ಮೈಸೂರು ಅಕ್ಟೋಬರ್,18,2025 (www.justkannada.in): ನಮ್ಮ ನಾಡಿನ ಜೀವನದಿ, ಸಕಲ ಜೀವರಾಶಿಗಳಿಗೂ “ತಾಯಿ” ಸ್ವರೂಪಳಾದ ಕಾವೇರಿ ಮಾತೆಯ ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ಧನ್ಯತಾ ಭಾವ ಮೂಡಿಸಿತು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡ ನಂತರ ಮಾತನಾಡಿರುವ ಸಂಸದ ಯದುವೀರ್, ಇದೊಂದು ಅಪೂರ್ವ ಕ್ಷಣ ಮತ್ತು ಕಾವೇರಿ ಮಾತೆಯು ತೀರ್ಥ ಸ್ವರೂಪದಲ್ಲಿ ಉಕ್ಕುತ್ತಿದ್ದಂತೆ ಧಾರ್ಮಿಕ ಭಾವನೆಗಳೂ ಉಕ್ಕುತ್ತವೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ನಮ್ಮ ಕೊಡಗು ಜನರು ಹಾಗೂ ನಮ್ಮ ನಾಯಕರೊಂದಿಗೆ ಭಾಗಮಂಡಲದಿಂದ ತಲಕಾವೇರಿವರೆಗೆ ಪಾದಯಾತ್ರೆಯಲ್ಲಿ ಬಂದಿದ್ದು ನಿಜಕ್ಕೂ ಹೆಮ್ಮೆ ಎನಿಸಿತು. ಇದೊಂದು ಅಪೂರ್ವ ಅವಕಾಶವಾಗಿತ್ತು ಎಂದು ಸಂಸದರು ವಿವರಿಸಿದ್ದಾರೆ.
ಕಾವೇರಿ ಮಾತೆ ಸಮೃದ್ಧತೆಯಿಂದ ಕೂಡಿದ್ದರೆ ನಾಡು ಸಮೃದ್ಧವಾಗಿರುತ್ತದೆ. ನಾಡಿನಲ್ಲಿ ಶಾಂತಿ, ನೆಮ್ಮದಿ, ಸುಭಿಕ್ಷೆ ತುಂಬಿರಲಿ ಇದೇ ಸಂದರ್ಭದಲ್ಲಿ ಮನಸಾರೆ ಪ್ರಾರ್ಥಿಸಿದ್ದೇನೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
ಕೊಡಗು ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಮಡಿಕೇರಿ ನಗರ ಸಭಾ ಉಪಾಧ್ಯಕ್ಷರು, ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯ ದರ್ಶಿ ಮಹೇಶ್ ಜೈನಿ, ಜಿಲ್ಲಾ ವಾಕ್ತರ ತಲೂರ್ ಕಿಶೋರ್ ಕುಮಾರ್, ಸತೀಶ್ ಜೋಯಪ್ಪ, ಯಮುನಾ ಚಂಗಪ್ಪ, ಪಂಚಾಯತ್ ಅಧ್ಯಕ್ಷ ಕಾಳನ ರವಿ, ರಾಕೇಶ್ ಶರತ್ ಸೇರಿದಂತೆ ಪಕ್ಷದ ಕಾರ್ಯಕರ್ತರು, ಸಾವಿರಾರು ಭಕ್ತರು ಸಂಸದರ ಜೊತೆಯಲ್ಲಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
Key words: Kaveri Tirthodbhava, Kodagu, MP, Yaduveer