ಬೆಂಗಳೂರು,ಮೇ,6,2026 (www.justkannada.in): ಓದುವ ಹವ್ಯಾಸವನ್ನು ಹೆಚ್ಚಿಸಿ ಪುಸ್ತಕ ಸಂಸ್ಕೃತಿಯನ್ನು ಹರಡುವುದೇ ಮನೆಗೊಂದು ಗ್ರಂಥಾಲಯ ಯೋಜನೆಯ ಉದ್ದೇಶವಾಗಿದೆ. ಪುಸ್ತಕಗಳನ್ನು ಕೊಳ್ಳುವ, ಓದುವ ಮತ್ತು ಸಂಗ್ರಹಿಸುವ ಪ್ರವೃತ್ತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ತಿಳಿಸಿದರು.
ಹಿರಿಯ ಸಾಹಿತಿ ಡಾ. ಅಮ್ಮಸಂದ್ರ ಸುರೇಶ್ ಅವರ ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಮನೆಗೊಂದು ಗ್ರಂಥಾಲಯ ಯೋಜನೆಯಡಿಯಲ್ಲಿ ಗ್ರಂಥಾಲಯವನ್ನು ಉದ್ಘಾಟಿಸಿ ಮಾನಸ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ್ಯಂತ ಮನೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸುಮಾರು ಒಂದು ಕೋಟಿ ಗ್ರಂಥಾಲಯಗಳನ್ನು ಆರಂಭಿಸುವುದು ಈ ಯೋಜನೆಯ ಉದ್ದೇಶವಾಗಿದ್ದು ಈಗಾಗಲೇ ಸುಮಾರು ಮುವತ್ತಾರು ಸಾವಿರ ಗ್ರಂಥಾಲಯಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬರಲ್ಲೂ ಪುಸ್ತಕಗಳನ್ನು ಖರೀದಿ ಮಾಡಿ ಓದುವ ಹವ್ಯಾಸ ಮತ್ತು ಪುಸ್ತಕಗಳನ್ನು ಸಂಗ್ರಹಿಸಿಡುವ ಹವ್ಯಾಸವನ್ನು ಈ ಯೋಜನೆಯ ಮೂಲಕ ಈಡೇರಿಸುವ ಆಶಯವನ್ನು ಹೊಂದಿರುವುದಾಗಿ ತಿಳಿಸಿದರು.
ಮನಗೊಂದು ಗ್ರಂಥಾಲಯ ಯೋಜನೆಯ ಜಿಲ್ಲಾ ಜಾಗೃತ ಸಮಿತಿಯ ಅಧ್ಯಕ್ಷ ಎಂ ಚಂದ್ರಶೇಖರ್ ಅವರು ಮಾತನಾಡಿ, ಮನೆಗೊಂದು ಗ್ರಂಥಾಲಯ ಯೋಜನೆಯಡಿಯಲ್ಲಿ ಮೈಸೂರು ನಗರದಲ್ಲಿ ಈಗಾಗಲೇ ಹಲವು ನಾಗರಿಕರು ತಮ್ಮ ಮನೆಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಿದ್ದಾರೆ. ಈ ಯೋಜನೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಮಕ್ಕಳು ಮತ್ತು ಯುವಕರಲ್ಲಿ ಓದುವ ಹವ್ಯಾಸ ತುಂಬಾ ಕುಸಿಯುತ್ತಿದ್ದು ಈ ಯೋಜನೆಯ ಮೂಲಕ ಪುಸ್ತಕಗಳ ಮಹತ್ವವನ್ನು ಮನೆಮನೆಗೂ ತಲುಪಿಸಲಾಗುವುದು ಎಂದು ಹೇಳಿದರು.
ಸಾಹಿತಿ ಮತ್ತು ವಿಜ್ಞಾನಿ ಡಾ. ಪ್ರಸನ್ನ ಸಂತೆಕಡೂರು ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಓದುವ ಹವ್ಯಾಸವನ್ನು ಒಳಗೊಂಡಿರುವ ದೇಶಗಳಲ್ಲಿ ಅಮೇರಿಕಾದ ನಂತರದ ಸ್ಥಾನವನ್ನು ಭಾರತ ಹೊಂದಿದ್ದು ಇದೊಂದು ಮಹತ್ವದ ವಿಷಯವಾಗಿದೆ. ಒತ್ತಡಗಳಿಂದ ಹೊರಬರಲು ಓದು ಸಹಕಾರಿಯಾಗಿದೆ. ಮಾನಸಿಕ ಆರೋಗ್ಯಕ್ಕೂ ಓದು ಉತ್ತಮ ಚಿಕಿತ್ಸೆಯಾಗಿದ್ದು ಓದಿನ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಮಾನಸಿಕ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು ಎಂದು ಹೇಳಿದರು.
ಮೈಸೂರು ನಗರದಲ್ಲಿ ಹಲವು ಬುಕ್ ಕ್ಲಬ್ ಗಳು, ಪರಿಚಿತ ಮತ್ತು ಅಪರಿಚಿತ ಓದುಗರ ಬಳಗಗಳು ಇದ್ದು ಇವುಗಳು ಜನರಲ್ಲಿ ಓದುವ ಮತ್ತು ಕೃತಿಗಳನ್ನು ಪರಿಚಯ ಮಾಡಿಕೊಡುವ ಕೆಲಸಗಳನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ಇಂತಹ ಸಂಸ್ಥೆಗಳ ಮೂಲಕ ಕೂಡ ಪುಸ್ತಕ ಸಂಸ್ಕೃತಿಯನ್ನು ಬೆಳೆಸಬಹುದು ಎಂದು ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ಬ್ಯೂರೊ ಮುಖ್ಯಸ್ಥರಾದ ಕೆ. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಅಮ್ಮಸಂದ್ರ ಸುರೇಶ್ ದಂಪತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯ ಕರಪತ್ರಗಳನ್ನು ಬಿಡುಗೊಡೆಗೊಳಿಸಲಾಯಿತು. ಶರಣ ದೇವರಾಜು ಪಿ. ಚಿಕ್ಕಹಳ್ಳಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಹೆಗ್ಗಡದೇವನಕೋಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕನ್ನಡ ಪ್ರಮೋದ್, ನೆರಳು ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಪುರುಷೋತ್ತಮ, ಖಜಂಚಿ ಕುಮಾರ್, ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Key words: buy, read, collect books , President of Kannada Book Authority, Manasa







