ಮೈಸೂರು,ಜುಲೈ9,2026 (www.justkannada.in): ಗ್ರಾಹಕರಿಗೆ ಸೇರಿದ 1.3ಕೋಟಿ ರೂ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡ ಆರೋಪದ ಮೇಲೆ ಮೈಸೂರಿನ ಸರಗೂರು అంಚೆ ಕಚೇರಿಯ ಪೋಸ್ಟ್ಮ್ಯಾನ್ ಮತ್ತು ಅಂಚೆ ಸಹಾಯಕನನ್ನು ಸಿಬಿಐ ಬಂಧಿಸಿದೆ.
ಅಂಚೆ ಸಹಾಯಕ ದೀಪಕ್ ಹಾಗೂ ಪೋಸ್ಟ್ಮ್ಯಾನ್ ಕಾರಯ್ಯ ಬಂಧಿತರು. ಆರೋಪಿಗಳ ವಿರುದ್ದ 44 ಗ್ರಾಹಕರಿಗೆ ಸೇರಿದ ಅಂಚೆ ಉಳಿತಾಯ ಖಾತೆಗಳ ಲಾಗಿನ್ ಮತ್ತು ಪಾಸ್ವರ್ಡ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಆರೋಪಿಗಳಿಬ್ಬರು, 1.3ಕೋಟಿ ರೂ ಮೊತ್ತವನ್ನು ತಮ್ಮ ವೈಯಕ್ತಿಕ ಮತ್ತು ಸಂಬಂಧಿಕರ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡ ಆರೋಪ ಕೇಳಿ ಬಂದಿದೆ.
‘ಆರೋಪಿಗಳು 2022ರಿಂದ 2025ರ ಅವಧಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸಾರ್ವಜನಿಕರ ಠೇವಣಿ ಹಣವನ್ನು ತಮ್ಮ ಮತ್ತು ಸಂಬಂಧಿಕರ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಸದ್ಯ 44 ಉಳಿತಾಯ ಖಾತೆಗಳಿಂದ ಹಣ ವರ್ಗಾವಣೆ ಆಗಿರುವ ಮಾಹಿತಿ ಲಭಿಸಿದೆ. ಇನ್ನೂ ಹೆಚ್ಚಿನ ಖಾತೆಗಳಿಂದ ಹಣ ಅಕ್ರಮವಾಗಿ ವರ್ಗಾವಣೆ ಆಗಿರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ’ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಎನ್ಎಸ್ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ಪಿತೂರಿ, ವಂಚನೆ, ವಿಶ್ವಾಸ ದ್ರೋಹ, ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದಂತೆ ಅಂಚೆ ಇಲಾಖೆಯಿಂದ ದಾಖಲಾದ ಲಿಖಿತ ದೂರು ಆಧರಿಸಿ, ಆರೋಪಿಗಳಿಬ್ಬರ ವಿರುದ್ಧ 2026ರ ಮಾರ್ಚ್ನಲ್ಲಿ ಪ್ರಕರಣ ದಾಖಲಾಗಿತ್ತು. ‘ಆರೋಪಿಗಳನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗುತ್ತದೆ ಎನ್ನಲಾಗುತ್ತಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ…?
ಗ್ರಾಹಕರಿಗೆ ಸೇರಿದ ಹಣವನ್ನು ಅಕ್ರಮವಾಗಿ ವರ್ಗಾವಣೆ ಪ್ರಕರಣ 2025ರ ಮೇ ತಿಂಗಳಲ್ಲಿ ಬೆಳಕಿಗೆ ಬಂದಿತ್ತು. ಸರಗೂರು ಪಟ್ಟಣದ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕನಾಗಿದ್ದ ದೀಪಕ್ ಕಚೇರಿಗೆ ರಜೆ ಹಾಕಿದ್ದ ದಿನ ಬಂದಿದ್ದ ಗ್ರಾಹಕರು ಠೇವಣಿ ಬಗ್ಗೆ ಮಾಹಿತಿ ಪಡೆಯಲೆತ್ನಿಸಿದಾಗ ಹಣ ದುರುಪಯೋಗ ಆಗಿರುವುದು ತಿಳಿದು ಬಂದಿದ್ದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮೈಸೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕ ಹರೀಶ್ ಅವರು ಇಲಾಖಾ ವಿಚಾರಣೆಗೆ ತಂಡ ರಚಿಸಿದ್ದರು. ಸುತ್ತಲಿನ 12 ಶಾಖೆಗಳು ಸೇರಿ ಸುಮಾರು 26 ಸಾವಿರ ಖಾತೆಗಳ ಪರಿಶೀಲನೆ ನಡೆಸಿದ್ದರು.
ಈ ನಡುವೆ ಆತನ ಮಾತಿಗೆ ಮರುಳಾಗಿ ಕೆಲವು ಸಿಬ್ಬಂದಿಯೂ ತಮಗರಿವಿಲ್ಲದಂತೆ ಹಣ ದುರುಪಯೋಗಕ್ಕೆ ಸಹಾಯ ಮಾಡಿದ್ದರು. ಅವರನ್ನೂ ಅಮಾನತುಗೊಳಿಸಿ, ವಿಚಾರಣೆ ಬಳಿಕ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಇಲಾಖೆ ವಿಚಾರಣೆಗೆ ಹರೀಶ್ ಸ್ಪಂದನೆಯೂ ನೀಡುತ್ತಿರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ನೀಡಿದ್ದೆವು. ಅವರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ’ ಎಂದು ಮೈಸೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕ ಹರೀಶ್ ತಿಳಿಸಿದ್ದಾರೆ.
Key words: Mysore, CBI, arrests, two, postal employees







