ಮೈಕ್ರೋ ಫೈನಾನ್ಸಿಂಗ್‌ ನಲ್ಲಿ ಎಸ್‌ ಎನ್‌ ಡಿಪಿ ಸಂಸ್ಥೆಯ ಸಾಧನೆ ಸರ್ಕಾರಕ್ಕೆ ಮಾದರಿ- ಸಚಿವ  ಅಶ್ವತ್ ನಾರಾಯಣ್.

ಮೈಸೂರು,ಸೆಪ್ಟಂಬರ್,29,2022(www.justkannada.in):  ಏಳು ಲಕ್ಷ ಸ್ವಸಹಾಯ ಸಂಘಗಳನ್ನು ರಚಿಸುವ ಮೂಲಕ ವರ್ಷಕ್ಕೆ 10 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿರುವ ಕೇರಳದ ಎಸ್‌ಎನ್‌ಡಿಪಿ ಯೋಗಂ (ಶ್ರೀ ನಾರಾಯಣ ಧರ್ಮ ಪರಿಪಾಲನ) ಸಂಸ್ಥೆಯ ಸಾಧನೆಯು ಮೈಕ್ರೋ ಫೈನಾನ್ಸಿಂಗ್‌ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಕ್ಕೆ ಮಾದರಿಯಾಗಿದೆ. ಇಂತಹ ಸಂಸ್ಥೆಗೆ ಕರ್ನಾಟಕದಲ್ಲಿ ಮುಕ್ತ ಸ್ವಾಗತವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಹೇಳಿದ್ದಾರೆ.

ಎಸ್‌ ಎನ್‌ ಡಿಪಿ ಯೋಗಂ ಸಂಸ್ಥೆಯು ಗುರುವಾರ ಇಲ್ಲಿ ಏರ್ಪಡಿಸಿದ್ದ ನಾಯಕತ್ವ ಶಿಬಿರ ಮತ್ತು ವೆಳ್ಳಪಳ್ಳಿ ನಟೇಶನ್ ಅವರು ಪ್ರಧಾನ ಕಾರ್ಯದರ್ಶಿಯಾಗಿ 25 ವರ್ಷ ಅಧಿಕಾರಾವಧಿಯ ರಜತ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಕೂಡ ಸ್ವಸಹಾಯ ಸಂಘಗಳಿಗೆ ಸರಕಾರವು ಸಾಕಷ್ಟು ಉತ್ತೇಜನ ನೀಡುತ್ತಿದೆ. ನಾವು ಕೂಡ 2 ಲಕ್ಷ ಸ್ವಸಹಾಯ ಸಂಘಗಳನ್ನು ಹೊಂದಿದ್ದು 10 ಸಾವಿರ ಕೋಟಿ ರೂ.ಗಳ ಆರ್ಥಿಕ ವಹಿವಾಟು ನಡೆಸುತ್ತಿದೆ. ಈ ನಿಟ್ಟಿನಲ್ಲಿ ನಾರಾಯಣ ಗುರುಗಳ ಆಶೀರ್ವಾದದೊಂದಿಗೆ ಮುನ್ನಡೆಯುತ್ತಿರುವ ಎಸ್‌ಎನ್‌ ಡಿಪಿ ಯೋಗಂ ಸಂಸ್ಥೆಯು ಅನುಕರಣ ಯೋಗ್ಯವಾಗಿ ಕಾಣುತ್ತಿದೆ ಎಂದು ಅವರು ತಿಳಿಸಿದರು.

ನಟೇಶನ್ ಅವರು 1997ರಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಎಸ್‌ಎನ್‌ಡಿಪಿ ಯೋಗಂ ಸಂಸ್ಥೆಯು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮೂರು ಪಟ್ಟು ಬೆಳವಣಿಗೆಯನ್ನು ಕಂಡಿದೆ. ಇಂತಹ ಸಾಧನೆ ಒಂದು ಸರಕಾರದಿಂದಲೂ ಸಾಧ್ಯವಿಲ್ಲ. ಪ್ರತಿಭೆಗೆ ಮನ್ನಣೆ ನೀಡುವ ಕರ್ನಾಟಕದಲ್ಲೂ ಈ ಸಂಸ್ಥೆಯು ತನ್ನ ಹೆಜ್ಜೆಗುರುತುಗಳನ್ನು ಮೂಡಿಸಬೇಕು ಎಂದು ಅವರು ನುಡಿದರು.

