ಚಂಗ್ಲು ತರ ಆಡ್ತಿರೋ ಕೇಂದ್ರ ಸಚಿವ ಎಚ್ಡಿಕೆ; ಶಾಸಕ ಉದಯ್

ಮಂಡ್ಯ,ಜೂನ್,27,2026 (www.justkannada.in): ಬಿಡದಿ ಟೌನ್‌ ಶಿಪ್ ಯೋಜನೆ ವಿಚಾರವಾಗಿ ರಾಜಕೀಯ ವಾಗ್ವಾದ ತೀವ್ರಗೊಂಡಿದ್ದು, ಕೇಂದ್ರ ಸಚಿವ  ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಶಾಸಕ ಕದಲೂರು ಉದಯ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮದ್ದೂರಿನಲ್ಲಿ ಮಾತನಾಡಿದ ಕದಲೂರು ಉದಯ್ , ಬಿಡದಿ ಟೌನ್‌ಶಿಪ್ ಯೋಜನೆಯನ್ನು ಆರಂಭಿಸಲು ಹೊರಟಿದ್ದವರು ಕುಮಾರಸ್ವಾಮಿ ಅವರೇ ಆಗಿದ್ದು, ಇದೀಗ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಯೋಜನೆಗೆ ವೇಗ ಸಿಗುತ್ತಿರುವುದನ್ನು ಕುಮಾರಸ್ವಾಮಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಯೋಜನೆಯ ಹೆಗ್ಗಳಿಕೆ ಇತರರಿಗೆ ಸಿಗಲಿದೆ ಎಂಬ ಕಾರಣಕ್ಕೆ ರಾಜಕೀಯ ಮಾಡಲಾಗುತ್ತಿದೆ. ಸುತ್ತಮುತ್ತಲಿನ ತಾಲ್ಲೂಕುಗಳಿಂದ ಕಾರ್ಯಕರ್ತರನ್ನು ಕರೆಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ಈ ವಿಷಯದ ಕುರಿತು ಚರ್ಚೆಗೆ ಮುಖ್ಯಮಂತ್ರಿ ಆಹ್ವಾನ ನೀಡಿದ್ದರೂ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಚರ್ಚೆಗೆ ಬರುವ ಬದಲು “ಚಂಗ್ಲು ತರ ಪ್ರದರ್ಶನ” ಮಾಡುತ್ತಿದ್ದಾರೆ ಎಂದು ಕದಲೂರು ಉದಯ್ ಕಿಡಿಕಾರಿದರು.

ಇದೇ ವೇಳೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಭೇಟಿ ನೀಡಿಲ್ಲ. “ವೆಸ್ಟಾಂಡ್ ಹೋಟೆಲ್ ಬಿಟ್ಟರೆ ವಿಧಾನಸೌಧಕ್ಕೆ ನೇರವಾಗಿ ಹೋಗುತ್ತಿದ್ದರು” ಎಂದು ವ್ಯಂಗ್ಯವಾಡಿದ ಕದಲೂರು ಉದಯ್, ಹಳ್ಳಿಗಳಿಗೆ ಬನ್ನಿ ಎಂಬ ಅವರ ಹೇಳಿಕೆಗಳು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿವೆ ಎಂದರು.

Key words: Bidadi township, Union Minister, HDK , MLA Kadalur Uday