ಬೆಂಗಳೂರು,ಸೆಪ್ಟಂಬರ್,16,2025 (www.justkannada.in): ಬೆಂಗಳೂರು ನಗರದ ಕೆಜಿ ರಸ್ತೆಯಲ್ಲಿರುವ ಸರ್ ಎಂವಿ ಆಡಿಟೋರಿಯಂನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಆಯೋಜಿಸಿದ್ದ “ಸಂಸ್ಥಾಪಕರ ದಿನಾಚರಣೆ” ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಅವರಿಗೆ 2025ನೇ ಸಾಲಿನ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಮೆಮೊರಿಯಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಸದ ಡಾ.ಸಿ.ಎನ್ ಮಂಜುನಾಥ್ ಅವರು, ಇಂಜಿನಿಯರ್ ದಿನದಂದು ನಾವು ಮೋಕ್ಷಗುಂಡ ಎಂ. ವಿಶ್ವೇಶ್ವರಯ್ಯರನ್ನು ನೆನಪಿಸಿಕೊಳ್ಳಬೇಕು. ಅವರು ಕೇವಲ ಅಸಾಮಾನ್ಯ ಎಂಜಿನಿಯರ್ ಮಾತ್ರವಲ್ಲ, ದೂರದೃಷ್ಟಿಯ ಸ್ಟೇಟ್ಸ್ ಮ್ಯಾನ್ ದೃಷ್ಟಿಯುತ ಆಡಳಿತಗಾರ ಕೂಡ ಹೌದು, ಇಂದು ಭಾರತಕ್ಕೆ ಕೇವಲ ಪದವಿಗಳ ಅಗತ್ಯವಿಲ್ಲ ನಾಯಕರ ಅಗತ್ಯವಿದೆ. ತಾಂತ್ರಿಕ ಜ್ಞಾನವನ್ನು ನೈತಿಕ ಹೊಣೆಗಾರಿಕೆ, ಸ್ವಭಾವ ಮತ್ತು ರಾಷ್ಟ್ರ ನಿರ್ಮಾಣದ ಆತ್ಮಸ್ಫೂರ್ತಿಯೊಂದಿಗೆ ಸಂಯೋಜಿಸುವ ಜನರ ಅಗತ್ಯವಿದೆ. ದೇಶದಲ್ಲಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಅನ್ನು ಕೈಗಾರಿಕಾ ಬೆಳವಣಿಗೆಗೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯ, ನೀರಿನ ಸುರಕ್ಷತೆ ಮತ್ತು ಪರಿಸರ ಸುಸ್ಥಿರತೆಗೆ ಬಳಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು.
“ಶುದ್ಧ ಗಾಳಿ, ಶುದ್ಧ ನೀರು, ಕಲಬೆರಕೆಯಿಲ್ಲದ ಆಹಾರ ಮತ್ತು ಶುದ್ಧ ಮನಸ್ಸು ಇವುಗಳೇ ಆರೋಗ್ಯದ ನಿಜವಾದ ಮೂಲಾಧಾರಗಳು. ಶಸ್ತ್ರಚಿಕಿತ್ಸೆಯಲ್ಲಿ ರೊಬೋಟಿಕ್ಸ್ ಹಾಗೂ ವೈದ್ಯಕೀಯ ತಂತ್ರಜ್ಞಾನ ಪ್ರಗತಿಗಳು ರೋಗಿಗಳಿಗೆ ಚಿಕಿತ್ಸೆ ನೀಡಬಹುದು, ಆದರೆ ರೋಗವನ್ನು ತಡೆಗಟ್ಟಲು ಉತ್ತಮ ನಗರ ಯೋಜನೆ, ಮಾಲಿನ್ಯ ನಿಯಂತ್ರಣ ಮತ್ತು ಸುಸ್ಥಿರ ಎಂಜಿನಿಯರಿಂಗ್ ಅಗತ್ಯವಿದೆ” ಎಂದರು.
ಭಾರತದಲ್ಲಿ ಪ್ರತಿವರ್ಷ ಧೂಮಪಾನದಿಂದ 14 ಲಕ್ಷ ಜನರು ಮತ್ತು ವಾಯು ಮಾಲಿನ್ಯದಿಂದ 22 ಲಕ್ಷ ಜನರು ಸಾವನ್ನಪ್ಪುತ್ತಿರುವ ಆತಂಕಕಾರಿ ಅಂಕಿ ಅಂಶಗಳನ್ನು ಹಂಚಿಕೊಂಡ ಅವರು, “ಈ ಎರಡು ಅಂಶಗಳು ನಮ್ಮ ಇಡೀ ಆರೋಗ್ಯ ವ್ಯವಸ್ಥೆಯ ಪ್ರಯತ್ನಗಳನ್ನು ನಿರರ್ಥಕಗೊಳಿಸುತ್ತಿವೆ” ಎಂದು ಎಚ್ಚರಿಸಿದರು.
