ಸರಳ ಸಜ್ಜನಿಕೆಯ ರಾಜಕಾರಣಿ: ಮಾಜಿ ಸಚಿವ ರಾಮಚಂದ್ರಗೌಡರ ನಿಧನಕ್ಕೆ ಸಿಎಂ ಡಿಕೆಶಿ ಸಂತಾಪ

ಬೆಂಗಳೂರು, ಜುಲೈ, 14,2026 (www.justkannada.in): ವಿಧಾನಪರಿಷತ್ತಿನ ಸದಸ್ಯರಾಗಿ ಹಾಗೂ ಸರ್ಕಾರದ ಸಚಿವರಾಗಿ ಜನಸೇವೆ ಸಲ್ಲಿಸಿದ ರಾಮಚಂದ್ರ ಗೌಡರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಇಂದು ಬೆಳಿಗ್ಗೆ ನಿಧನರಾದ ಮಾಜಿ ಸಚಿವ ರಾಮಚಂದ್ರಗೌಡ ಅವರ ನಿವಾಸಕ್ಕೆ ತೆರಳಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.

ಜನರ ನಡುವೆ ಬೆರೆತ ನಿಷ್ಠಾವಂತ ರಾಜಕಾರಣಿ

ರಾಮಚಂದ್ರ ಗೌಡರು ನಿಷ್ಠಾವಂತ ಪ್ರಾಮಾಣಿಕ ರಾಜಕಾರಣಿ. ನನಗೆ ಹತ್ತಿರದ ಸಂಬಂಧಿಯಾಗಿದ್ದು, ಕಾರ್ಪೊರೇಟರ್ ಆಗಿ  ಜನರ ನಡುವೆ ಬೆರತು ಅವರ ಕಷ್ಟಸುಖಗಳನ್ನು ಅರಿತು ಜನರ ಸೇವೆಯಲ್ಲಿ ತೊಡಗಿದ್ದವರು. ಬೆಂಗಳೂರು ನಗರದ ಎಲ್ಲ ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು.  ವಿಧಾನಪರಿಷತ್ತಿನ ಸದಸ್ಯರಾಗಿ ಹಾಗೂ ಸರ್ಕಾರದ ಸಚಿವರಾಗಿ ಜನಸೇವೆ ಸಲ್ಲಿಸಿ ಅಪಾರ ಜನಸಮೂಹದ ಅಭಿಮಾನವನ್ನು ಹೊಂದಿದ್ದರು ಎಂದು ತಿಳಿಸಿದರು.

ಯಾರೊಂದಿಗೂ ದ್ವೇಷವಿರಿಸಿಕೊಳ್ಳದ ಅಜಾತಶತ್ರು

1985 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ  ಸಾರ್ವಜನಿಕ ಬಸ್ಸುಗಳಲ್ಲಿ ಆಗಮಿಸಿ ಪ್ರಚಾರ ಕಾರ್ಯಗಳನ್ನು ಕೈಗೊಂಡಿದ್ದ ಸರಳ ವ್ಯಕ್ತಿತ್ವ ಅವರದ್ದಾಗಿತ್ತು. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ರಾಮಚಂದ್ರ ಗೌಡರು, ಸಮಾಜದ ಹಿತಕ್ಕಾಗಿ ತಮ್ಮ ಅಭಿಪ್ರಾಯವನ್ನು ನೇರ ಹಾಗೂ ನಿಷ್ಠುರವಾಗಿ ತಿಳಿಸುತ್ತಿದ್ದರು. ತಮ್ಮದೇ ಆದ ನೀತಿ ಸಿದ್ಧಾಂತಗಳೊಂದಿಗೆ ರಾಜಕಾರಣ ಮಾಡಿದರಲ್ಲದೇ, ರಾಜಕೀಯ ವಲಯದಲ್ಲಿ ಯಾರೊಬ್ಬರ ಬಗ್ಗೆಯೂ ದ್ವೇಷವಿರಿಸಿಕೊಳ್ಳದ ಅಜಾತಶತ್ರುವೆನಿಸಿದ್ದರು ಎಂದರು.

ಬಿಜೆಪಿಯ ಯಡಿಯೂರಪ್ಪನವರು ತಮ್ಮೆಲ್ಲಾ ಪಕ್ಷದ ತೀರ್ಮಾನಗಳಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ‘ನನ್ನೊಂದಿಗೂ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದರು. ತಮ್ಮ ಆರೋಗ್ಯ ಸಮಸ್ಯೆಯ ಹೊರತಾಗಿಯೂ, ನನ್ನ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಇಚ್ಛಿಸಿದ್ದರು.  ಎರಡು ದಿನಗಳ ಹಿಂದೆ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ, ದುರಾದೃಷ್ಟವಶಾತ್ ಅವರು ವಿಧಿವಶರಾಗಿದ್ದು  ದು:ಖದ ವಿಷಯ” ಎಂದರು.

ಸರಳ ಸಜ್ಜನಿಕೆಯ ರಾಜಕಾರಣಿ ಇಂದು ನಮ್ಮೊಡನಿಲ್ಲ

“ವಿಧಾನಪರಿಷತ್ತಿನಲ್ಲಿ  ಅವರು ನೀಡಿದ ಭಾಷಣಗಳು ನಮ್ಮ ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತವೆ. ಸರಳ ಸಜ್ಜನಿಕೆಯ ರಾಜಕಾರಣಿ ಇಂದು ನಮ್ಮೊಡನಿಲ್ಲ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದು:ಖದಲ್ಲಿ ನಾವೂ ಕೂಡ ಭಾಗಿಯಾಗಿದ್ದು, ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಪ್ರಾರ್ಥಿಸುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

Key words:  CM DK Shivakumar, condoles, former minister, Ramachandra Gowda