ಮಹಿಷಾ ದಸರಾ ವಿರೋಧಿಸಿ ಅ.13 ರಂದು ‘ಚಾಮುಂಡಿ ಬೆಟ್ಟ ಚಲೋ’ ಕಾರ್ಯಕ್ರಮ- ಸಂಸದ ಪ್ರತಾಪ್ ಸಿಂಹ.

ಮೈಸೂರು,ಅಕ್ಟೋಬರ್,4,2023(www.justkannada.in): ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ಮಾಡುವ ಮಾತು ಆಡುತ್ತಿದ್ದಾರೆ. ಇದನ್ನ ತಡೆಯುವ ನಿಟ್ಟಿನಲ್ಲಿ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಚಲೋ ಜಾಥಾ ನಡೆಸುತ್ತೇವೆ. ಇದರಲ್ಲಿ 5 ಸಾವಿರ‌ ನಾಗರಿಕರು ಪಾಲ್ಗೊಳ್ಳುತ್ತಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಸಂಸದ ಪ್ರತಾಪ್ ಸಿಂಹ, ಟಿಪ್ಪು ಹೈದರಾಲಿ ಕಾಲ ಬಿಟ್ಟರೇ 414 ವರ್ಷದಿಂದ ನಿರಂತರವಾಗಿ ಮೈಸೂರು ದಸರಾ ನಡೆದುಕೊಂಡು ಬರುತ್ತಿದೆ. ಮೈಸೂರು ಜನರಿಗೆ ದಸರಾ ಅಂದ್ರೆ ಏನು, ನವರಾತ್ರಿ ಅಂದ್ರೆ ಏನು ಅಂತ ಗೊತ್ತು. 2015-16 ರಲ್ಲಿ ಮಹಿಷ ದಸರಾ ಎನ್ನುವ ಅಸಹ್ಯ ಹುಟ್ಟುಹಾಕಿದ್ದಾರೆ. ಆಗ ಇದ್ದವರು ಉದಾಸೀನ ತೋರಿದರು. ಚಾಮುಂಡಿ ಬೆಟ್ಟಕ್ಕೆ ಹೋಗಿ ದೆವ್ವವನ್ನ ದೇವರು ಅಂತ, ದೇವರನ್ನ ದೆವ್ವ ಅಂತ ಹೇಳುವ ಕೆಲಸ ಆಯ್ತು. ನಂತರ ಮೆರವಣಿಗೆ ಮಾಡಲಾಯಿತು. ಆಗಿನ ಸಿದ್ದರಾಮಯ್ಯ ಸರ್ಕಾರ ಅದನ್ನ ನಿಲ್ಲಿಸಲಿಲ್ಲ. ಇಲ್ಲಿ ಭಕ್ತರ ಭಾವನೆಗೆ ನೋವಾಗುವ ಅಸಹ್ಯವನ್ನು ನಿಲ್ಲಿಸುವ ಮನವಿಗೆ ಸಚಿವ ಸೋಮಣ್ಣ ಸ್ಪಂದಿಸಿ ನಿಲ್ಲಿಸಲು ನಾಂದಿ ಹಾಡಿದರು.  ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಇಂತಹ ಅಸಹ್ಯವನ್ನು ಮಟ್ಟ ಹಾಕುವ ಕೆಲಸ ಆಗಿದೆ. ಈಗ ಸಿದ್ದರಾಮಯ್ಯ ಸರ್ಕಾರ ಬಂದಾಗ ಅವರು ಮತ್ತೆ ಹೆಚ್ಚಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಚಾಮುಂಡಿ ಬೆಟ್ಟದಲ್ಲಿ ಮಹಿಷಾ ಆಚರಣೆ ಮಾಡುವ ಮಾತು ಆಡುತ್ತಿದ್ದಾರೆ. ಇದನ್ನ ತಡೆಯುವ ನಿಟ್ಟಿನಲ್ಲಿ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಚಲೋ ಜಾಥಾ ನಡೆಸುತ್ತೇವೆ. ಚಾಮುಂಡಿ ಬೆಟ್ಟದ ಪಾದ ಹಾಗೂ ವಿಶ್ವವಿದ್ಯಾಲಯದ ಆವರಣದಿಂದ ಜನ ತೆರಳುತ್ತಾರೆ. ಚಾಮುಂಡಿ ಬೆಟ್ಟಕ್ಕೆ ತೆರಳಿ, ದೇವಿಗೆ ಪೂಜೆ ಸಲ್ಲಿಸಿ ದಿನವಿಡಿ ಕಾರ್ಯಕ್ರಮ ನಡೆಸುತ್ತೇವೆ. ಜಿಲ್ಲಾಧಿಕಾರಿ ಹಾಗು ಸಿಟಿ ಪೊಲೀಸ್ ಕಮಿಷನರ್‌ ಬಳಿ ತೆರಳಿ ಮಹಿಷಾ ದಸರಾಗೆ ಅನುಮತಿ ನೀಡದಂತೆ ಮನವಿ ಮಾಡುತ್ತೇವೆ. ಇದು ಭಾರತೀಯ ಜನತಾ ಪಕ್ಷದ ಕಾರ್ಯಕ್ರಮ ಅಲ್ಲ. ಮತ್ತೆ ಮಹಿಷಾ ದಸರಾ ತಡೆಗಟ್ಟುವ ಕಾರ್ಯಕ್ರಮ. ಇದರಲ್ಲಿ ಮೈಸೂರಿನ ಎಲ್ಲಾ ಪ್ರಜ್ಞಾವಂತ ನಾಗರಿಕರು ಭಾಗಿಯಾಗಿ. ಬಹುಸಂಖ್ಯಾತರ ಭಾವನೆ ರಕ್ಷಣೆ ಮಾಡುವ ಕೆಲಸ ಮಾಡೊಣ. ಇದು ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ ಪ್ರತಾಪ್ ಸಿಂಹ ಮೈಸೂರಿನ ನಾಗರಿಕರಿಗೆ ಚಲೋ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಶಿವಮೊಗ್ಗ ಗಲಾಟೆ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಒಂದೊಂದು ಸಾರಿ ಒಳ್ಳೆಯವರು ರಾಜ್ಯ ಅಳುತ್ತಾರೆ.  ಒಂದೊಂದು ಬಾರಿ ರಾಕ್ಷಸರು ರಾಜ್ಯ ಅಳುತ್ತಾರೆ. ರಾಕ್ಷಸರ ರಾಜ್ಯಭಾರ ಈಗ ನಡೆಯುತ್ತಿದೆ. ಶಿವಮೊಗ್ಗ ಪ್ರಕರಣ, ಕೋಲಾರದ ಪ್ರಕರಣ ನೋಡಿದರೆ ಇದು ಗೊತ್ತಾಗುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ರಾಜ್ಯ ಆಡಳಿತ ಬಂದಿದೆ. ಕಲ್ಲು ಹೊಡೆಯುವ ಸಂಸ್ಕೃತಿ ಹಿಂದೂ ಧರ್ಮದವರಿಗೆ ಗೊತ್ತಿಲ್ಲ. ಸಾಮೂಹಿಕ ಪ್ರಾರ್ಥನೆ ಮಾಡಿ ಒಟ್ಟಾಗಿ ಹೊರಗಡೆ ಬಂದು ಚಾಕು ಚೂರಿ ಹಿಡಿದು ಹಿಂಬಂದಿಯಿಂದ ಚುಚ್ಚುವುದು ಹಿಂದೂ ಸಂಸ್ಕೃತಿ ಅಲ್ಲ. ಚುಕ್ಕಾಣಿ ಹಿಡಿದವರು ಮನಸ್ಥಿತಿಯಂತೆ ಉಳಿದವರು ಇರುತ್ತಾರೆ. ಸಿದ್ದರಾಮಯ್ಯ ಎಲ್ಲಾ ನೋಡಿ ಕಣ್ಮುಂಚಿ ಕುಳಿತಿದ್ದಾರೆ. ಪಿಎಫ್ ಐ, ಕೆಎಫ್ ಡಿ ಮೇಲಿನ ಕೇಸ್ ವಾಪಾಸ್ ಪಡೆದ ಕಾರಣ ಇವತ್ತು ವಿಕೃತಿಗಳು ವಿಜೃಂಭಿಸುತ್ತಿವೆ. ಸಿದ್ದರಾಮಯ್ಯ ಇದಕ್ಕೆ ಕಾರಣ. ಅವರು ಬಿಗಿ ಆಗಿ ಇದ್ದರೆ ಈ ರೀತಿ ಆಗುತ್ತಿರಲಿಲ್ಲ. ಕೆಎಫ್ ಡಿ, ಪಿಎಫ್ ಐ ಸಂಘಟನೆಗಳು ಎದ್ದು ನಿಂತಿವೆ. ಸರಕಾರಕ್ಕೆ ಲಂಗು ಲಾಗಾಮು ಇಲ್ಲ. ಮುಸ್ಲಿಂ ಪುಂಡರು ಎಸ್ಪಿ ಮೇಲೆ ಕಲ್ಲು ತೂರುತ್ತಾರೆ. ಕೋಲಾರದಲ್ಲಿ ದಲಿತ ಸಂಸದರ ಮೇಲೆ ಎಸ್ಪಿ ಹಲ್ಲೆ ಮಾಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ಟ್ಯಾಲಿನ್ ವಿರುದ್ದ ಮಾತಾಡಲು ಕಾಂಗ್ರೆಸ್ ನ ಎಲ್ಲಾ ನಾಯಕರಿಗೆ ತೊಡೆ ನಡುಗುತ್ತದೆ.

