ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 98 ಅಡಿಗೆ ಕುಸಿತ: ರೈತರ ಹೋರಾಟ ತೀವ್ರ.

ಮಂಡ್ಯ,ಸೆಪ್ಟಂಬರ್,8,2023(www.justkannada.in): ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ  ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಿದ ಹಿನ್ನೆಲೆ  ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ 98 ಅಡಿಗೆ ಕುಸಿತವಾಗಿದ್ದು ರೈತರಲ್ಲಿ ಆತಂಕ ಶುರುವಾಗಿದೆ.

ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ 12 ಟಿಎಂಸಿ ನೀರು ಖಾಲಿಯಾಗಿದ್ದು,  ಜಲಾಶಯದ ಹಿನ್ನೀರು ಪ್ರದೇಶ ಬಹುತೇಕ ಬರಡು ಭೂಮಿಯಂತಾಗಿದೆ.  ತಮಿಳುನಾಡಿಗೆ ಮತ್ತಷ್ಟು ನೀರು ಹರಿಸಿದರೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಪರಿಸ್ಥಿತಿ ತಲೆದೂರಲಿದೆ. ಬೆಳೆಗೆ ನೀರಿಲ್ಲದೆ ಆತಂಕದಲ್ಲಿರುವ ರೈತರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ರೈತರ ಹೋರಾಟ ತೀವ್ರ: ಬೆಸರಗರಹಳ್ಳಿ ಸಂಪೂರ್ಣ ಬಂದ್​

ತಮಿಳುನಾಡಿಗೆ ಕೆಆರ್​​ಎಸ್​  ಜಲಾಶಯದಿಂದ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಸರಗರಹಳ್ಳಿ ಸಂಪೂರ್ಣ ಬಂದ್​ ಆಗಿದೆ.   ಬೆಸರಗರಹಳ್ಳಿ ಗ್ರಾಮ ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಂಗಡಿ ಮುಂಗಟ್ಟುಗಳು ಸಹ ಬಂದ್ ಆಗಿದ್ದವು. ರೈತ ಸಂಘ ಬಂದ್ ಕರೆಗೆ ವರ್ತಕರು ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ.

Key words: KRS Reservoir- water -level – 98 feet-Farmers-protest