ಹಿರಿಯ ಪತ್ರಕರ್ತ ಚೀ.ಜ ರಾಜೀವ ಅವರ  ‘ಪ್ರಿಯ ಗಾಂಧಿ’ ಪುಸ್ತಕ ಮಾರಾಟಕ್ಕೆ ಲಭ್ಯ

ಮೈಸೂರು,ನವೆಂಬರ್,7,2025 (www.justkannada.in): ಹಿರಿಯ ಪತ್ರಕರ್ತ ಚೀ ಜ ರಾಜೀವ ಅವರ ಸಮಕಾಲೀನ ಸಂಗತಿಗಳ ವಿಶ್ಲೇಷಣಾತ್ಮಕ ಕೃತಿ  ‘ಪ್ರಿಯ ಗಾಂಧಿ’ ಪುಸ್ತಕ ಮಾರಾಟಕ್ಕೆ ಲಭ್ಯವಿದೆ. ಬಹುರೂಪಿ  ಪುಸ್ತಕವನ್ನ ಹೊರತಂದಿದ್ದು  ಈ ಪುಸ್ತಕದ ಬೆಲೆ 300 ರೂ ಆಗಿದೆ.

‘ವಿಜಯ ಕರ್ನಾಟಕ’ ಪತ್ರಿಕೆಯ ಹಿರಿಯ ಪತ್ರಕರ್ತ ಚೀ ಜ ರಾಜೀವ ಅವರು ಮಹಾತ್ಮನಿಗೆ ಬರೆದ ಪತ್ರಗಳ ಗುಚ್ಛ -ಪ್ರಿಯ ಗಾಂಧಿ. ಸಮಕಾಲೀನ ಸಂಗತಿಗಳಿಗೆ ಹಿಡಿದ ಕನ್ನಡಿ. ‘ರಾಜೀವ, ನೀನು ನಿನ್ನಂಥವರು ನಮ್ಮ ಕಾಲದ ತಲ್ಲಣಗಳನ್ನು ಯಾರಿಗಾದರೂ ಪತ್ರ ಬರೆದು ತಿಳಿಸಬೇಕಾಗಿದೆ ಎಂದು ಗೆಳೆಯರೊಬ್ಬರು ಹೇಳಿದಾಗ ರಾಜೀವ ಅವರು ಗಾಂಧಿಯನ್ನು ಆರಿಸಿಕೊಂಡರು. ‘ಪ್ರಿಯ ಗಾಂಧಿ ಸ್ವಸ್ಥ ಸಮಾಜದ ಸಾಕ್ಷಿಪ್ರಜ್ಞೆ’ ಎನ್ನುತ್ತಾರೆ ಸಂವಹನ ಸಲಹೆಗಾರ ಎನ್ ರವಿಶಂಕರ್ ತಮ್ಮ ಮುನ್ನುಡಿಯಲ್ಲಿ. ‘ಇವು ಗಾಂಧಿಗೆ ಬರೆದ ಪತ್ರಗಳಲ್ಲ, ಬದಲಿಗೆ ಗಾಂಧಿಯೇ ಬರೆದ ಪತ್ರಗಳೇನೋ ಎನ್ನುವಂತೆ ತೋರುತ್ತದೆ. ಗಾಂಧಿಯಂತೆಯೇ ಎಲ್ಲೂ ರಾಜೀವ್ ರಾಜಿಯಾಗುವುದಿಲ್ಲ’ ಎನ್ನುತ್ತಾರೆ.

ಈ ಕೃತಿ ಜಾತಿ ಗಣತಿಯಿಂದ ಹಿಡಿದು ಪಾದಯಾತ್ರೆಯ ರಾಜಕೀಯದವರೆಗೆ ಹತ್ತು ಹಲವು ಸಂಗತಿಗಳನ್ನು ನಮ್ಮ ಮುಂದೆ ಹರಡುತ್ತದೆ. ಚಿಂತನೆಗೆ ಹೊಸ ವಿಷಯ ನೀಡುತ್ತದೆ. .

ಕೃತಿಯ ಬೆನ್ನುಡಿಯಲ್ಲಿ ‘ವಿಜಯ ಕರ್ನಾಟಕ’ದ ಸಂಪಾದಕರಾದ  ಸುದರ್ಶನ ಚನ್ನಂಗಿಹಳ್ಳಿ ಅವರು ಹೀಗೆ ಬರೆದಿದ್ದಾರೆ. ಗಾಂಧೀಜಿ ಅವರ ಜೀವನ, ತತ್ತ್ವ ಹಾಗೂ ಚಿಂತನೆಗಳು ಇಂದಿಗೂ ನಮ್ಮ ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ. ಆದರೆ ಕಾಲ ಬದಲಾಗುತ್ತಿದ್ದಂತೆ ಆ ತತ್ವಗಳೊಂದಿಗೆ ಸಂವಾದ ನಡೆಸುವ ಅಗತ್ಯ ಹೆಚ್ಚಾಗಿದೆ. ನಾಡಿನ ಹಿರಿಯ ಪತ್ರಕರ್ತ ಹಾಗೂ ನನ್ನ ಹಿರಿಯ ಸಹೋದ್ಯೋಗಿ ಮಿತ್ರ ಚೀ ಜ ರಾಜೀವ ಅವರು ತಮ್ಮ ಅಂಕಣ ಬರಹಗಳ ಮೂಲಕ ಈ ಸಂವಾದವನ್ನು ನಡೆಸಿದ್ದಾರೆ. ಅವರು ಮಹಾತ್ಮನಿಗೆ ಬರೆದಿರುವ ಪತ್ರಗಳು ಕೇವಲ ಬರಹಗಳಲ್ಲ. ಅದು ಕಾಲದ ನಾಡಿ ತಟ್ಟುವ ಪ್ರಾಮಾಣಿಕ ಸಂಭಾಷಣೆ.

Key words: Senior journalist, C.J. Rajeev, book, Gandhi Priya