ಬೆಂಗಳೂರು, ಸೆ.8,2026 (www.justkannada.in): ಕ್ಯಾನ್ಸರ್ ಪೀಡಿತರು ಹಾಗೂ ಅವರ ಕುಟುಂಬಗಳಿಗೆ ಲಕ್ಷ್ಮೀಶ ಫೌಂಡೇಶನ್ ನೀಡುತ್ತಿರುವ ಸೇವೆ ಮಾದರಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಶ್ಲಾಘಿಸಿದರು.
ಲಕ್ಷ್ಮೀಶ ಫೌಂಡೇಶನ್ನ 6ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕನಕಪುರ ರಸ್ತೆಯ ಕುಮಾರನ್ ಶಾಲೆಯ ರಂಗಮಂಚದಲ್ಲಿ ಮಕ್ಕಳ ಶೈಕ್ಷಣಿಕ ನೆರವು ಹಾಗೂ ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ಆಯೋಜಿಸಿದ್ದ ‘ನಾದೋತ್ಸವ’ ಸಂಗೀತ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಂಸದ ಡಾ. ಸಿ.ಎನ್. ಮಂಜುನಾಥ್, “ಕ್ಯಾನ್ಸರ್ ಚಿಕಿತ್ಸೆ ಎಲ್ಲರಿಗೂ ಕೈಗೆಟುಕುವಂತಾಗಬೇಕು. ಮತ್ತೊಬ್ಬರ ಕಣ್ಣೀರನ್ನು ಒರೆಸುವ ಸೇವೆಯೇ ನಿಜವಾದ ಪುಣ್ಯದ ಕೆಲಸ”. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಔಷಧಿ ಹಾಗೂ ಶಸ್ತ್ರಚಿಕಿತ್ಸೆಯ ಜೊತೆಗೆ ರೋಗಿಗಳಿಗೆ ಆತ್ಮವಿಶ್ವಾಸ ಮತ್ತು ಮಾನಸಿಕ ಧೈರ್ಯ ತುಂಬುವುದು ಕೂಡ ಮುಖ್ಯ. ನಿಯಮಿತ ಆರೋಗ್ಯ ತಪಾಸಣೆ ಹಾಗೂ ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡುವ ಮೂಲಕ ಗಂಭೀರ ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವುದರ ಜೊತೆಗೆ ಕ್ಯಾನ್ಸರ್ ಪೀಡಿತ ಮಕ್ಕಳು ಹಾಗೂ ರೋಗಿಗಳಿಗೆ ನೆರವು ನೀಡುವ ಮೂಲಕ ಲಕ್ಷ್ಮೀಶ ಫೌಂಡೇಶನ್ ಕಳೆದ ಆರು ವರ್ಷಗಳಿಂದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಕಾರ್ಯಕ್ರಮದಲ್ಲಿ ಶ್ಲಾಘನೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಎಂ.ಡಿ. ಪಲ್ಲವಿ, ಶ್ರೀನಿಧಿ ಶಾಸ್ತ್ರಿ ಹಾಗೂ ಸಂಗಡಿಗರು ಸುಮಾರು ಮೂರು ಗಂಟೆಗಳ ಕಾಲ ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ಎಚ್.ಎಸ್. ವೆಂಕಟೇಶಮೂರ್ತಿ, ಎಂ.ಎನ್. ವ್ಯಾಸರಾವ್, ಕೆ.ಎಸ್. ನಿಸಾರ್ ಅಹಮದ್, ಕೆ.ಎಸ್. ನರಸಿಂಹಸ್ವಾಮಿ ಹಾಗೂ ಶಿಶುನಾಳ ಶರೀಫರ ಹೆಸರಾಂತ ಭಾವಗೀತೆಗಳನ್ನು ಮಧುರ ಕಂಠದಿಂದ ಹಾಡಿ ಸಂಗೀತಾಭಿಮಾನಿಗಳನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಸೋಮು, ಫೌಂಡೇಶನ್ ಪದಾಧಿಕಾರಿಗಳು, ವೈದ್ಯರು ಹಾಗೂ ಸಂಗೀತಾಭಿಮಾನಿಗಳು ಉಪಸ್ಥಿತರಿದ್ದರು.
Key words: Lakshmi Foundation, service, education, cancer, patients, MP Dr. C.N. Manjunath







