ಹೆಚ್.ವಿಶ್ವನಾಥ್ ಗೆ  ಬಿಜೆಪಿ ಕಳುಹಿಸಿಕೊಟ್ಟ ‘ದೊಡ್ಡ ಮೊತ್ತ ಕಪ್ಪು ಹಣವಾ ಅಥವಾ ಬಿಳಿ ಹಣವಾ?: ನ್ಯಾಯಾಂಗ ತನಿಖೆಗೆ ರಾಜ್ಯ ಕಾಂಗ್ರೆಸ್ ಆಗ್ರಹ

ಬೆಂಗಳೂರು,ಡಿಸೆಂಬರ್,2,2020(www.justkannada.in): ಹುಣಸೂರು ಉಪಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಅವರಿಗೆ ಪಕ್ಷದಿಂದ ದೊಡ್ಡ ಮೊತ್ತ ನೀಡಲಾಗಿತ್ತು ಎಂಬ ವಿಚಾರವನ್ನು ಸ್ವತಃ ವಿಶ್ವನಾಥ್ ಅವರೇ ಒಪ್ಪಿಕೊಂಡಿದ್ದು, ಅವರು ಹೇಳಿರುವ ದೊಡ್ಡ ಮೊತ್ತ ಎಂದರೆ ಎಷ್ಟು? ಅದು ಬಿಳಿ ಹಣವಾ? ಕಪ್ಪು ಹಣವಾ? ಎಂದು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್, ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದೆ.logo-justkannada-mysore

ಉಪಚುನಾವಣೆ ವೇಳೆಯಲ್ಲಿ ಬಿಜೆಪಿ ಪಕ್ಷದಿಂದ ತಮಗೆ ದೊಡ್ಡ ಮೊತ್ತದ ಹಣವನ್ನು ಕಳುಹಿಸಿಕೊಡಲಾಗಿತ್ತು. ಅದನ್ನು ಸಿ.ಪಿ ಯೋಗೇಶ್ವರ್ ಹಾಗೂ ಸಿಎಂ ರಾಜಕೀಯ ಸಲಹೆಗಾರ ಸಂತೋಷ್ ಅವರು ತಲುಪಿಸದೇ ನನ್ನ ಸೋಲಿಗೆ ಸಂಚು ನಡೆಸಿದರು ಎಂಬ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ಹೇಳಿಕೆ ಹಿನ್ನೆಲೆಯಲ್ಲಿ  ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್. ಶಂಕರ್ ಅವರು ಒತ್ತಾಯ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಹೇಳಿದ್ದಿಷ್ಟು…

ವಿಶ್ವನಾಥ್ ಅವರು ನಮಗೂ ಸ್ನೇಹಿತರೇ. ಅವರು ಒಮ್ಮೊಮ್ಮೆ ಕಟು ಸತ್ಯ ಹೇಳುತ್ತಾರೆ. ನಿನ್ನೆ ಹೇಳಿದ ಸತ್ಯಕ್ಕೆ ಅವರನ್ನು ಅಭಿನಂದಿಸುತ್ತೇನೆ. ಅವರು ತಮ್ಮ ಹೇಳಿಕೆಗೆ ಬದ್ಧರಾಗಿರುತ್ತಾರೆ ಎಂದು ಭಾವಿಸಿದ್ದೇವೆ.’

ಆಪರೇಷನ್ ಕಮಲದ ಪರಿಣಾಮ 17 ಶಾಸಕರ ರಾಜೀನಾಮೆ ನೀಡಿದಾಗ ಮೊದಲಿಗೆ 15 ಕ್ಷೇತ್ರಗಳ ಉಪಚುನಾವಣೆ ನಡೆಯಿತು. ಈ ವೇಳೆ ಅವರಿಗೆ ಮಂತ್ರಿ ಸ್ಥಾನದ ಆಮೀಷದ ಜತೆಗೆ ದೊಡ್ಡ ಮೊತ್ತದ ಲಂಚದ ಹಣ ನೀಡಲಾಗಿದೆ ಎಂಬುದು ಜಗಜ್ಜಾಹೀರವಾಗಿರುವ ವಿಚಾರ. ನಾವು ಕೂಡ ಉಪಚುನಾವಣೆಯಲ್ಲಿ ಬಿಜೆಪಿ 50 ಕೋಟಿ ರುಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಿದೆ ಚುನಾವಣೆ ವೇಳೆ ಹಣದ ಹೊಳೆ ಹರಿದಿದೆ ಎಂದು ಹೇಳಿದ್ದೆವು. ಆದರೆ ಅದನ್ನು ಬಿಜೆಪಿಯವರು ನಿರಾಕರಿಸಿದ್ದರು.’black-money-white-money-bjp-sent-h-vishwanath-state-congress-demands-judicial-inquiry