ಇಂದು ಜಗತ್ತಿನಲ್ಲಿ ತೀವ್ರ ಸ್ಪರ್ಧೆ ಇದೆ. ಈ ಕಾಲಘಟ್ಟದಲ್ಲಿ ಗುಣಾತ್ಮಕ ಶಿಕ್ಷಣ, ಗುಣಮಟ್ಟದ ಜ್ಞಾನ ಮತ್ತು ಅತ್ಯುತ್ತಮ ಕೌಶಲ್ಯಗಳು ನಿರ್ಣಾಯಕವಾಗಿವೆ. ಇವಿಲ್ಲದಿದ್ದರೆ ಜಾಗತಿಕ ಸಮುದಾಯದ ಸ್ಪರ್ಧೆಯನ್ನು ಎದುರಿಸುವ ಆತ್ಮವಿಶ್ವಾಸವೇ ಬರುವುದಿಲ್ಲ. ಇದನ್ನು ಗಮನಿಸಿಯೇ ರಾಜ್ಯದಲ್ಲಿ ಕಲಿಕೆಯ ವ್ಯವಸ್ಥೆಯನ್ನು ಕ್ರಾಂತಿಕಾರಕವಾಗಿ ಬದಲಾಯಿಸಲಾಗಿದೆ ಎಂದು ಅವರು ವಿವರಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಿಂದಿನಂತೆ ಅನಗತ್ಯ ನಿಯಂತ್ರಣಗಳಿಲ್ಲ. ಅವೆಲ್ಲವನ್ನೂ ಕಿತ್ತೊಗೆದು, ಯುವಜನರನ್ನು ಸಮಾಜಪರ ವ್ಯಕ್ತಿಗಳನ್ನಾಗಿ ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ. ಹೀಗಾಗಿ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಅಗತ್ಯ  ಸ್ವಾಯತ್ತತೆ ಮತ್ತು ಸ್ವಾತಂತ್ರವನ್ನು ಕೊಡಲಾಗುತ್ತಿದೆ. ಖಾಸಗಿ ವಲಯದವರು ಜಾಗತಿಕ ಮಟ್ಟದ ಶಿಕ್ಷಣವನ್ನು ಕೊಡುವಂತಹ ಕಾರ್ಯ ಪರಿಸರವನ್ನು ಸೃಷ್ಟಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು.

ವ್ಯಕ್ತಿಕೇಂದ್ರಿತ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ, ನೂರಾರು ವರ್ಷಗಳ ಹಿಂದೆ ಮೈಸೂರು ಮಹಾರಾಜರೇ ಸಾಮುದಾಯಿಕ ಹಿತವಿರುವಂತಹ ಉಪಕ್ರಮಗಳನ್ನು ನಾಡಿನಲ್ಲಿ ಆರಂಭಿಸಿದ್ದಾರೆ. ಇದಕ್ಕೆ ತಕ್ಕಂತೆ ನಿರ್ದಿಷ್ಟವಾಗಿ ಬೆಂಗಳೂರು ನಗರವು ಕಾಸ್ಮೋಪಾಲಿಟನ್ ಸಂಸ್ಕೃತಿಯ ನೆಲೆಯಾಗಿದ್ದು, ಇಡೀ ಜಗತ್ತಿನಲ್ಲಿ ಎರಡನೇ ಸಿಲಿಕಾನ್ ವ್ಯಾಲಿ ಎನ್ನುವ ಹಿರಿಮೆಯನ್ನು ಸಂಪಾದಿಸಿದೆ ಎಂದು ಅವರು ಬಣ್ಣಿಸಿದರು.

ಸಂಘಟನೆಯು ಸಾಮುದಾಯಿಕ ಹಿತಕ್ಕೆ ಎಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎನ್ನುವುದಕ್ಕೆ ಎಸ್‌ಎನ್‌ಡಿಪಿ ಯೋಗಂ ಸಂಸ್ಥೆಯ ಸಾಧನೆಯೇ ನಿದರ್ಶನವಾಗಿದೆ. ರಾಜ್ಯದಲ್ಲಿ ಪ್ರಬಲ ಸಮುದಾಯಗಳು ಈ ಸಂಸ್ಥೆಯನ್ನು ನೋಡಿ ಸಂಘಟನೆಯ ಶಕ್ತಿಯನ್ನು ಅರಿಯಬೇಕು. ವಿಷಾದದ ಸಂಗತಿಯೆಂದರೆ, ನಮ್ಮಲ್ಲಿ ಹೆಚ್ಚಿನ ಸಮುದಾಯಗಳಿಗೆ ಇಂತಹ ಸಾಕ್ಷಾತ್ಕಾರ ಆಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಶ್ರೀ ಶಿವಗಿರಿ ಮಠದ ಶ್ರೀ ಗುರುಪ್ರಸಾದ ಸ್ವಾಮೀಜಿ, ಎಸ್‌ಎನ್‌ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಳ್ಳಪಳ್ಳಿ ನಟೇಶನ್, ಅವರ ಪತ್ನಿ ಪ್ರೀತಿ ನಟೇಶನ್, ಉಪಾಧ್ಯಕ್ಷ ವೆಳ್ಳಪಳ್ಳಿ ತುಷಾರ್, ಸಂಸ್ಥೆಯ ಕಾರ್ಯದರ್ಶಿ ಆರ್ಯಕಾಂಡಿ ಸಂತೋಷ್, ಡಾ.ಬಿನು ಕಣ್ಣಂತನಂ, ಕೌನ್ಸಿಲರ್ ಪಿ.ಟಿ.ಮನ್ಮದನ್ ಉಪಸ್ಥಿತರಿದ್ದರು.

Key words: achievement -SNDP -organization -micro financing – Minister- Ashwath Narayan.