಂಬೆಗಳು ಹಾಗೂ ಆಟಿಕೆಗಳನ್ನು ಮರದಿಂದ ತಯಾರಿಸಲಾಗುತ್ತದೆ. ಆದರೆ ಈ ವಿದ್ಯಾರ್ಥಿನಿಯು ತನ್ನ ಮನೆಯ ಸುತ್ತಲೂ ಸಂಗ್ರಹಿಸಿದ ಸೋರೆಕಾಯಿಗಳಿಂದ ತಯಾರಿಸಿದ ಬೊಂಬೆಗಳು, ಆಟಿಕೆಗಳು ವಿಶೇಷ ಆಕರ್ಷಣೆಗೆ ಪಾತ್ರವಾಗಿವೆ.

ಈ ವಿದ್ಯಾರ್ಥಿನಿಯು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಆರು ವಿಧವಾದ ಆಟಿಕೆ ತಯಾರಿಸಿದ್ದು, ಎಲ್ಲಾ ಬೊಂಬೆಗಳಿಗೆ ಸೋರೆಕಾಯನ್ನೇ ಬಳಕೆ ಮಾಡಲಾಗಿದೆ. ಅಜ್ಜ, ಅಜ್ಜಿ, ಬ್ಯಾಲೆನ್ಸಿಂಗ್ ಡಾಲ್, ಕೋಳಿ, ಗೂಬೆ, ಜಿರಾಫೆಯಂತಹ ಆಟಿಕೆಯನ್ನು ಸೋರೆಕಾಯಿಂದ ವಿನ್ಯಾಸಗೊಳಿಸಿ ಆಕರ್ಷಕ ಬೊಂಬೆಯಾಗಿ ಜೀವ ತುಂಬಲಾಗಿದೆ.
ಈ ಆರು ಬೊಂಬೆಗಳು ವಿದ್ಯಾರ್ಥಿನಿ ಚಂದನಾ ಅವರ ಪ್ರಶಸ್ತಿಗೆ ಕಾರಣವಾಗಿದ್ದು, 20 ಸಾವಿರ ನಗದು ಬಹುಮಾನ, ಒಂದು ಮೇಡಲ್ ಹಾಗೂ ಟ್ರೋಫಿಯನ್ನು ತಂದು ಕೊಟ್ಟಿವೆ. ಬೊಂಬೆ ತಯಾರಿಸುವ ಎಲ್ಲಾ ವಿಧಾನವನ್ನು ಸೂಕ್ಷ್ಮವಾಗಿ ಪರಿಶೀಲಸಿ, ಪ್ರತಿಯೊಂದಕ್ಕೂ ವಿವರಣೆ ಪಡೆದು ಪ್ರಶಸ್ತಿಯನ್ನು ನೀಡಲಾಗಿದೆ.

ಈ ಬಗ್ಗೆ ಶಾಲೆಯ ಚಿತ್ರಕಲಾ ಶಿಕ್ಷಕಿ ಸಂಗೀತ ಕೆ. ಅವರು ಮಾತನಾಡಿ, ಕಳೆದ 2015 ರಿಂದಲೂ ಈ ಸ್ಪರ್ಧೆಯಲ್ಲಿ ಶಾಲೆಯ ವತಿಯಿಂದ ಭಾಗವಹಿಸಲಾಗುತ್ತಿದೆ. ಆದರೆ ಈ ಬಾರಿ ತುಂಬಾ ಶ್ರಮವಹಿಸಿದ್ದು, ವಿದ್ಯಾರ್ಥಿನಿಯ ಗ್ರಾಮದಲ್ಲಿ ವಿದ್ಯುತ್ ಹಾಗೂ ಇನ್ನಿತರ ಸಮಸ್ಯೆ ಇದ್ದಿದ್ದರಿಂದ ನಮ್ಮ ಮನೆಗೆ ಕರೆಹಿಸಿಕೊಂಡು, ಸ್ವಂತ ಖರ್ಚಿನಲ್ಲಿ ಅಗತ್ಯವಿರುವ ಸಾಮಾಗ್ರಿಗಳನ್ನು ಕೊಡಿಸಿದೆ.

ಇದಕ್ಕೆ ಪೂರಕವಾಗಿ ಶಾಲೆಯ ವಾತಾವರಣವು ಚನ್ನಾಗಿದೆ. ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಯರು ಹಾಗೂ ಸಹೋದ್ಯೋಗಿಗಳ ಬೆಂಬಲದಿಂದ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕಿದೆ ಎಂದು ಅವರು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದ ಮಕ್ಕಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದು ಹೆಮ್ಮೆಯ ಸಂಗತಿ. ಹಳ್ಳಿಯ ಮಕ್ಕಳು, ಅದರಲ್ಲೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಎಲ್ಲರು ಪ್ರೋತ್ಸಾಹಿಸಿ, ಮಕ್ಕಳಲ್ಲಿರುವ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಬೇಕಿದೆ.
-ಸಂಗೀತಾ ಕೆ. ಚಿತ್ರಕಲಾ ಶಿಕ್ಷಕಿ
ಸರ್ಕಾರಿ ಪ್ರೌಢಶಾಲೆ, ಜಿ.ಬಿ.ಸರಗೂರು, ಎಚ್.ಡಿ.ಕೋಟೆ ತಾಲ್ಲೂಕು.

ನಾನು ತಯಾರಿಸುವ ಬೊಂಬೆಗಳ ಹಾಗೂ ಆಟಿಕೆಗಳು ಪರಿಸರ ಸ್ನೇಹಿ ಮತ್ತು ಮರುಬಳಕೆಯ ಉತ್ಪನ್ನವಾಗಿರುವುದರ ಜೊತೆಗೆ, ಇದು ನನ್ನನ್ನು ಸ್ವಾವಲಂಬಿಯನ್ನಾಗಿಸಿದೆ. ಇಂತಹ ವಿಶಿಷ್ಟವಾದ ಮತ್ತು ಸ್ಥಳೀಯ ಕಲಾ ಪ್ರಕಾರಗಳು ಅಳಿದುಹೋಗದಂತೆ ಉತ್ತೇಜಿಸಲು ಮತ್ತು ಸಂರಕ್ಷಿಸಲು ಪ್ರಯತ್ನಿಸಿದ್ದೇನೆ. ಮಾರ್ಗದರ್ಶನ ನೀಡಿದ ನಮ್ಮ ಶಿಕ್ಷಕಿ ಸಂಗೀತಾ ಕೆ. ಹಾಗೂ ಪ್ರೋತ್ಸಾಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.
-ಚಂದನಾ ಎ.
9ನೇ ತರಗತಿ ವಿದ್ಯಾರ್ಥಿನಿ, ಸರ್ಕಾರಿ ಪ್ರೌಢಶಾಲೆ, ಜಿ.ಬಿ.ಸರಗೂರು