ಮಾಜಿ ಸಚಿವ ಹೆಚ್.ಕೆ ಪಾಟೀಲ್ ದೂರಿನನ್ವಯ ರಾಜ್ಯ ಸರ್ಕಾರದ ವಿರುದ್ದ ಮಾನವ ಹಕ್ಕು ಆಯೋಗದಿಂದ ಪ್ರಕರಣ ದಾಖಲು…

ಬೆಂಗಳೂರು,ಆ,1,2020(www.justkannada.in):  ಆಂಬುಲೆನ್ಸ್, ಪಿಪಿಇ, ಭ್ರಷ್ಠಾಚಾರ, ಗೌರವಯುತ ಅಂತ್ಯಸಂಸ್ಕಾರ ಕುರಿತು ಮಾಜಿ ಸಚಿವ ಹಾಗೂ ಶಾಶಕ ಎಚ್.ಕೆ.ಪಾಟೀಲ್ ನೀಡಿದ ದೂರಿನನ್ವಯ ರಾಜ್ಯ ಸರ್ಕಾರದ ವಿರುದ್ದ ಮಾನವ ಹಕ್ಕು ಆಯೋಗಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ಆರಂಭಿಸಿದೆ.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಶಾಸಕ ಎಚ್.ಕೆ. ಪಾಟೀಲ್ ಅವರು ಜುಲೈ 10 ರಂದು ನೀಡಿದ ದೂರಿನನ್ವಯ ಹೆಚ್.ಆರ್.ಸಿ ನಂ:2158/10/27/2020(SB-1) ಅಡಿಯಲ್ಲಿ ಕರ್ನಾಟಕ ಸರ್ಕಾರದ ವಿರುದ್ದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಪ್ರಾರಂಭಿಸಿದೆ.case-filed-human-rights-commission-against-state-government-complaint-former-minister-hk-patil

ಈ ಕುರಿತು ದಿನಾಂಕ 27.7.2020 ರಂದು ಎಚ್.ಕೆ. ಪಾಟೀಲರಿಗೆ ಪತ್ರ ಬರೆದಿರುವ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಚ್ಚುವರಿ ನಿಬಂಧಕರು,  ದಿನಾಂಕ 28.7.2020 ರಂದು ಶಾಸಕರಿಗೆ ಆಯೋಗದ ಮುಂದೆ ಹಾಜರಾಗಲು ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಶಾಸಕರು ಬೆಂಗಳೂರಿನಲ್ಲಿ ಇಲ್ಲದೇ ಇದ್ದಿದ್ದರಿಂದ ಅಂದು ದೂರುದಾರರು ಮಾಹಿತಿ ಒದಗಿಸಲು ಹಾಜರಾಗಲು ಸಾಧ್ಯವಾಗಲಿಲ್ಲ. ಈ ದಿನಾಂಕವನ್ನು ಬದಲಿಸಿ ಆಗಸ್ಟ್-3 ಅಥವಾ ಆಗಸ್ಟ್-4 ರಂದು ಹಾಜರಾಗಲು ಮತ್ತೊಂದು ಸಮಯ ನಿಗದಿಪಡಿಸುವುದಾಗಿ ದೂರವಾಣಿ ಮೂಲಕ  ತಿಳಿಸಿದ್ದರು.

ಮಾಜಿ ಸಚಿವ ಹೆಚ್.ಕೆ ಪಾಟೀಲ್ ಸರ್ಕಾರದ ವಿರುದ್ದ ಆರೋಪಿಸಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಬರೆದಿರುವ  ಪತ್ರದಲ್ಲಿ “ಗೌರವಯುತ ಶವಸಂಸ್ಕಾರ, ಅಗತ್ಯ ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆ, ಸಕಾಲಕ್ಕೆ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುವ ಅನುಕೂಲತೆ ಮತ್ತು ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಹಾಗೂ ಗುಣಮಟ್ಟದ ಸೇವೆ ನಮ್ಮ ಮಾನವ ಹಕ್ಕುಗಳಲ್ಲವೇ? ಈ ಮಾನವ ಹಕ್ಕುಗಳನ್ನು ರಕ್ಷಿಸುವ ಪ್ರಜಾಸತ್ತಾತ್ಮ ಕರ್ತವ್ಯ ಹೊಂದಿರುವ ಸರ್ಕಾರವೇ ಇವುಗಳ ಉಲ್ಲಂಘನೆಯ ಬಗ್ಗೆ ಸುಮ್ಮನೆ ಕುಳಿತಿರುವುದು ಜನವಿರೋಧಿ ಕ್ರಮವಾಗುತ್ತದೆ ಎಂದು ಮತ್ತು ಕಳೆದ ಕೆಲ ತಿಂಗಳಿಂದ ಕೊರೋನಾ ಮಾರಿಯಿಂದಾಗಿ ಕರ್ನಾಟಕದ ಜನ ವಿಲ ವಿಲ ಒದ್ದಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 2000 ಕ್ಕೂ ಹೆಚ್ಚು ಸೋಂಕಿತರಾಗುತ್ತಿದ್ದಾರೆ. 40-50 ಜನ ಸಾವಿಗೀಡಾಗುತ್ತಿದ್ದಾರೆ. ಸರ್ಕಾರದ ನಿಷ್ಕ್ರಿಯವಾದ ಕೆಲಸ, ಸ್ಪಷ್ಟ ನಿಲುವುಗಳ ಕೊರತೆ, ಪ್ರಾಮಾಣಿಕ ಪ್ರಯತ್ನದ ಕೊರತೆ, ಸರಕಾರದಲ್ಲಿ ಇಲ್ಲದಿರುವ ಸಮನ್ವಯತೆ ಗಳಿಂದಾಗಿ ಅದರ ಜೊತೆ ಜೊತೆ ಎಲ್ಲಿ ನೋಡಿದಲ್ಲಿ ಭ್ರಷ್ಠಾಚಾರದ ವಾಸನೆಗಳಿಂದಾಗಿ ಜನರಿಗೆ ಆಸ್ಪತ್ರೆಯಲ್ಲಾಗಲಿ, ಕೋವಿಡ್ ಕೇಂದ್ರಗಳಲ್ಲಾಗಲಿ ಅಥವಾ ಆಂಬುಲೆನ್ಸ್ ಸೇವೆಯಲ್ಲಾಗಲಿ ಸಮರ್ಪಕ ಸೇವೆ ಇಲ್ಲದಾಗಿದೆ.case-filed-human-rights-commission-against-state-government-complaint-former-minister-hk-patil

