ಅಕ್ರಮ ಸೀರೆ ಸಂಗ್ರಹ, ಹಂಚಿಕೆ ಆರೋಪ: ಕಾಂಗ್ರೆಸ್-ಜೆಡಿಎಸ್ ನಡುವೆ ವಾಗ್ವಾದ, ಸ್ಥಳದಲ್ಲಿ ಹೈಡ್ರಾಮಾ.

ರಾಮನಗರ,ಮಾರ್ಚ್,20,2024(www.justkannada.in): ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದು ಈ ಮಧ್ಯೆ ಕಾಂಗ್ರೆಸ್ ನಿಂದ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ವಿರುದ್ದ ಆರೋಪಿಸಿದ್ದಾರೆ.   ರಾಮನಗರ ದ್ಯಾವರಸೇಗೌಡನ ದೊಡ್ಡಿ ಬಳಿಯ ಗೋಡೌನ್ ನಲ್ಲಿ10 ಸಾವಿರಕ್ಕೂ ಹೆಚ್ಚು ಸೀರೆಗಳನ್ನ ಅಕ್ರಮವಾಗಿ ಸಂಗ್ರಹಿಸಲಾಗಿದ್ದು, ಗೋಡೌನ್ ನಿಂದ ಸೀರೆ ತುಂಬಿಕೊಂಡು ಹೋಗುವ ವೇಳೆ ವಾಹನವನ್ನ ಜೆಡಿಎಸ್ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ. ಜೆಡಿಎಸ್ ಕಾರ್ಯಕರ್ತರು ವಾಹನ ತಡೆಗಟ್ಟುತ್ತಿದಂತೆ ಗೋಡೌನ್ ಸಿಬ್ಬಂದಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರಿಂದ ಮತದಾರರಿಗೆ ಹಂಚಲು ಸೀರೆಯನ್ನ ಸಂಗ್ರಹಿದ್ದ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್, ಡಿಎಸ್ಪಿ ದಿನಕರ್ ಶೆಟ್ಟಿ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದು, ಸೀರೆ ದಾಸ್ತಾನು ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ  ನಡೆದಿದೆ.

ಸ್ಥಳದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೈಡ್ರಾಮಾ ನಡೆದಿದ್ದು ಕಾಂಗ್ರೆಸ್ ಶಾಸಕನ ಆಪ್ತನಿಂದಲೇ ಸೀರೆ ಹಂಚಿಕೆ  ಮಾಡಲಾಗುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.

ಸೀರೆ ಕವರ್ ಮೇಲೆ ಯಾವ ಸ್ಟಿಕ್ಕರ್ ಇಲ್ಲ, ಯಾರ ಹೆಸರೂ ಇಲ್ಲ. ಕೇವಲ ಗೋಡೌನ್ ನಲ್ಲಿ ಇದ್ದ ಮಾತ್ರಕ್ಕೆ ಕಾಂಗ್ರೆಸ್ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಿಡಿ ಕಾರಿದ್ದಾರೆ. ಈ ವೇಳೆ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.  ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ, ಎರಡೂ ಪಕ್ಷದ ಕಾರ್ಯಕರ್ತರನ್ನ ಸ್ಥಳದಿಂದ ಕಳುಹಿಸಿದ್ದಾರೆ.

Key words: Allegation – illegal –saree- collection- distribution -Congress-JDS