ಲೋಕಸಭೆ ಚುನಾವಣೆಗಾಗಿ ಅಹಿಂದ ಸಮುದಾಯದಲ್ಲಿ ಒಡಕು ಮೂಡಿಸಲು ಬಿಜೆಪಿಗರ ಪ್ರಯತ್ನ: ಡಾ.ಹೆಚ್.ಸಿ.ಮಹದೇವಪ್ಪ

ಬೆಂಗಳೂರು, ಡಿಸೆಂಬರ್ 19, 2023 (www.justkannada.in): ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಅಹಿಂದ ಸಮುದಾಯದಲ್ಲಿ ಒಡಕು ಮೂಡಿಸಬೇಕು ಎಂಬ ಕಾರಣಕ್ಕೆ ಬಿಜೆಪಿಗರು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದು ಇದೀಗ  ಎಲ್ಲ ವಿಷಯಗಳನ್ನೂ ರಾಜಕೀಯಗೊಳಿಸಲು ನಿರ್ಧರಿಸಿದಂತಿದೆ ಕಾಣುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರಜೋಳ ಹಲ್ಲೆಯ ಹಿಂದೆ ಮಹದೇವಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎಂಬ ಪಿ.ರಾಜೀವ್ ಹೇಳಿಕೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಅಹಿಂದ ಸಮುದಾಯದಲ್ಲಿ ಒಡಕು ಮೂಡಿಸಬೇಕು ಎಂಬ ಕಾರಣಕ್ಕೆ ಬಿಜೆಪಿಗರು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದು ಇದೀಗ  ಎಲ್ಲ ವಿಷಯಗಳನ್ನೂ ರಾಜಕೀಯಗೊಳಿಸಲು ನಿರ್ಧರಿಸಿದಂತಿದೆ ಕಾಣುತ್ತಿದೆ. ಬೆಳಗಾವಿಯ ಮಹಿಳೆಯ ಪ್ರಕರಣದಿಂದ ಮೊದಲಾದ ಇವರ ಕೀಳು ರಾಜಕೀಯವು, ಮೊನ್ನೆಯ ಕೋಲಾರದ ಮಾಲೂರಿನ ಮೊರಾರ್ಜಿ ಶಾಲೆಯ ಘಟನೆಯಲ್ಲಿ ಮುಂದುವರೆದು ಈ ದಿನ ಕಾರಜೋಳ ಅವರ ಘಟನೆಯವರೆಗೂ ವ್ಯಾಪಿಸಿದೆ. ಆದರೆ ಬೆಳಗಾವಿ ಮತ್ತು ಕೋಲಾರದ ಪ್ರಕರಣದಲ್ಲಿ ನಮ್ಮ ಸರ್ಕಾರವು ಈ ವಿಪಕ್ಷದ ಕೀಳು ರಾಜಕೀಯ ಆರಂಭವಾಗುವ ಮೊದಲೇ  ಸಮಸ್ಯೆಗೆ ಸ್ಪಂದಿಸಿ, ಸಮರ್ಥವಾಗಿ ಕಾರ್ಯನಿರ್ವಹಿಸಿತು. ಆದರೂ ವಿರೋಧ ಪಕ್ಷಗಳು ಘಟನೆಯ ಸ್ಥಳಗಳಿಗೆ ಹೋಗಿ ಸುಮ್ಮನೇ ಪ್ರತಿಭಟನೆ ಮಾಡುವ ನಾಟಕ ಮಾಡುತ್ತಿರುವುದನ್ನು ನೋಡಿದರೆ, ಇವರೇನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ 19000 ಕೋಟಿ ರೂಪಾಯಿಗಳ SCSP – TSP ಅನುದಾನವನ್ನು ನೇರವಾಗಿಯೇ ಇತರೆ ಅಭಿವೃದ್ಧಿ ಕೆಲಸಗಳಿಗೆ ( ಪರಿಶಿಷ್ಟ ಸಮುದಾಯಗಳಿಗೆ ಅದು ಹೇಗೂ ಬಳಕೆ ಆಗಲಿಲ್ಲ) ವರ್ಗಾವಣೆ ಮಾಡಿದಾಗ ನಿದ್ರೆ ಮಾಡುತ್ತಿದ್ದ ಪಿ.ರಾಜೀವ್ ಅವರು ಈಗ ನಮ್ಮ ಸರ್ಕಾರವು ದಲಿತರಿಗೆ ಅನುಕೂಲ‌ ಮಾಡುವ ಕೆಲಸ ಮಾಡುತ್ತಿರುವಾಗ, ನಿದ್ರೆಯಿಂದ ಎದ್ದು ಬಂದು ಸುಳ್ಳು ಆರೋಪ ಮಾಡುತ್ತಿರುವುದು ಇವರ ಹತಾಶೆ ಮಿತಿ ಮೀರಿದೆ ಎಂದು ತೋರಿಸುತ್ತಿದೆ ಎಂದಿದ್ದಾರೆ.

ಮೊನ್ನೆ ಸಿದ್ದರಾಮಯ್ಯ ಅವರ ಸದನದ ಮಾತಿನ ವೀಡಿಯೋವನ್ನು ತಿರುಚಿ ಸಿಕ್ಕಿ ಬಿದ್ದರು, ಈ ದಿನ ಹಲ್ಲೆ ಮಾಡಿಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಮುಗಿಯುವುದರ ಒಳಗಾಗಿ ಅಹಿಂದ ವರ್ಗಗಳನ್ಬು ಒಡೆಯುವ ಕೆಲಸ ಮಾಡುವ ಮಾರ್ಗದಲ್ಲಿ ಇವರು ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಂಡು ಮತ್ತೊಮ್ಮೆ ಕರ್ನಾಟಕದಲ್ಲಿ ಜನಾದೇಶವನ್ನು ಕಳೆದುಕೊಳ್ಳುವುದು ನಿಶ್ಚಿತ ಎಂದು ಡಾ.ಹೆಚ್.ಸಿ.ಮಹದೇವಪ್ಪನವರು ತಿಳಿಸಿದ್ದಾರೆ.