Wednesday, August 12, 2026

BDA Apartments

Home Front Page ಲಾರಿ ಹಮಾಲಿಗಳಿಗೆ ಮಾಮೂಲಿ ನೀಡುವುದಿಲ್ಲ, ವರ್ತಕರೇ ಹಣ ನೀಡಬೇಕೆಂದು ಒತ್ತಾಯಿಸಿ ಲಾರಿ ಮಾಲೀಕರಿಂದ ಬೃಹತ್ ಪ್ರತಿಭಟನಾ...

ಲಾರಿ ಹಮಾಲಿಗಳಿಗೆ ಮಾಮೂಲಿ ನೀಡುವುದಿಲ್ಲ, ವರ್ತಕರೇ ಹಣ ನೀಡಬೇಕೆಂದು ಒತ್ತಾಯಿಸಿ ಲಾರಿ ಮಾಲೀಕರಿಂದ ಬೃಹತ್ ಪ್ರತಿಭಟನಾ ಜಾಥಾ..

ಬೆಂಗಳೂರು,ಆಗಸ್ಟ್,12,2021(www.justkannnada.in):  ಹಮಾಲಿಗಳು ಲಾರಿಯಿಂದ ಸರಕುಗಳನ್ನು ತುಂಬುವ ಮತ್ತು ಇಳಿಸುವ, ಲೋಡಿಗೆ ಅನ್ ಲೋಡಿಂಗ್ ವಾರ್ನಿ ಮಾಮೂಲಿ ಹೆಸರಿನಲ್ಲಿ ಲಾರಿ ಮಾಲೀಕರಿಗೆ ಆಗುತ್ತಿರುವ ಅನ್ಯಾಯ ಹಾಗೂ ಕಿರುಕುಳದ ಬಗ್ಗೆ ಲಾರಿ ಮಾಲೀಕರು ಇಂದು ಯಶವಂತಪುರ ಗೋರುಗುಂಟೆ ಪಾಳ್ಯ ಮುಖ್ಯ ರಸ್ತೆ, ಯಶವಂತಪುರ ಲಾರಿ ಮಾಲೀಕರ ಸಂಘದಿಂದ ಹೊರಟು “ನಿಮ್ಮ ಸರಕಿಗೆ ನಿಮ್ಮ ಹಮಾಲಿ ಮಾಮೂಲಿ” ಫಲಕ ಹಿಡಿದು ಯಶವಂತಪುರ ಎಂಪಿಎಂಸಿ ಯವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಎಂಪಿಎಂಸಿ ಯಾರ್ಡ್ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು.

ಕೈಗಾರಿಕೆಗಳು ಹಾಗೂ ವರ್ತಕರು ತಮ್ಮ ಸರಕುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಾಣಿಕೆ ಮಾಡಲು ಸಾಗಾಣಿಕೆ ಮಾಡುವ ಲಾರಿಗಳನ್ನು ಬಾಡಿಗೆಗೆ ಪಡೆದುಕೊಳ್ಳುತ್ತಾರೆ. ಆದರೆ ಅವರ ಸರಕನ್ನು ಲಾರಿಗಳಲ್ಲಿ ಲೋಡಿಂಗ್ ಹಾಗೂ ಅನ್ ಲೋಡಿಂಗೆ ವಾರ್ನಿ ಮಾಮೂಲಿ ಎಂದು ಹಮಾಲಿಗಳು ಲಾರಿಯವರಿಂದ ಹಣ ವಸೂಲಿ ಮಾಡುತ್ತಾರೆ ಇದರಿಂದ ಕೋಟ್ಯಾಂತರ ರೂಪಾಯಿ ಮಾಲೀಕರಿಗೆ ಹೊರೆಯಾಗುತ್ತಿದೆ. ಈ ಹಿಂದೆ ಇದ್ದ ಪದ್ಧತಿಯಂತೆಯೇ ಲೋಡಿಂಗ್ ಹಾಗೂ ಅನ್ ಲೋಡಿಂಗೆ ಹಣವನ್ನು ವರ್ತಕರೇ ನೀಡಬೇಕೆಂದು ಒತ್ತಾಯಿಸಿ ಬೃಹತ್ ಜಾಥಾ ನಡೆಸಿದರು.

