ಹಾರರ್ ಮಿಸ್ಟರಿ ʼದೈಜಿʼಗೆ ರೆಡಿಯಾದ ನಟ ರಮೇಶ್ ಅರವಿಂದ್ !

ಬೆಂಗಳೂರು, ಸೆಪ್ಟೆಂಬರ್ 13, 2023 (www.justkannada.in): ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತೊಂದು ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ.

ಹೌದು. ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿರುವ ʼದೈಜಿʼ ಚಿತ್ರಕ್ಕಾಗಿ ರಮೇಶ್ ಅರವಿಂದ್ ಆಕಾಶ್ ಶ್ರೀವತ್ಸ ಒಂದಾಗುತ್ತಿದ್ದಾರೆ.

ʼದೈಜಿʼ ಹಾರರ್ ಮಿಸ್ಟರಿ ಕಥೆಯುಳ್ಳ ಚಿತ್ರವಾಗಿದೆ ಎಂಬುದು ಈಗಾಗಲೇ ಬಹಿರಂಗವಾಗಿದೆ.   ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ. ಹೀಗಾಗಿ ಶೀರ್ಷಿಕೆಯೇ ಸಾಕಷ್ಟು ಗಮನ ಸೆಳೆದಿದೆ.

ಚಿತ್ರಕಥೆಯನ್ನು ಶಿವಾಜಿ ಸುರತ್ಕಲ್ ಬರೆದ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ರವರು ನಿರ್ಮಾಪಕ ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಬರೆದಿದ್ದಾರೆ.

ಚಿತ್ರೀಕರಣ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ ಎನ್ನಲಾಗಿದೆ.