ಹಿಜಾಬ್ ವಿವಾದ: ವಿದ್ಯಾರ್ಥಿಗಳನ್ನು ಧಾರ್ಮಿಕವಾಗಿ ಇಬ್ಬಾಗ ಮಾಡುವ ಸಾಧ್ಯತೆ- ಹಿರಿಯ ವಕೀಲ ಅ.ಮ.ಭಾಸ್ಕರ್

ಮೈಸೂರು,ಮೇ,15,2026 (www.justkannada.in): ರಾಜ್ಯದಲ್ಲಿ ಮತ್ತೆ ಹಿಜಾಬ್ ,ಕೇಸರಿ ಶಾಲಿನ ವಿವಾದ ಮುನ್ನೆಲೆಗೆ ಬಂದಿದ್ದು,ಪರ –ವಿರೋಧ ಚರ್ಚೆಗಳು ಶುರುವಾಗಿದೆ.  ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರಿನ ಹಿರಿಯ ವಕೀಲ ಅ.ಮ.ಭಾಸ್ಕರ್, ಧಾರ್ಮಿಕ ಆಚರಣೆ ವಿಷಯ ವಿದ್ಯಾರ್ಥಿಗಳನ್ನು ಧಾರ್ಮಿಕವಾಗಿ ಇಬ್ಬಾಗ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಹಿರಿಯ ವಕೀಲ ಅ.ಮ.ಭಾಸ್ಕರ್, ಕರ್ನಾಟಕ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಸೀಮಿತ ಧಾರ್ಮಿಕ ಚಿಹ್ನೆಗಳಿಗೆ ಅನುಮತಿ ನೀಡಿರುವ ತೀರ್ಮಾನ ಭಾರತೀಯ ಸಂವಿಧಾನದ ವಿಧಿ 14,19,21 ಮತ್ತು 25ರೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ಗೌರವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ. ಅದೇ ವೇಳೆ ಶಿಕ್ಷಣ ಸಂಸ್ಥೆಗಳಿಗೆ ಶಿಸ್ತು ಮತ್ತು ಸಮವಸ್ತ್ರ ನಿಯಮ ಜಾರಿಗೆ ತರುವ ಅಧಿಕಾರವು ಕೂಡ ಇದೆ. ಕರ್ನಾಟಕ ಉಚ್ಚ ನ್ಯಾಯಾಲಯ 2022ರ ತೀರ್ಪಿನಲ್ಲಿ ಬಹಳ ಸ್ಪಷ್ಟವಾಗಿ ಹೇಳಿದೆ. ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಆಚರಣೆ  ಎಂದೂ ಕೂಡ ಸಾಬೀತಾಗಿಲ್ಲ ಎಂದು ಹೇಳಿ ಸಮವಸ್ತ್ರ ನಿಯಮವನ್ನು ಮಾನ್ಯಗೊಳಿಸಿತ್ತು. ಆದರೆ ನಂತರ ವಿಷಯ ಸರ್ವೋಚ್ಚ ನ್ಯಾಯಲಯಕ್ಕೆ ಹೋಗಿ ಅಲ್ಲಿ ವಿಭಜಿತ ತೀರ್ಪು ಬಂದ ಕಾರಣ ಹಿಜಾಬ್ ಧರಿಸಬೇಕೇ ಬೇಡವೇ ಎಂದು ಇಂದಿಗೂ ತೀರ್ಮಾನವಾಗಿಲ್ಲ.

ಪ್ರಸ್ತುತ ಕರ್ನಾಟಕ ಸರ್ಕಾರ ರಿಜನೇಬಲ್ ಅಕಾಮಡೇಷನ್ ಹೊಸ ನಿಯಮ ತಂದು ಧಾರ್ಮಿಕ ಹೊಂದಾಣಿಕೆಯ ದೃಷ್ಟಿಯಿಂದ ಸಮರ್ಥಿಸಬಹುದು. ಆದರೆ, ಇದು ಭವಿಷ್ಯದಲ್ಲಿ ನ್ಯಾಯಾಂಗ ಪರಿಶೀಲನೆಗೆ ಒಳಪಡುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆ ವಿಷಯ ವಿದ್ಯಾರ್ಥಿಗಳನ್ನು ಧಾರ್ಮಿಕವಾಗಿ ಇಬ್ಬಾಗ ಮಾಡುವ ಸಾಧ್ಯತೆ ಇದೆ. ಇದರಿಂದ ಸಾಮರಸ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

Key words: Hijab, controversy, religiously, dividing, students, Senior lawyer, A.M. Bhaskar