ನಾನು ಚುನಾವಣೆಗೆ ನಿಂತಾಗ ಪಕ್ಷದಿಂದ ಬರಬೇಕಾದ ದೊಡ್ಡ ಮೊತ್ತ ನನ್ನ ಕೈ ಸೇರಲಿಲ್ಲ. ಪಕ್ಷ ಕೊಟ್ಟ ಈ ದೊಡ್ಡ ಮೊತ್ತವನ್ನು ಸಿ.ಪಿ ಯೋಗೇಶ್ವರ್ ಹಾಗೂ ಸಂತೋಷ್ ಅವರು ನನಗೆ ತಲುಪಿಸದೇ ದುರ್ಬಳಕೆ ಮಾಡಿಕೊಂಡಿದ್ದು, ನಾನು ಚುನಾವಣೆಯಲ್ಲಿ ಸೋಲುವಂತೆ ಪಿತೂರಿ ಮಾಡಿದ್ದಾರೆ ಎಂದು ವಿಶ್ವನಾಥ್ ಅವರು ಹೇಳಿದ್ದಾರೆ. ವಿಶ್ವನಾಥ್ ಅವರ ಈ ಹೇಳಿಕೆ ತಪ್ಪೊಪ್ಪಿಗೆ ಹೇಳಿಕೆಯಾಗಿದೆ. ಅವರು ಹೇಳಿರುವ ಈ ದೊಡ್ಡ ಮೊತ್ತ ಎಂದರೆ ಎಷ್ಟು? ಅದು 10 ಕೋಟಿಯಾ? 25 ಕೋಟಿಯಾ? ಇದನ್ನು ಸ್ಪಷ್ಟಪಡಿಸಬೇಕು. ಈ ಹಣದ ಮೂಲ ಏನು? ಈ ಹಣವನ್ನು ಯಾರಾದರೂ ದೇಣಿಗೆ ರೂಪದಲ್ಲಿ ಕೊಟ್ಟಿದ್ದಾರಾ? ಅಥವಾ ಬಿಡಿಎ ಹಗರಣದಲ್ಲಿ ಆರ್ ಟಿಜಿಎಸ್ ಮೂಲಕ ಬಂದ ಭ್ರಷ್ಟ ಹಣವನ್ನು ಕೊಟ್ಟರಾ? ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಜನರಿಗೆ ತಿಳಿಸಬೇಕು.’

‘ವಿಶ್ವನಾಥ್ ಅವರು ದೊಡ್ಡ ಮೊತ್ತದ ಹಣ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆ ದೊಡ್ಡ ಮೊತ್ತ ಬಿಳಿ ಹಣವಾ? ಕಪ್ಪು ಹಣವಾ? ಬಿಳಿ ಹಣವಾದರೆ ಅದು ಯಾವ, ಯಾರ ಖಾತೆಯಿಂದ ಬಂದಿತ್ತು? ಒಂದು ವೇಳೆ ಅದು ಕಪ್ಪು ಹಣವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ನಿಲ್ಲಿಸುವಂತೆ ಹೇಳಿದ್ದರು. ಈ ರೀತಿ ಹಣ ರವಾನೆ ಮಾಡುವುದು ಕಾನೂನು ರೀತಿಯ ಅಪರಾಧ. ಅದು ಅಕ್ರಮ ಹಣಕಾಸು ವ್ಯವಹಾರವಾಗುತ್ತದೆ, ಭ್ರಷ್ಟಾಚಾರವಾಗುತ್ತದೆ. ಸೆಕ್ಷನ್ 171, 123 ನಿಯಮದ ಉಲ್ಲಂಘನೆಯಾಗುತ್ತದೆ. ಜತೆಗೆ ಇದು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಉಲ್ಲಂಘನೆಯೂ ಆಗುತ್ತದೆ.’

