ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ- ಸಚಿವ ಅಶ್ವತ್ ನಾರಾಯಣ್.

ಬೆಂಗಳೂರು,ಆಗಸ್ಟ್,25,2022(www.justkannada.in):  ಇನ್ನು ಮೂರು ವರ್ಷಗಳಲ್ಲಿ ದೇಶದ ಡಿಜಿಟಲ್ ಆರ್ಥಿಕತೆಯು  ಒಂದು ಟ್ರಿಲಿಯನ್ ಡಾಲರ್ ತಲುಪಲಿದೆ. ಇದಕ್ಕೆ ಕರ್ನಾಟಕವು 300 ಶತಕೋಟಿ ಡಾಲರ್ ಕಾಣಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಆರಂಭವಾದ ಮೂರು ದಿನಗಳ 18ನೇ ವರ್ಷದ ಸಿಐಐ ಇನ್ನೋವರ್ಜ್ ಸಮಾವೇಶದಲ್ಲಿ ಸಚಿವ ಅಶ್ವಥ್ ನಾರಾಯಣ್ ಅವರು ಮಾತನಾಡಿದರು.

ರಾಜ್ಯವು ನಾವೀನ್ಯತೆ ಮತ್ತು ಸಂಶೋಧನೆಗಳಿಗೆ ಭಾರೀ ಮಹತ್ವ ನೀಡಿದ್ದು, ಅಗತ್ಯ ನೀತಿಗಳನ್ನು ಜಾರಿಗೆ ತಂದಿದೆ. ನವೋದ್ಯಮಗಳನ್ನು ಪ್ರೋತ್ಸಾಹಿಸಲು ಬೀಜನಿಧಿಯನ್ನು ಕೊಡುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ತಿಳಿಸಿದರು.ಕ್ವಾಂಟಂ ಮತ್ತು ಕೃತಕ ಬುದ್ಧಿಮತ್ತೆಯಂಥ ಅತ್ಯಾಧುನಿಕ ತಂತ್ರಜ್ಞಾನಗಳು ಇಂದು ಜಗತ್ತನ್ನು ಆಳುತ್ತಿವೆ. ಇದನ್ನು ಗಮನಿಸಿಯೇ ಸರಕಾರವು ‘ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ‌ ನೀತಿ’ಯನ್ನು ತಂದಿದೆ ಎಂದು ಅವರು ನುಡಿದರು.

ಉನ್ನತ ಶಿಕ್ಷಣ ಕ್ಷೇತ್ರವನ್ನು ಜಾಗತಿಕ ಗುಣಮಟ್ಟದೊಂದಿಗೆ ಉದ್ಯಮಗಳ ಜತೆ ಬೆಸೆಯಲಾಗಿದೆ. ಇದರ ಸುಧಾರಣೆಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿ ಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

ಪ್ರತಿ  ಜಿಲ್ಲೆಯಲ್ಲೂ ವಿಶ್ವ ದರ್ಜೆಯ ಎಂಜಿನಿಯರಿಂಗ್ ಕಾಲೇಜು ಇರಬೇಕೆಂದು ಸೂಪರ್-30 ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಉದ್ಯಮ ವಲಯದ ನಿರೀಕ್ಷೆ ಅಪಾರವಾಗಿದೆ. ಸರಕಾರವು ಇದಕ್ಕೆ ತಕ್ಕಂತೆ ಸಮರೋಪಾದಿಯಲ್ಲಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇದು ಇನ್ನೂ ತೀವ್ರ ಸ್ವರೂಪದಲ್ಲಿ ನಡೆಯಬೇಕು ಎಂದು ಅಶ್ವತ್ಥ ನಾರಾಯಣ್  ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಸಿಐಐನ ಕಮಲ್ ಬಾಲಿ ಮುಂತಾದವರು ಇದ್ದರು.

Key words: 300 billion –dollar- contribution – state – digital economy