ಆಂಬುಲೆನ್ಸ್ ಸೇವೆ ಲೋಪದಿಂದಾಗಿ ಸೋಂಕಿತರಿಗೆ 2-3 ದಿನ ಆಂಬುಲೆನ್ಸ್ ಸಿಗದೇ ಪ್ರಾಣ ಕಳೆದುಕೊಂಡ ಕೆಲ ಘಟನೆ ಮಾಧ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿರಲು ಸಾಕು.  ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದ ಕಾರಣ ಪ್ರವೇಶ ನೀಡದೇ ಇರುವ ಘಟನೆ  ಹಲವು. ಕೆಲವರು ಪ್ರವೇಶ ಸಿಗದೇ ಪ್ರಾಣ ಕಳೆದುಕೊಂಡಿದ್ದಾರೆ. ವರದಿ ಹಾಗೂ ಅದರ ಚಿತ್ರಗಳನ್ನು ಕಳಿಸಿರುವೆ. ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆಗಾಗಿ ಗುಣಮಟ್ಟದ ಪಿಪಿಇ(Personal Protection Equipment) ಕಿಟ್ ಪೂರೈಸದೇ ನಿರ್ಲಕ್ಷದಿಂದಾಗಿ ಅವರ ಜೀವ ಗಂಡಾಂತರಕ್ಕೆ ದೂಡುವಂತೆ ಮಾಡಲಾಗಿದೆ. ಗುಣಮಟ್ಟದ ಕೊರತೆ ಬಗ್ಗೆ ಸರ್ಕಾರವೇ ಬರೆದ ಪತ್ರ ಲಗತ್ತಿಸಲಾಗಿದೆ” ಎಂದು ಪತ್ರದಲ್ಲಿ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ

“ಬಳ್ಳಾರಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಜಿಲ್ಲೆಗಳಲ್ಲಿ ಬಳ್ಳಾರಿ ಇರಲಿ ಬೆಂಗಳೂರಲ್ಲಾಗಲಿ ಭಾವನೆಗಳಿಗೆ ಘಾಸಿಯಾಗುವ ರೀತಿಯಲ್ಲಿ ಶವಗಳ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬ ಚಿತ್ರ ಹಾಗೂ ವರದಿಗಳು ಹೃದಯ ವಿದ್ರಾವಕ ಘಟನೆಗಳಾಗಿವೆ” ಎಂದು ಕಳವಳ ವ್ಯಕ್ತಪಡಿಸಿದ್ದರು.

“ಆಯೋಗವು ಆಹ್ವಾನಿಸಿದರೆ, ಚರ್ಚೆ ಬಯಸಿದರೆ ಇನ್ನೂ ಹೆಚ್ಚಿನ ವಿವರ ಲಭ್ಯಗೊಳಿಸುವೆ. ಜನ ಕಲ್ಯಾಣ ಎಲ್ಲ ಸಂಸ್ಥೆಗಳ ಉದ್ದೇಶ, ಗಾಬರಿಗೊಳಿಸುವ ಇಂಥ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದಿಂದ ಆಯೋಗ ತನ್ನ ಉಳಿದೆಲ್ಲ ಕೆಲಸ ಬದಿಗೊತ್ತಿ ಕೊರೋನಾ ಸಂದರ್ಭದಲ್ಲಿ ವಿಶಿಷ್ಟ ಕರ್ತವ್ಯ ನಿರ್ವಹಣೆಗೆ ಮುಂದಾಗಲಿ” ಎಂದು ಹೆಚ್.ಕೆ ಪಾಟೀಲ್ ಕೋರಿದ್ದರು.

ಜುಲೈ 27 ರಂದು ಸಭೆ ಸೇರಿದ ಮಾನವ ಹಕ್ಕುಗಳ ಆಯೋಗದ ಪೂರ್ಣಪೀಠ ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಪ್ರಾರಂಭಿಸಿದೆ. ಆಗಸ್ಟ್-3 ಅಥವಾ ಆಗಸ್ಟ್-4 ರಂದು ಆಯೋಗ ಬಯಸಿದರೆ ಶಾಸಕರು ಹಾಜರಾಗಿ ಈಗಾಗಲೇ ನೀಡಲಾಗಿರುವ ದಾಖಲೆಗಳು ಮತ್ತು ಪೆನ್‍ಡ್ರೈವ್ ಜೊತೆಗೆ ಮತ್ತಷ್ಟು ವಿವರಗಳನ್ನು ಹಂಚಿಕೊಳ್ಳಬಹುದು ಎಂದು ರಾಜ್ಯ ಮಾನವ ಹಕ್ಕು ಆಯೋಗದ ಹೆಚ್ಚುವರಿ ನಿಬಂಧಕರು ತಿಳಿಸಿದ್ದಾರೆ.

Key words:  case- filed – Human Rights Commission -against -state government – complaint -former minister -HK Patil.