ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಪ್ರಯೋಜನ? ಪತ್ರಕರ್ತರು ಯೋಚಿಸಿ-ಸಿಎಂ ಸಿದ್ದರಾಮಯ್ಯ

ಮೈಸೂರು ಅಕ್ಟೋಬರ್,18,2025 (www.justkannada.in): ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಪ್ರಯೋಜನ ಎನ್ನುವುದನ್ನು ಪತ್ರಕರ್ತರು ಯೋಚಿಸಬೇಕು. ಸಮಾಜಕ್ಕೆ ಉಪಯೋಗ ಇಲ್ಲದನ್ನು ಏಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಜಿಲ್ಲಾ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಯ್ಕೆ ಆದ ಫೋಟೋ ಜರ್ನಲಿಸ್ಟ್ ಗಳಿಗೆ “ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ” ವಿತರಿಸಿ ಮಾತನಾಡಿದರು.

ಒಂದು ಫೋಟೋ ಸಾವಿರ ಪದಗಳಿಗೆ ಸಮ. ಹೀಗಾಗಿ ಫೋಟೋ ಜರ್ನಲಿಸ್ಟ್ ಗಳು ಪತ್ರಿಕಾ ವೃತ್ತಿಯ ಮುಖ್ಯ ಭಾಗ. ಆದರೆ ತೆಗೆದ ಫೋಟೋಗಳನ್ನು ಬೇರೆ ಸಂದರ್ಭಗಳಲ್ಲಿ ಬಳಸಿ ತಿರುಚಿದ ಅಭಿಪ್ರಾಯ ಮೂಡಿಸುವುದು ಆರೋಗ್ಯಕರವಲ್ಲ ಎಂದರು.

ಪತ್ರಕರ್ತರು ಸತ್ಯ ಹೇಳ್ತಾರೆ ಎನ್ನುವ ನಂಬಿಕೆಯಿಂದ ನಿಮ್ಮನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಬ ಎಂದು ಕರೆಯುತ್ತಾರೆ. ಪತ್ರಕರ್ತರು ಸುಳ್ಳು ಹೇಳುವುದಿಲ್ಲ ಎನ್ನುವ ನಂಬಿಕೆ ಈಗಲೂ ಇದೆ. ಆದರೆ, ಊಹಾ ಪತ್ರಿಕೋದ್ಯಮ ವಿಪರೀತ ಆಗುತ್ತಿದೆ. ಊಹೆ ಮಾಡಿಕೊಂಡು ಸುದ್ದಿ ಮಾಡುವುದು ಗೌರವ ತರುವುದಿಲ್ಲ ಎಂದರು.

ಸಾಮಾಜಿಕ ವ್ಯವಸ್ಥೆಯನ್ನು ಜನರ ಮುಂದೆ ವಾಸ್ತವವಾಗಿ ಇಡುವ ಕೆಲಸ ಮಾಡುತ್ತಲೇ ಇಲ್ಲ ನೀವು. ನೂರಾರು ವರ್ಷಗಳ ಕಾಲ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ದೂರ ಇಟ್ಟಿದ್ದ ಕಾರಣಕ್ಕೆ ಅಸಮಾನತೆ ಬೆಳೆದಿದೆ. ಇದನ್ನೆಲ್ಲಾ ಜನರಿಗೆ ಅರ್ಥ ಮಾಡಿಸಬೇಕಿದೆ ಎಂದರು.

ಪತ್ರಕರ್ತರು ಮೌಢ್ಯವನ್ನು ಬೆಂಬಲಿಸಬಾರದು. ಬಸವಣ್ಣನವರು 12 ನೇ ಶತಮಾನದಲ್ಲೇ ಮೌಢ್ಯದ ವಿರುದ್ಧ ಚಳವಳಿ ನಡೆಸಿದರು. ಆದರೆ ಇವತ್ತಿನ ಪತ್ರಕರ್ತರು ಮೌಡ್ಯದ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸವನ್ನೇ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಅನುಕೂಲ ಎನ್ನುವುದನ್ನು ಯೋಚಿಸಿ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರ ಕೆ.ವಿ.ಪ್ರಭಾಕರ್, ಶಾಸಕ ಹರೀಶ್ ಗೌಡ, ವಿಧಾನ‌ ಪರಿಷತ್ ಸದಸ್ಯರಾದ ಶಿವಕುಮಾರ್, ಅಸೋಸಿಯೇಷನ್ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Key words: Journalists, sensational news, society, CM, Siddaramaiah, Mysore