ಕಾವೇರಿ ನೀರು ವಿಚಾರ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ತಮಿಳುನಾಡು ಸಿಎಂ ಸ್ಟ್ಯಾಲಿನ್ ವಿರುದ್ದ ಒಬ್ಬರಾದರೂ ಮಾತಾಡಿದ್ದಾರಾ? ಈ ಸರಕಾರಕ್ಕೆ ಬೆನ್ನು ಮೂಳೆಯೇ ಇಲ್ಲ. ಸ್ಟ್ಯಾಲಿನ್ ಬಗ್ಗೆ ಒಂದು ಹೇಳಿಕೆ ಕೊಡಲಿ ನೋಡೋಣಾ? ಎಂದು ಸವಾಲೆಸೆದರು.

ಸಿದ್ದರಾಮಯ್ಯ ಎದುರಾಳಿಗಳ ಮೇಲೆ ಉಡಾಫೆಯಿಂದ ಕೂಗಾಡುತ್ತಾರೆ ಸ್ಟ್ಯಾಲಿನ್  ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ. ಸ್ಟ್ಯಾಲಿನ್ ವಿರುದ್ದ ಮಾತಾಡಲು ಕಾಂಗ್ರೆಸ್ ನ ಎಲ್ಲಾ ನಾಯಕರಿಗೆ ತೊಡೆ ನಡುಗುತ್ತದೆ ಎಂದು ವ್ಯಂಗ್ಯವಾಡಿದರು.

Key words: Chamundi Betta Chalo- program – Oct 13- against -Mahisha Dasara – MP Pratap Simha.