ಶಿಕ್ಷಣ ಇಲಾಖೆ ಪುಸ್ತಕದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವಹೇಳನ: ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ದೂರು…

ತುಮಕೂರು,ನ,13,2019(www.justkannada.in):  ಸಂವಿಧಾನ ದಿನಾಚರಣೆಯ ಸುತ್ತೋಲೆಯಲ್ಲಿ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ದಂಡಾಧಿಕಾರಿಗೆ ಕರ್ನಾಟಕ ದಲಿತ ಸಂರಕ್ಷಣಾ ಸಮಿತಿ ವತಿಯಿಂದ ದೂರು ನೀಡಲಾಗಿದೆ.

ಈ ಬಗ್ಗೆ ದೂರು ನೀಡಿರುವ ಕರ್ನಾಟಕ ದಲಿತ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕರಾದ ಜಟ್ಟಿ ಅಗ್ರಹಾರ ನಾಗರಾಜು, ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವತಿಯಿಂದ 2019-20ರ ಶೈಕ್ಷಣಿಕ ಸಾಲಿನಲ್ಲಿ, ರಾಜ್ಯ ಸರ್ಕಾರ  ನವೆಂಬರ್ 26 ಸಂವಿಧಾನದ ದಿನವನ್ನು ವಿಶೇಷವಾಗಿ ಆಚರಿಸಲು ಸಂವಿಧಾನದ ದಿನ – ಶಾಲೆಗಳಲ್ಲಿ ಜಾಗೃತಿ ಅಭಿಯಾನ ಎಂಬ ಹೆಸರಿನಲ್ಲಿ ಅಭಿಯಾನದ ಮಾರ್ಗದರ್ಶಿಯನ್ನು ತಯಾರು ಮಾಡಿದೆ.  ಆ ಮಾರ್ಗದರ್ಶಿ ಪುಸ್ತಕದಲ್ಲಿ ಶಾಲೆಯ ಮಕ್ಕಳಿಗೆ ನಾಟಕದ ರೂಪದಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲು ಪಠ್ಯ ತಯಾರು ಮಾಡಿದ್ದರು. ಅದರಲ್ಲಿ  ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನ ರಚನೆ ಮಾಡಿಲ್ಲ ಎಂಬ ಬರಹವನ್ನು ಉಲ್ಲೇಖಿಸಿದ್ದು, ಹಾಗೂ ಸಂವಿಧಾನದ ರಚನೆಯಲ್ಲಿ  ಅಂಬೇಡ್ಕರ್ ಶ್ರಮವಹಿಸಿಲ್ಲ ಅವರೊಟ್ಟಿಗಿನ ಕರಡು ಸಮಿತಿಯ ಸದಸ್ಯರು ರಚನೆ ಮಾಡಿದ್ದನ್ನು ಅಂಬೇಡ್ಕರ್ ಕೂತು ಸಹಿ ಹಾಕಿದ್ದಾರೆ ಎಂಬರ್ಥದಲ್ಲಿ ಬಿಂಬಿಸಿ ಶಿಕ್ಷಕರ ಮತ್ತು ಮಕ್ಕಳ ಮನಸಲ್ಲಿ ಅಂಬೇಡ್ಕರ್ ಬಗ್ಗೆ ಮತ್ತು ಸಂವಿಧಾನದ ರಚನೆಯ ಬಗ್ಗೆ ದೊಡ್ಡ ಗೊಂದಲವನ್ನ ಸೃಷ್ಟಿ ಮಾಡಿದ್ದಾರೆ

ಇದು ಸಂಪೂರ್ಣ ಅಂಬೇಡ್ಕರ್ ರವರ ಬಗ್ಗೆ ಮಕ್ಕಳ ಮನಸಲ್ಲಿ ಕೀಳರಿಮೆ ಹುಟ್ಟಿಸಲು ಮಾಡಿರುವ ಕುತಂತ್ರ ಹಾಗು ದೇಶದ ಇತಿಹಾಸವನ್ನು ತಿರುಚುವ ಪ್ರಯತ್ನ ನಡಿಯುತ್ತಿದೆ ಎಂದು ಮೇಲ್ನೋಟಕ್ಕೆ ನೋಡಿದ ಪ್ರತಿಯೊಬ್ಬರಿಗೂ ಅರ್ಥ ಆಗುವಂತಹ ವಿಚಾರವೆಹಾಗೆ ದೇಶದ ಸಂವಿಧಾನವನ್ನು ಬದಲಾಯಿಸಲು ಸೃಷ್ಠಿಸಿರುವ ವಾಮ ಮಾರ್ಗ ಇದಾಗಿದೆ.