‘ಈ ದೇಶದಲ್ಲಿ ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ಜೀವಂತವಾಗಿದ್ದರೆ, ವಿಶ್ವನಾಥ್ ಅವರ ಹೇಳಿಕೆ ಆಧಾರದ ಮೇಲೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಇಲಾಖೆಗಳು ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲಿವೆ ಎಂದು ಭಾವಿಸಿದ್ದೆ. ಆದರೆ ಆ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಬೇಕಿದ್ದರೆ, ಈ ಪ್ರಕರಣವನ್ನು ಕೂಡಲೇ ಹೈ ಕೋರ್ಟಿನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು.’

ಕಳೆದ ವರ್ಷ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಕೊಟ್ಟಂತೆ, ಇತರೆ ಅಭ್ಯರ್ಥಿಗಳಿಗೂ ದೊಡ್ಡ ಮೊತ್ತದ ಹಣ ರವಾನಿಸಲಾಗಿದೆ. ಇತ್ತೀಚೆಗೆ ನಡೆದ 2 ವಿಧಾನಸಭಾ ಕ್ಷೇತ್ರಗಳಿಗೂ ಹಣ ರವಾನಿಸಲಾಗಿದೆ. ಈ ರೀತಿಯ ಹಣ ರವಾನೆ ಅಕ್ರಮ ಹಣಕಾಸು ವ್ಯವಹಾರವಾಗುವುದಿಲ್ಲವೇ? ಈ ಕುರಿತು ತನಿಖೆ ನಡೆಸಬೇಕಾಗಿರುವುದು ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಸಿಬಿಐ ಸಂಸ್ಥೆಗಳ ಕರ್ತವ್ಯವಲ್ಲವೇ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಅವರ ಕಚೇರಿ ಗುರಿಯಾಗಿಸಿ ಅನೇಕ ಬೆಳವಣಿಗೆ ನಡೆಯುತ್ತಿದೆ:

ಕಳೆದ ಒಂದು ತಿಂಗಳ ಅವಧಿಯಿಂದ ಮುಖ್ಯಮಂತ್ರಿಗಳು ಹಾಗೂ ಅವರ ಕಚೇರಿ ಗುರಿಯಾಗಿಸಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ ಆಂತರಿಕ ವಿಚಾರ ಬೇರೆ. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಮೊದಲು ಸಿಎಂ ಕಾರ್ಯದರ್ಶಿ ಹಠಾತ್ ವಜಾಗೊಳ್ಳುತ್ತಾರೆ, ನಂತರ ಕೆಲ ದಿನಗಳ ಹಿಂದೆ ಮಾಧ್ಯಮ ಕಾರ್ಯದರ್ಶಿ ರಾಜೀನಾಮೆ ನೀಡುತ್ತಾರೆ. ನಂತರ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರು ‘ಶಾಸಕರು ಹಾಗೂ ಮುಖ್ಯಮಂತ್ರಿಗಳ ಸಲಗೆಗಾರರು ನನಗೆ ಹಣ ತಲುಪಿಸಲಿಲ್ಲ. ಆ ಮೂಲಕ ನನ್ನ ಸೋಲಿಗೆ ಸಂಚು ನಡೆಸಿದರು. ಇನ್ನು ಹೈಕೋರ್ಟ್ ನಲ್ಲಿ ನನ್ನ ಪರ ವಾದ ಮಾಡಲು ಅಡ್ವೊಕೇಟ್ ಜನರಲ್ ಅವರು ನನಗೆ ಸರಿಯಾದ ಸಹಕಾರ ನೀಡಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.

ವಿಶ್ವನಾಥ್ ಅವರೂ ಸೇರಿದಂತೆ, ಅವರು ಆರೋಪಿಸಿರುವ ಶಾಸಕರಾಗಲಿ, ರಾಜಕೀಯ ಸಲಹೆಗಾರರಾಗಲಿ, ಅಡ್ವಕೇಟ್ ಜನರಲ್ ಆಗಲಿ ಇವರೆಲ್ಲರೂ ಸಾರ್ವಜನಿಕ ಸೇವೆಯಲ್ಲಿರುವವರು. ಹೀಗಾಗಿ ಸಿಎಂ ಹಾಗೂ ಅವರ ಆಪ್ತ ವಲಯದವರಿಗೆ ಸಂಬಂಧಿಸಿದಂತೆ ನಡೆದಿರುವ ಈ ಬೆಳವಣಿಗೆಗಳ ಕುರಿತು ಸಾರ್ವಜನಿಕರಿಗೆ ಸತ್ಯಾಂಶ ತಲುಪಬೇಕಿದೆ.

