ಚಾಮರಾಜನಗರ,ಫೆಬ್ರವರಿ,9,2026 (www.justkannada.in): ಫೆಬ್ರವರಿ 14ರಿಂದ 18ರವರೆಗೆ ಐದು ದಿನಗಳ ಕಾಲ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಕಾವೇರಿ ನದಿ ದಾಟಿ ಪಾದಯಾತ್ರೆ ಬರುವ ಬಸವನಕಡ ಪ್ರದೇಶಕ್ಕೆ ಜಿಲ್ಲಾಧಿಕಾರಿ ರೂಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ನಾಟಕ ಮತ್ತು ತಮಿಳುನಾಡಿನಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸುವುದರಿಂದ, ಕನಕಪುರ–ರಾಮನಗರ–ಚನ್ನಪಟ್ಟಣ–ಮಾಗಡಿ ಪ್ರದೇಶಗಳಿಂದ ಕಾವೇರಿ ನದಿ ಸಂಗಮದ ಮೂಲಕ ಬಸವನಕಡ ತಲುಪಿ ಅರಣ್ಯ ಮಾರ್ಗವಾಗಿ ಎಲ್ಲೇಮಾಳ–ಶಾಗ್ಯ–ಹಲಗಾಪುರ–ತೋಮಿಯಾರ್ ಪಾಳ್ಯ–ಡಿ.ಎಮ್. ಸಮುದ್ರ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ತೆರಳುವ ಈ ಸಾಂಪ್ರದಾಯಿಕ ಮಾರ್ಗದ ಸುರಕ್ಷತೆ ಮತ್ತು ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಯಿತು.
ಕೆ.ಆರ್.ಎಸ್ ಜಲಾಶಯದಿಂದ ನೀರಿನ ಪ್ರಮಾಣ ಕಡಿತಗೊಂಡಿರುವ ಹಿನ್ನೆಲೆಯಲ್ಲಿ, ಕಾವೇರಿ ನದಿಯನ್ನು ದಾಟುವ ಸ್ಥಳದಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆ ಮಾಡುವ ಭಕ್ತರಿಗಾಗಿ ಅರಣ್ಯ ಇಲಾಖೆ ಹೆಚ್ಚಿನ ಪೆಟ್ರೋಲಿಂಗ್ ತಂಡ ನಿಯೋಜನೆ ಮಾಡಬೇಕು. ಗ್ರಾಮ ಪಂಚಾಯಿತಿ ವತಿಯಿಂದ ಶುದ್ಧ ಕುಡಿಯುವ ನೀರು, ಬೆಳಕು ಮತ್ತು ಮೂಲಭೂತ ಸೌಲಭ್ಯಗಳ ವ್ಯವಸ್ಥೆ. ಎಸ್ಟಿಆರ್ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಮುಂಜಾಗ್ರತ ಕ್ರಮವಾಗಿ ನಿಯೋಜಿಸುವಂತೆ ಸೂಚನೆ ನೀಡಿದರು.
ಪಾದಯಾತ್ರೆಯ ಮಾರ್ಗದಲ್ಲಿ ಆರೋಗ್ಯ ಇಲಾಖೆಯ ತುರ್ತು ಚಿಕಿತ್ಸಾ ಕೇಂದ್ರಗಳು, ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳ ನಿಯೋಜನೆ ಮಾಡುವಂತೆ ಸೂಚನೆ ನೀಡಲಾಯಿತು. ಪಾದಯಾತ್ರಿಕರು ಬೆಳಕು ಇರುವ ಸಮಯದಲ್ಲಷ್ಟೇ ಅರಣ್ಯ ಪ್ರದೇಶದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ರೂಪ ಅವರು ಮನವಿ ಮಾಡಿದರು.
ಲಕ್ಷಾಂತರ ಭಕ್ತರು ನಿರೀಕ್ಷೆಗೂ ಮೀರಿ ಆಗಮಿಸುವ ಸಾಧ್ಯತೆ ಇದೆ. ಪಾದಯಾತ್ರಿಕರ ಆಚಾರ–ವಿಚಾರಗಳಿಗೆ ಧಕ್ಕೆಯಾಗದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಭಕ್ತಾದಿಗಳು ಕೂಡ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಸಹಕರಿಸಿ ತಮ್ಮ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು, ಎಂದು ಜಿಲ್ಲಾಧಿಕಾರಿ ರೂಪ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಸುರೇಂದ್ರ, ಪ್ರಾಧಿಕಾರದ ಕಾರ್ಯದರ್ಶಿ ರಘು, ತಹಸೀಲ್ದಾರ್ ಚೈತ್ರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Male Mahadeshwara Hill, fair, Feb. 14, DC, SP visit, inspect







