ಬೂದನೂರು ಉತ್ಸವ ಅಂಗವಾಗಿ ಹೆಲಿಟೂರಿಸಂ: ಸುರಕ್ಷತಾ ಕ್ರಮಗಳನ್ನು ವಹಿಸಿ- ಜಿಲ್ಲಾಧಿಕಾರಿ ಡಾ. ಕುಮಾರ

ಮಂಡ್ಯ. ಫೆಬ್ರವರಿ,7,2026 (www.justkannada.in): ಬೂದನೂರು ಉತ್ಸವ ಅಂಗವಾಗಿ ಫೆಬ್ರವರಿ 20 ರಿಂದ 22 ರವರೆಗೆ ಹೆಲಿಟೂರಿಸಂ ಆಯೋಜನೆ ಮಾಡಲಾಗುತ್ತಿದ್ದು ಹೆಲಿಪ್ಯಾಡ್ ನಿಲ್ದಾಣದ  ಸ್ಧಳದಲ್ಲಿ  ಎಲ್ಲಾ ರೀತಿಯ ಸುರಕ್ಷತ ಕ್ರಮಗಳನ್ನು ಅನುಸರಿಸಬೇಕು ಎಂದು ಮಂಡ್ಯ  ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.

ಬೂದನೂರು ಉತ್ಸವ ಅಂಗವಾಗಿ ಜಿಲ್ಲೆಯಲ್ಲಿ 20, 21,22 ರಂದು ಹೆಲಿ ಟೂರಿಸಂ ಅನ್ನು ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. ಹೆಲಿ ಟೂರಿಸಂ ಮೂರು ದಿನ ಇರುವುದರಿಂದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಲೈಟಿಂಗ್ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮಗಳನ್ನು ಕೖಗೊಂಡು  ಪ್ರಥಮ ಚಿಕಿತ್ಸೆಗೆ ಬೇಕಾಗುವ ಔಷಧಿಗಳು ಮತ್ತು ನುರಿತ ವೈದ್ಯರು ಹಾಗೂ ಅಧಿಕಾರಿಗಳು ನಿಗದಿತ ಸ್ಥಳದಲ್ಲಿ ನೇಮಿಸಬೇಕು ಹಾಗೂ ಆಂಬುಲೆನ್ಸ್ ವ್ಯವಸ್ಥೆ ಇರಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅವಘಡ ಉಂಟಾಗದಂತೆ ಅಗ್ನಿಶಾಮಕ ದಳದವರು ನೋಡಿಕೊಳ್ಳಬೇಕು ಹಾಗೂ ಅಗ್ನಿಶಾಮಕ ದಳದ ವಾಹನ ಸ್ಧಳದಲ್ಲಿರಬೇಕು. ಟಿಕೆಟ್ ಕೌಂಟರ್ ಸ್ಥಾಪಿಸಿ ಹೆಲಿಪ್ಯಾಡ್ ನ ನಿಯಮದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಾರ್ವಜನಿಕರಿಗೆ ಹೆಲಿಪ್ಯಾಡ್ ಮೂಲಕ ಬೂದನೂರು ಉತ್ಸವವನ್ನು ಕಣ್ತುಂಬಿಕೊಳ್ಳಲು ಒಬ್ಬರಿಗೆ 3,800 ರೂಪಾಯಿಗಳನ್ನು ಪಾವತಿಸಬೇಕಾಗಿರುತ್ತದೆ. ಒಬ್ಬರಿಗೆ 7 ನಿಮಿಷಗಳ ಕಾಲಾವಕಾಶ ಇದ್ದು 5 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿರುವುದಿಲ್ಲ ಎಂದು ಡಿಸಿ ಡಾ. ಕುಮಾರ ಸೂಚಿಸಿದರು

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ ವಿ.ಜೆ.ಶೋಭಾರಾಣಿ ಮಾತನಾಡಿ ಸಾರ್ವಜನಿಕರು ಸರದಿ ಸಾಲಿನಲ್ಲಿ ಟಿಕೆಟ್ ಗಳನ್ನು ಪಡೆಯಬೇಕು. ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಾಟರ್ ಬಾಟಲ್ ಫೋನ್ ಗಳನ್ನು ನಿಷೇಧಿಸಲಾಗಿರುತ್ತದೆ. ಸಾರ್ವಜನಿಕರಿಗೆ ಹೆಲಿಪ್ಯಾಡ್ ಗೆ ಹೋಗಲು ಇರುವ ಮಾರ್ಗದಲ್ಲಿ ಹೋಗುವಂತೆ ಸೂಚಿಸಬೇಕು. ಸಾರ್ವಜನಿಕರು ಹೆಲಿಪ್ಯಾಡ್ ಮೂಲಕ ಪ್ರಯಾಣಿಸಲು ತಮ್ಮ ಗುರುತಿನ ಚೀಟಿಯನ್ನು  ಕಡ್ಡಾಯವಾಗಿ ತರಬೇಕು. ಎಂದು ಹೇಳಿದರು.

ಉಪವಿಭಾಗಾಧಿಕಾರಿ ಶಿವಮೂರ್ತಿ, ಅಗ್ನಿಶಾಮಕ ದಳದ ಅಧೀಕ್ಷಕರು ರಾಘವೇಂದ್ರ, ವಿಮ್ಸ್ ನ ನಿರ್ದೇಶಕ ನರಸಿಂಹಮೂರ್ತಿ, ಡಾ. ಜವರೇಗೌಡ, ಡಾ. ವೀರಭದ್ರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

Key words: Helitourism, Budanur festival, Mandya DC, Dr. Kumar