ಒಳಮೀಸಲಾತಿ ಜಾರಿ ಬಗ್ಗೆ ಏ.24ಕ್ಕೆ ವಿಶೇಷ ಸಂಪುಟ ಸಭೆ

ಬೆಂಗಳೂರು,ಏಪ್ರಿಲ್,20,2026 (www.justkannada.in):  ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಏಪ್ರಿಲ್ 24ಕ್ಕೆ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಏ.24 ರಂದು ಸಿಎಂ ಗೃಹಕಚೇರಿಯಲ್ಲಿ ಸಭೆ ನಡೆಯಲಿದ್ದು ಒಳಮೀಸಲಾತಿ ಜಾರಿ ಕುರಿತು ಚರ್ಚೆ ನಡೆಯಲಿದೆ. ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ವೈಜ್ಞಾನಿಕವಾಗಿ ಜಾರಿಗೊಳಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ಪ್ರಕ್ರಿಯೆಯನ್ನು ಜಾರಿಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ‘ತಾಂತ್ರಿಕ ಸಮಿತಿ’ಯನ್ನು ರಚಿಸಿದೆ.

ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯು ನೀಡುವ ವರದಿ ಮತ್ತು ಶಿಫಾರಸುಗಳನ್ನು ಏಪ್ರಿಲ್ 24ರ ವಿಶೇಷ ಸಭೆಯಲ್ಲಿ ಮಂಡಿಸಲಾಗುತ್ತದೆ. ಈ ವರದಿಯ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ  ಇದೆ ಎನ್ನಲಾಗಿದೆ.

Key words: implementation, internal reservation, CM, Siddaramaiah, cabinet meeting