ಸರ್ ಎಂ. ವಿಶ್ವೇಶ್ವರಯ್ಯ ಅವರ ಪರಂಪರೆಯನ್ನು ಉಲ್ಲೇಖಿಸಿ, ಎಂಜಿನಿಯರ್ ಗಳನ್ನು “ಜೀವನವನ್ನು ಪರಿವರ್ತಿಸುವ ಸೃಷ್ಟಿಕರ್ತರು” ಎಂದು ಕರೆದರು. ಒಳಚರಂಡಿ ಸಂಸ್ಕರಣೆ, ಅಂತರ್ಜಲ ಮಾಲಿನ್ಯ ನಿವಾರಣೆ ಮತ್ತು ಕೆರೆಗಳ ಪುನರುಜ್ಜೀವನದಲ್ಲಿ ಮುಂದಾಳತ್ವ ವಹಿಸುವಂತೆ ಮಂಜುನಾಥ್ ಅವರು ಮನವಿ ಮಾಡಿದರು.
“ನೀವು ಒಳಚರಂಡಿ ನಿರ್ಮಿಸದ ಹೊರತು ರಸ್ತೆಗಳನ್ನು ಮಾಡಬೇಡಿ. ಒಳಚರಂಡಿ ನೀರನ್ನು ಸಂಸ್ಕರಿಸದೇ ಬಿಡುವುದರಿಂದ, ಬೆಂಗಳೂರಿನ ಕೆರೆಗಳು ಮತ್ತು ಅಂತರ್ಜಲವು ವಿಷಪೂರಿತವಾಗುತ್ತಲೇ ಇರುತ್ತವೆ” ಎಂದು ಎಚ್ಚರಿಸಿದರು.
ಸರ್ ಎಂ. ವಿಶ್ವೇಶ್ವರಯ್ಯ ಅವರ ಐದು ತತ್ವಗಳಾದ ಸಮಗ್ರತೆ, ಬುದ್ಧಿವಂತಿಕೆ, ಏಕೀಕರಣ, ವಿಕಸನ ಮತ್ತು ನಾವೀನ್ಯತೆ ಎಂಜಿನಿಯರಿಂಗ್ ಮತ್ತು ಆರೋಗ್ಯ ರಕ್ಷಣೆಯ ಎರಡಕ್ಕೂ ಕಾಲಾತೀತ ತತ್ವಗಳಾಗಿವೆ. ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಅನಗತ್ಯ ಹಸ್ತಕ್ಷೇಪವಿಲ್ಲದಿರುವುದು ಬೆಳವಣಿಗೆಗೆ ಉತ್ತಮ ಪ್ರೋತ್ಸಾಹ ಎಂದು ಹೇಳಿದರು.
“ಸರ್ ಎಂ. ವಿಶ್ವೇಶ್ವರಯ್ಯನಂಥ ನಾಯಕರಿಂದ ಸ್ಫೂರ್ತಿ ಬರುತ್ತದೆ, ಆದರೆ ದೃಢನಿಶ್ಚಯ ನಮ್ಮ ಜವಾಬ್ದಾರಿ. ಎಂಜಿನಿಯರ್ ಗಳು ಮತ್ತು ಆರೋಗ್ಯ ವೃತ್ತಿಪರರು ಮೂಲಸೌಕರ್ಯವನ್ನು ಮಾತ್ರವಲ್ಲದೆ, ಆರೋಗ್ಯಕರ, ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಭಾರತವನ್ನು ನಿರ್ಮಿಸಲು ಕೈಜೋಡಿಸಬೇಕು” ಎಂದು ಸಂಸದ ಮಂಜುನಾಥ್ ಮನವಿ ಮಾಡಿದರು.
ಇದಲ್ಲದೆ, ಭಾರತದಲ್ಲಿ ಶೇ.60 ರಷ್ಟು ಸಾವುಗಳು ಜೀವನಶೈಲಿ ಸಂಬಂಧಿತ ಕಾಯಿಲೆಗಳಾದ ಹೃದಯಾಘಾತ, ಮಧುಮೇಹ, ಪಾರ್ಶ್ವವಾಯು, ಕ್ಯಾನ್ಸರ್ ಹಾಗೂ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಮತ್ತು ಒಂಟಿತನಕ್ಕೆ ಸಂಬಂಧಿಸಿದ ಮಾನಸಿಕ ಅಸ್ವಸ್ಥತೆಗಳಿಂದ ಉಂಟಾಗುತ್ತಿವೆ ಎಂದು ಎಚ್ಚರಿಸಿದರು. “ಸದ್ದಿಲ್ಲದೆ ಕಾಡುತ್ತಿರುವ ಈ ಸಾಂಕ್ರಾಮಿಕ ರೋಗವನ್ನು ಪರಿಹರಿಸದೆ ಯಾವುದೇ ರಾಷ್ಟ್ರವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ” ಎಂದರು.
ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, FKCCI ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, FKCCI ಚುನಾಯಿತ ಅಧ್ಯಕ್ಷೆ ಉಮಾ ರೆಡ್ಡಿ ಹಾಗೂ ಅನೇಕ FKCCI ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.
Key words:. Bharat Ratna, Sir M. Visvesvaraya Memorial Award, MP, Dr. C.N Manjunath