ದೇಶದ ಹರಿಯಾಣ, ಪಂಜಾಬ್, ಈಶಾನ್ಯ ರಾಜ್ಯಗಳಲ್ಲಿ ಆಗಸ್ಟ್ 1 ರಿಂದ ಈಗಾಗಲೇ ‘ಜಿಸ್ಕಾ ಮಾಲ್ – ಉಸ್ಕಾ ಹಮಾಲ್’ ಈಗಾಗಲೇ ಜಾರಿಯಾಗಿದ್ದು ಯಾವುದೇ ಲಾರಿ ಮಾಲೀಕರು ಹಮಾಲಿಗಳಿಗೆ ಹಣ ಕೊಡುವುದನ್ನು ನಿಲ್ಲಿಸಿದ್ದಾರೆ. ಇದೀಗ ಕರ್ನಾಟಕದಲ್ಲಿಯೂ ಸಹ ಹೋರಾಟ ಮಾಡಿ ಆಗಸ್ಟ್ 16 ರಿಂದ ಯಾವುದೇ ಹಮಾಲಿಗೆ ಮಾಮೂಲಿ ಹಣ ಕೊಡದಿರಲು ನಿರ್ಧರಿಸಿದ್ದೇವೆ. ಈ ಸಂಬಂಧ ರಾಜ್ಯದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಮಾಡುತ್ತಿದ್ದೇವೆ ಎಂದು ಯಶವಂತಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮೋಹನ್ ಕೆ. ತಿಳಿಸಿದ್ದಾರೆ.

ಲಾರಿ ಮಾಲೀಕರು ಸಂಘದ ಬೈಲಾ ನಿಯಮ ಪ್ರಕಾರ ಯಾವುದೇ ಲಾರಿ ಮಾಲೀಕರು ಹಮಾಲಿ ಕೂಲಿ ನೀಡುವ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಈ ಹಿಂದೆ ಲಾರಿ ಮಾಲೀಕರು ಹಮಾಲಿಗಳಿಗೆ 10 ರಿಂದ 20 ರೂಪಾಯಿ ಭಕ್ಷಿಸು ಕೊಡುತ್ತಿದ್ದೆವು. ಇದೀಗ ಅದು 2000 ರಿಂದ 3000 ಸಾವಿರ ರೂಪಾಯಿವರೆಗೆ ಬಂದು ನಿಂತು ಲಾರಿ ಮಾಲೀಕರು ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಬೇಕಾದ ಸಮಸ್ಯೆ ಎದುರಾಗಿದೆ. ತಿಂಗಳಿಗೆ ಒಂದು ಲಾರಿಗೆ 10 ರಿಂದ 15 ಸಾವಿರ ರೂಪಾಯಿ ಹೆಚ್ಚು ಹೊರೆಯಾಗಲಿದೆ. ಪೋಲಾಗುವ ಒಟ್ಟಾರೆ ಕೋಟ್ಯಾಂತರ ರೂಪಾಯಿ ಲಾರಿ ಮಾಲೀಕರು ಹೆಚ್ಚುವರಿ ಭರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಪೆಡರೇಶನ್ ಆಪ್ ಕರ್ನಾಟಕ ಲಾರಿ ಮಾಲೀಕರ ಅಸೋಸಿಯೇಷನ್ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲ ಸ್ವಾಮಿ ಹೇಳಿದ್ದಾರೆ.

ಈ ಪ್ರತಿಭಟನಾ ಜಾಥಾದಲ್ಲಿ ಯಶವಂತಪುರ ಲಾರಿ ಮಾಲೀಕರ ಸಂಘ, ಕೆಜಿಟಿಎ, ಎಪಿಎಂಸಿ, ಲಾರಿ ಅಸೋಸಿಯೇಷನ್, ಬಿಸಿಎಲ್‌ಟಿಎ, ಕೆಜಿಎಫ್, ಎಫ್‌ಜಿಓಎ, ಕೆಎಸ್‌ಟಿಎ, ಬೆಂಗಳೂರು ಜಿಲ್ಲೆಯ ಎಲ್ಲಾ ಲಾರಿ ಮಾಲೀಕರ ಅಸೋಸಿಯೇಷನ್ ಇತರೆ ಸಂಘಗಳು ಸೇರಿದಂತೆ ಸುಮಾರು 300ಕ್ಕೂ ಅಧಿಕ ಲಾರಿ ಮಾಲೀಕರು ಭಾಗವಹಿಸಿದ್ದರು.

key words: Large -protest-lorry owners -demanding -money -bangalore