ಮಲ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ- ಜಿ.ಪಂ. CEO ಸೂಚನೆ

ಮಂಡ್ಯ,ಜೂನ್,27,2025 (www.justkannada.in): ಶೌಚಾಲಯದ ಗುಂಡಿಗಳನ್ನು ಯಾಂತ್ರೀಕೃತ ವಿಧಾನದ ಮೂಲಕ ಸ್ವಚ್ಛಗೊಳಿಸಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೆ ಮಾಡುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮಲ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೆ.ಆರ್.ಐ.ಡಿ.ಎಲ್ ನ ಕಾರ್ಯಪಾಲಕ ಅಭಿಯಂತರರಿಗೆ  ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ನಂದಿನಿ ಕೆ.ಆರ್ ಅವರು ಸೂಚನೆ ನೀಡಿದರು.

ಪಾಂಡವಪುರ ತಾಲ್ಲೂಕಿನ ಕೆ.ಬೆಟ್ಟಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿಯನ್ನು ವೀಕ್ಷಿಸಿದ ಅವರು,  ಮಲ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದಲ್ಲಿ ಅದು ಪರಿಸರ ಮತ್ತು ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಆದ್ದರಿಂದ, ವೈಜ್ಞಾನಿಕವಾಗಿ ಮಲ ತ್ಯಾಜ್ಯವನ್ನು ನಿರ್ವಹಣೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಸಕ್ಕಿಂಗ್ ಯಂತ್ರವನ್ನು ಮರುಚಾಲನೆಗೊಳಿಸಲು ಸೂಚನೆ

ಪಾಂಡವಪುರ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಈ ಹಿಂದೆ 13ನೇ ಹಣಕಾಸು ಯೋಜನೆಯಡಿ ಶೌಚಾಲಯದ ಗುಂಡಿಗಳನ್ನು ಯಾಂತ್ರೀಕೃತ ವಿಧಾನದ ಮೂಲಕ ಸ್ವಚ್ಛಗೊಳಿಸಲು ಸಕ್ಕಿಂಗ್ ಯಂತ್ರ ಖರೀದಿಸಲಾಗಿದ್ದು, ಸದರಿ ಯಂತ್ರಕ್ಕೆ ವಾಹನ ಚಾಲಕರು ಮತ್ತು ಸಹಾಯಕರಿಲ್ಲದೇ ಚಾಲನೆಯಲ್ಲಿಲ್ಲ. ಆದ್ದರಿಂದ ಸದರಿ ಸಕ್ಕಿಂಗ್ ಯಂತ್ರವನ್ನು ಆಸಕ್ತ ಮತ್ತು ಸಶಕ್ತ ಸ್ವ-ಸಹಾಯ ಸಂಘದ ಮೂಲಕ ನಿರ್ವಹಣೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಉದ್ದಿಮೆ ಮಾದರಿಯಲ್ಲಿ ಸ್ವ-ಸಹಾಯ ಸಂಘ ಅಥವಾ ಜಿ.ಪಿ.ಎಲ್.ಎಫ್ ಮೂಲಕ ಕರಾರು ಒಪ್ಪಂದ ಮಾಡಿಕೊಂಡು ಮಲ ತ್ಯಾಜ್ಯ ನಿರ್ವಹಣಾ ಘಟಕ ಮತ್ತು ಸಕ್ಕಿಂಗ್ ಯಂತ್ರವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಕಾಂಪೌಂಡ್ ನಿರ್ಮಾಣ  ತ್ಯಾಜ್ಯ ನಿರ್ವಹಣೆಗಾಗಿ ಕಂದಾಯ ಇಲಾಖೆಯಿಂದ ಮಂಜೂರಾಗಿರುವ ಒಂದು ಎಕರೆ ಜಮೀನಿಗೆ ಗ್ರಾ.ಪಂ. ಲಭ್ಯ ಅನುದಾನದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಒಣ ತ್ಯಾಜ್ಯವನ್ನು ಸಂಗ್ರಹಿಸಿ, ಕೇಂದ್ರೀಕೃತ ಮಾದರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಾಣೆ ಮಾಡಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಅಗತ್ಯವಿರುವ ಕ್ರಮಗಳನ್ನು ಆಯಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತೆಗೆದುಕೊಂಡು ತಗಲುವ ವೆಚ್ಚದ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತ್ ಗೆ ಸಲ್ಲಿಸಲು ಸೂಚಿಸಿದರು.

ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿನ ಸ್ವಚ್ಛ ವಾಹಿನಿಗಳ ವಿಮೆಯನ್ನು ನವೀಕರಣಗೊಳಿಸಬೇಕು, ಸ್ವಚ್ಛ ವಾಹಿನಿಯ ಚಾಲಕಿಯರಿಗೆ ಡ್ರೈವಿಂಗ್ ಲೈಸೆನ್ಸ್ ವಿತರಣೆ ಮಾಡಬೇಕು, ಜಿ.ಪಿ.ಎಲ್.ಎಫ್.ಗಳ ಕರಾರು ಒಪ್ಪಂದವನ್ನು ನವೀಕರಣಗೊಳಿಸಬೇಕು ಹಾಗೂ ವಾಹನಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿ, ಕೆ.ಆರ್.ಐ.ಡಿ.ಎಲ್. ಕಾರ್ಯಪಾಲಕ ಅಭಿಯಂತರ ಸೋಮಶೇಖರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀಣಾ, ಪಿಡಿಓ ಪೂರ್ಣಿಮಾ ಸೇರಿದಂತೆ ಇತರರು ಹಾಜರಿದ್ದರು.vtu

Key words: Complete , work, sewage, plant, Mandya, ZP, CEO