ದೇಶದ ಪ್ರತಿಯೊಬ್ಬರಿಗೂ ಸಂವಿಧಾನದ ಶಿಲ್ಪಿ ಯಾರೆಂದರೆ ಹೇಳುವ ಒಂದೇ ಮಾತು ಡಾ.ಬಿ ಆರ್ ಅಂಬೇಡ್ಕರ್ ಎಂದು, ಆದರೆ ಕುತಂತ್ರಿ ರಾಜಕಾರಣದ ಷಡ್ಯಂತ್ರ ಮತ್ತು ದೇಶದ ಪರವಾಗಿ ದನಿಯಾಗಿದ್ದ ಅಂಬೇಡ್ಕರ್ ರವರವನ್ನು ಮೂಲೆ ಗುಂಪು ಮಾಡಿದರೆ ಇಡೀ ದೇಶದಲ್ಲಿ ದಲಿತರನ್ನು ಮೂಲೆ ಗುಂಪಾಗಿಸಬಹುದು ಎಂಬ ದೊಡ್ಡ ಷಡ್ಯಂತ್ರ ಇದರ ಹಿಂದಿದೆ, ಆದರೆ ಅಂಬೇಡ್ಕರ್ ರವರು ದಲಿತರಿಗೆ ಮಾತ್ರ ಸಂವಿಧಾನವನ್ನ ಮೀಸಲಾತಿಯನ್ನ  ನೀಡಲಿಲ್ಲ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬುವ ನಿಟ್ಟಿನಲ್ಲಿ ಹೋರಟವನ್ನು ಮಾಡಿದರು.

ಹೀಗಾಗಿ ಇಷ್ಟು ಸೂಕ್ಷ್ಮವಾದ ವಿಚಾರವನ್ನು ಗಮನಿಸದೆ ದೇಶಕ್ಕೆ ಸುಳ್ಳನ್ನೆ ಸತ್ಯವೆಂಬಂತೆ ಬಿಂಬಿಸಲು ಹೊರಟಿರುವ ರಾಜ್ಯ ಸರ್ಕಾರ ಈಗಲಾದರೂ ತನ್ನ ತಪ್ಪಿನ ಅರಿವನ್ನು ಮಾಡಿಕೊಂಡು ಈ ಅವಘಡಕ್ಕೆ ಕಾರಣರಾದ  ರಾಜ್ಯ ಸಂಪುಟದ ಶಿಕ್ಷಣ ಸಚಿವರನ್ನು ಸಚಿವ ಸ್ಥಾನದಿಂದ  ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದ ಉಮಾಶಂಕರ್ ರವರವನ್ನು ತಮ್ಮ ಸ್ಥಾನಗಳಿಂದ ವಜಾಗೊಳಿಸಿ ದೇಶದ್ರೋಹ ಮತ್ತು ಅಂಬೇಡ್ಕರ್ ರವರನ್ನ ಅಲ್ಲೆಗಳೆದು ಸಂವಿಧಾನದ ಬಗ್ಗೆ ಸುಳ್ಳುಗಳನ್ನು ಹಬ್ಬಿಸಿದ ವಿಚಾರವಾಗಿ ಇವರನ್ನು ಜೈಲು ಶಿಕ್ಷೆಗೆ ಗುರಿಯಾಗಿಸಬೇಕೆಂದು  ದೂರಿನಲ್ಲಿ ಆಗ್ರಹಿಸಿದ್ದಾರೆ. ಈ ಕೆಲಸವನ್ನು ಮಾಡದೆ ಹೋದಲ್ಲಿ ರಾಜ್ಯವ್ಯಾಪ್ತಿಯಲ್ಲಿ ಮುಷ್ಕರವನ್ನು ಸರ್ಕಾರದ ವಿರುದ್ಧವಾಗಿ ಹೋರಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: Dr BR Ambedkar -mocked – Education Department –book-Complaint – action