Thursday, August 6, 2026

BDA Apartments

Home Front Page ಸಾಹಿತಿಗಳ ನಡೆಗೆ ಆಕ್ಷೇಪ: ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ...

ಸಾಹಿತಿಗಳ ನಡೆಗೆ ಆಕ್ಷೇಪ: ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಡಿ.ವಿ ಸದಾನಂದಗೌಡ.

ಮೈಸೂರು,ಜೂನ್,1,2022(www.justkannada.in): ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ  ನಮ್ಮ ಅಭ್ಯರ್ಥಿ ಮೈ‌.ವಿ.ರವಿಶಂಕರ್ ಗೆಲುವು ಸಾಧಿಸಲಿದ್ದಾರೆ. ಈ ಬಾರಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ, ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್ ನಾಗೇಂದ್ರ ಸೇರಿ ಸ್ಥಳೀಯ ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಆದರೆ ಕೆ.ಆರ್.ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಸುದ್ದಿಗೋಷ್ಠಿಯಿಂದ ದೂರ ಉಳಿದಿದ್ದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಡಿ.ವಿ ಸದಾನಂದಗೌಡರು, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೈ‌.ವಿ.ರವಿಶಂಕರ್ ಗೆ ಪೂರಕ ವಾತಾವರಣವಿದೆ. ಕಳೆದ ಚುನಾವಣೆಯಲ್ಲಿ ಕೇವಲ 189 ಮತಗಳ ಅಂತರದಿಂದ ಮೈ ವಿ ರವಿಶಂಕರ್ ಸೋಲನುಭವಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ. ಈ ಬಾರಿ 60% ಮತ ಗಳಿಸುವ ಮೂಲಕ ರವಿಶಂಕರ್ ಜಯಗಳಿಸಲಿದ್ದಾರೆ. ಉಳಿದ ಅಭ್ಯರ್ಥಿಗಳು ನಮ್ಮ ಸಮೀಪಕ್ಕೆ ಬರಲೂ ಸಾಧ್ಯವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಡಿ.ವಿ ಸದಾನಂದಗೌಡರು, ಇದು ನಿನ್ನೆಯಿಂದ ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ ಅಗಿದೆ. ಸಿದ್ದರಾಮಯ್ಯ ರಿಯಾಕ್ಟ್ ಮಾಡಲಿಕ್ಕೆ ಯೋಗ್ಯವಾದ ವಿಚಾರ ಚರ್ಚೆ ಮಾಡ್ತಿಲ್ಲ. ಅವರಿಗೆ ಬೇರೆ ವಿಚಾರಗಳು ಇಲ್ಲ. ಅವರಿಗೆ ಸದಾ ಆರ್ ಎಸ್ ಎಸ್ ಮಾತ್ರ ಕಾಣಿಸುತ್ತಿದೆ. ಹಾಗಾಗಿ ಆರ್ ಎಸ್ ಎಸ್ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವ ಭೀತಿ ಇದೆ. ಹಾಗಾಗಿ ಸಿದ್ದರಾಮಯ್ಯ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ‌ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಪದೇ ಪದೇ ಡೆಲ್ಲಿಗೆ ಹೋಗ್ತಾರೆ. ಮತ್ತೆ ಇಲ್ಲಿ ಬಂದು ಡಿಕೆಶಿ ಜೊತೆ ಕುಸ್ತಿ ಮಾಡ್ತಾರೆ. ಕಾಂಗ್ರೆಸ್ ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ತಿದೆ. ಬ್ರಿಜೇಶ್ ಕಾಳಪ್ಪರಂತ ನಾಯಕ ಕಾಂಗ್ರೆಸ್ ಗೆ ರಾಜಿನಾಮೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೀನಾಯವಾಗ್ತಿದೆ. ಹಾಗಾಗಿ ಅವರ ಟ್ವೀಟ್ ಗಳಿಗೆ ಉತ್ತರ ಕೊಡದಿರುವುದೇ ಲೇಸು. ಉತ್ತರಕ್ಕೆ ಯೋಗ್ಯವಲ್ಲದ ಪ್ರಶ್ನೆಗಳಿಗೆ ಸುಮ್ಮನಿರಬೇಕು. ಅವರಿಗೆ ಕನಸ್ಸಿನಲ್ಲಿ, ಮನಸ್ಸಿನಲ್ಲಿ ಆರ್ಎಸ್ಎಸ್ ಜಪ. ಯಾರ ಬಗ್ಗೆ ಭಯ ಇರುತ್ತೋ ಅವರ ಬಗ್ಗೆಯೇ ಹೆಚ್ಚು ಮಾತನಾಡ್ತಾರೆ ಎಂದು ಟೀಕಿಸಿದರು.

ಸಾಹಿತಿಗಳು ತಮ್ಮ ಸಾಹಿತ್ಯವನ್ನು ಹಿಂಪಡೆಯಲು ಸರ್ಕಾರಕ್ಕೆ ಪತ್ರ ಬರೆಯುವುದು ಸರಿಯಲ್ಲ.

ಇದೇ ವೇಳೆ ಸಾಹಿತಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ ಡಿ.ವಿ ಸದಾನಂದಗೌಡರು, ಪಠ್ಯ ಪುಸ್ತಕದಲ್ಲಿ ಏನಾದರೂ ತಪ್ಪುಗಳಿದ್ದರೇ ಹೇಳಿ ಅದನ್ನು ಸರಿಪಡಿಸುತ್ತೇವೆ. ಮುಖ್ಯಮಂತ್ರಿ ಕೂಡ ಇದೇ ಭರವಸೆಯನ್ನು ನೀಡಿದ್ದಾರೆ. ರಾಷ್ಟ್ರಕವಿ ಕುವೆಂಪುರವರಿಗೆ ನಾವು ಯಾವುದೇ ರೀತಿಯ ಅವಮಾನ ಮಾಡಿಲ್ಲ. ಅವರ ಎರಡು ಗೀತೆಗಳನ್ನು ನಾಡಗೀತೆಗಳನ್ನಾಗಿ ಮಾಡಿದ್ದೇ ಬಿಜೆಪಿ ಸರ್ಕಾರ. ಪ್ರತಿಪಕ್ಷ ನಾಯಕರು ಹಳೆಯ ವಿಚಾರಗಳನ್ನು ಹಿಡಿದು ನೇತಾಡುತ್ತಿದ್ದಾರೆ. ಸಾಹಿತಿಗಳು ತಮ್ಮ ಸಾಹಿತ್ಯವನ್ನು ಹಿಂಪಡೆಯಲು ಸರ್ಕಾರಕ್ಕೆ ಪತ್ರ ಬರೆಯುವುದು ಸರಿಯಲ್ಲ. ಅದರ ಬದಲು ಏನು ಸರಿಮಾಡಿ ಎಂದು ಸಲಹೆ ಕೊಡಲಿ ಎಂದರು.

Key words: mysore-  DV Sadananda Gowda -expressed — BJP – Southern Graduate-election