ಐದು ದಶಕಗಳ ಬಳಿಕ ಅರ್ಕಾವತಿ ನದಿಗೆ ಜೀವ ಕಳೆ

ಬೆಂಗಳೂರು, ಆಗಸ್ಟ್ 05, 2022 (www.justkannada.in): 52 ವರ್ಷಗಳ ಬಳಿಕ ಅರ್ಕಾವತಿ ನದಿಗೆ ಜೀವ ಕಳೆ ಬಂದಿದ್ದು, ಪ್ರವಾಹೋಪಾದಿಯಲ್ಲಿ ಹರಿದಿದೆ.

ಎಡೆಬಿಡದೇ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಅರ್ಕಾವತಿ ನದಿ ಐದು ದಶಕಗಳ ಬಳಿಕ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಇದುವರೆಗೆ ಕುರುಹು ಇಲ್ಲದಂತಿದ್ದ ನದಿಯಲ್ಲಿ ಪ್ರವಾಹ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಸುಮಾರು ಐದು ದಶಕಗಳ ಬಳಿಕ ಕಂಡು ಬಂದ ಪ್ರವಾಹದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಮಂಚನಬೆಲೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಬಿಡುತ್ತಿರುವುದರಿಂದ ಅರ್ಕಾವತಿ ನದಿ ಪಾತ್ರದ ಜಮೀನುಗಳು ಮುಳುಗಡೆಯಾಗಿ ಜನ ಪರದಾಡುವಂತಾಗಿದೆ.

ಒಂದು ಕಾಲಕ್ಕೆ ಬೆಂಗಳೂರು ಮಹಾನಗರದ ಜನತೆಗೆ ನೀರು ಉಣಿಸುತ್ತಿದ್ದ ಅರ್ಕಾವತಿ ನದಿ ಬಳಿಕ ಮಳೆಯ ಕೊರತೆಯಿಂದ ಬತ್ತಿಹೋಗಿ ಕೊಳಚೆ ನೀರು ಹರಿಯುವ ಚರಂಡಿಯಂತಾಗಿತ್ತು.