ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದಿದ್ದ ನಿರ್ಮಾಪಕ ಉಮಾಪತಿಗೆ ನಟ ದರ್ಶನ್ ಖಡಕ್ ತಿರುಗೇಟು.

ಬೆಂಗಳೂರು,ಫೆಬ್ರವರಿ,20,2024(www.justkannada.in): ಕಾಟೇರ ಚಿತ್ರದ ಕತೆ ಹೇಳಿದ್ದು ನಾನು, ಟೈಟಲ್ ಕೊಟ್ಟಿದ್ದು ನಾನೇ ಎಂದು ಹೇಳಿಕೆ ನೀಡಿದ್ದ ನಿರ್ಮಾಪಕ ಉಮಾಪತಿಗೆ ನಟ ಚಾಲೇಂಜಿಂಗ್ ಸ್ಟಾರ್ ದರ್ಶನ್ ಖಡಕ್ ತಿರುಗೇಟು ನೀಡಿದ್ದಾರೆ.

ಕಾಟೇರ ಚಿತ್ರದ 50ನೇ ದಿನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ನಟ ದರ್ಶನ್, ಕೆಲವರು ಕಾಟೇರ ಚಿತ್ರದ ಕತೆ, ಟೈಟಲ್ ನಾನು ಕೊಟ್ಟಿದ್ದು ಅಂತ ಹೇಳಿಕೊಳ್ಳುತ್ತಿದ್ದಾರೆ. ಅಯ್ಯೋ ತಗಡೇ, ನಿನಗೆ ರಾಬರ್ಟ್ ಕಥೆ ಕೊಟ್ಟಿದ್ದೇ ನಾನು. ಯಾಕಪ್ಪ ಬಂದು ಬಂದು ನನ್ನ ಹತ್ತಿರವೇ ಗುಮ್ಮಿಸಿಕೊಳ್ತೀಯಾ ಎಂದು ಪರೋಕ್ಷವಾಗಿ ನಿರ್ಮಾಪಕ ಉಮಾಪತಿ ಕುಟುಕಿದರು.

ರಾಬರ್ಟ್ ಚಿತ್ರದ ಕತೆ ಕೊಟ್ಟಿದ್ದೇ ನಾನು. ನೀನು ಕತೆ, ಟೈಟಲ್ ಕೊಟ್ಟಿದ್ದೇ ನಾನು ಅಂತ ಹೇಳಿಕೊಳ್ಳುತ್ತಿದ್ದರೇ, ನೀನೇ ಕಾಟೇರ ಚಿತ್ರವನ್ನು ಮಾಡಬಹುದಾಗಿತ್ತಲ್ಲ. ಯಾಕೆ ಮಾಡಲಿಲ್ಲ? ನಿನ್ನ ಜಡ್ಜ್ ಮೆಂಟ್ ಸರಿಯಿಲ್ಲ ಅಂದೆಂಗೆ ಆಯ್ತು ಎಂದು ಕಿಡಿಕಾರಿದರು.

ನಟ ದರ್ಶನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್,  ಈಗ ನಾವು ಎಲ್ಲದಕ್ಕೂ ಉತ್ತರ ಕೊಟ್ಟುಕೊಂಡು ಕೂರುವುದಿಲ್ಲ. ರಾಬರ್ಟ್ ಚಿತ್ರಕ್ಕೆ ಕತೆ, ಟೈಟಲ್, ಹಣ ಕೊಡ ಅವರೇ ಹಾಕಿದ್ರು. ನಾನಿನ್ನೂ ಅವರ ಮಟ್ಟಕ್ಕೆ ಬೆಳಎದಿಲ್ಲ. ಬೆಳೆದಾಗ ಉತ್ತರ ಕೊಡುತ್ತೇನೆ. ಸಮಯ, ಸಂದರ್ಭ ಬಂದಾಗ ಉತ್ತರ ಕೊಟ್ಟೇ ಕೊಡುತ್ತೇನೆ. ನಟ ದರ್ಶನ್ ಗೆಲುವಿಗೆ ನಮ್ಮಿಂದ ಏನೂ ಕೊಡುಗೆ ಇಲ್ಲ. ದರ್ಶನ್ ಬಗ್ಗೆ ನಾನು ಹೇಳಬೇಕಾದದ್ದು ಬೇರೆ ಇದೆ. ಯಾರನ್ನು ಕೂರಿಸಿಕೊಂಡು ಕತೆ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ಆ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ ಎಂದರು.

Key words: Actor -Darshan – producer Umapati – title -Katera.