ವಿಶ್ವನಾಥ್ ಅವರ ಆರೋಪ ಗಂಭೀರವಾಗಿದ್ದು. ಈ ದೊಡ್ಡ ಹಣ ಯಾರು, ಯಾವ ಕಾರಣಕ್ಕೆ ಕೊಟ್ಟಿದ್ದಾರೆ? ವಿಧಾನ ಪರಿಷತ್ ಸದಸ್ಯರು, ಸಲಹೆಗಾರರು ಮೋಸ ಮಾಡಿದ್ದಾರೆಯೇ ಎಂಬುದು ಬಯಲಿಗೆ ಬರಬೇಕು. ಈ ಕುರಿತು ಸಮಗ್ರ ನಡೆಯಬೇಕು. ಅದರಲ್ಲೂ ಹಣದ ಮೂಲ, ಅದು ಎಲ್ಲಿ ಹೋಯಿತು? ಎಂಬುದು ತಿಳಿಯಬೇಕು. ಈಗಾಗಲೇ ರಾಜಕಾರಣ ವ್ಯಾಪಾರಿಕರಣವಾಗುತ್ತಿದೆ ಎಂದು ಸಾರ್ವಜನಿಕರಲ್ಲಿ ಅಭಿಪ್ರಾಯ ಮೂಡಿದ್ದು, ಈ ನಂಬಿಕೆ ಗಟ್ಟಿಯಾಗುತ್ತದೆ ಹಾಗೂ ಈ ಪ್ರಕರಣದಲ್ಲಿ ನಂಬಿಕೆ ದ್ರೋಹ, ಭ್ರಷ್ಟಾಚಾರ ಎಲ್ಲ ವಿಚಾರ ಅಡಗಿದೆ. ಹೀಗಾಗಿ ಈ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು’ ಎಂದರು.

ಸಭೆಯಲ್ಲಿ ಜಿಟಿಡಿ ಅವರಿಗೆ ದುಡ್ಡು ಕೊಟ್ಟ ವಿಚಾರ ಪ್ರಸ್ತಾಪವಾಗಿಲ್ಲ:

ಜಿ.ಟಿ ದೇವೇಗೌಡ ಅವರಿಗೆ ಹಣ ನೀಡಲಾಗಿತ್ತು ಎಂಬ ವಿಚಾರವಾಗಿ ಸಿದ್ದರಾಮಯ್ಯನವರು ಪಕ್ಷದ ಸಭೆಯಲ್ಲಿ ತಿಳಿಸಿದ್ದರು ಎಂಬ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖಂಡರು, ‘ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಜಿ.ಟಿ ದೇವೇಗೌಡರಿಗೆ ಹಣ ನೀಡಲಾಗಿದೆ ಎಂಬ ವಿಚಾರವನ್ನು ಸಿದ್ದರಾಮಯ್ಯನವರು ಪ್ರಸ್ತಾಪಿಸಿಯೇ ಇಲ್ಲ. ನಾನು ಉಗ್ರಪ್ಪನವರು ಅದೇ ಸಭೆಯಲ್ಲಿ ಇದ್ದೆವು. ಸಿದ್ದರಾಮಯ್ಯನವರು ಆ ವಿಚಾರವನ್ನು ಪ್ರಸ್ತಾಪಿಸಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಇನ್ನು ಕುರುಬರನ್ನು ಎಸ್ ಟಿಗೆ ಸೇರಿಸುವ ವಿಚಾರವಾಗಿ ಹಾಗೂ ಇದರಲ್ಲಿ ಆರ್ ಎಸ್ ಎಸ್ ಕೈವಾಡದ ಕುರಿತಾಗಿ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆ ಕುರಿತು ಪ್ರತ್ಯೇಕವಾಗಿ ಮಾತನಾಡುತ್ತೇನೆ’ ಎಂದು ತಿಳಿಸಿದರು.

Key words: black money -white money -BJP sent – H. Vishwanath-  State Congress –demands- judicial inquiry