ಮೈಸೂರು,ಜೂನ್,19,2025 (www.justkannada.in): ಯೋಗಕ್ಕೆ ಯಾವುದೇ ಜಾತಿ-ಧರ್ಮದ ಚೌಕಟ್ಟಿಲ್ಲ ಎಂದು ಭಾರತದ ವಾಯು ಪಡೆಯ ನಿವೃತ್ತ ಪೈಲಟ್ ಸ್ಕ್ವಾಡ್ರನ್ ಲೀಡರ್ ಪರಿಧಿ ಸಿಂಗ್ ಕಾರ್ತಿಕ್ ಹೇಳಿದರು.
ನಗರದ ಮೇಟಗಳ್ಳಿಯ ಕೆಆರ್ ಎಸ್ ರಸ್ತೆಯಲ್ಲಿರುವ ಜಿಎಸ್ ಎಸ್ ಎಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಿಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ವೈಜ್ಞಾನಿಕ ಪ್ರಾಣಾಯಾಮ ಫೌಂಡೇಷನ್ ಟ್ರಸ್ಟ್, ಜಿಎಸ್ ಎಸ್ ಎಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಿಳಾ ಮಹಾವಿದ್ಯಾಲಯ, ಎಟಿಎಂಇ ಕಾಲೇಜ್ ಎಂಜಿನಿಯರಿಂಗ್, ಬೆಂಗಳೂರಿನ ಆರ್. ವಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಕರ್ನಾಟಕದ ಭಾರತೀಯ ಯೋಗ ಅಸೋಸಿಯೇಷನ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಪ್ರಾಣೋತ್ಸವ-2025 ವಿಷಯದ ಕುರಿತು ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಯೋಗವು ಯಾವುದೇ ಜಾತಿ, ಧರ್ಮ, ಮತ ಪಂಥಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿದೆ. ಯೋಗದಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಲಿದೆ. ಯೋಗವು ವಿಶ್ವ ಆರೋಗ್ಯಕ್ಕಾಗಿ ಇದೆ ಎನ್ನುವ ನಿಟ್ಟಿನಲ್ಲಿ ಸಾಕಾರಗೊಂಡಿದೆ. ಯೋಗ ನಮ್ಮ ದೇಶದ ಆಸ್ತಿ, ಇದನ್ನು ಪ್ರಪಂಚಕ್ಕೆ ಪಸರಿಸಬೇಕು. ಆರೋಗ್ಯದ ದೃಷ್ಟಿಯಿಂದ ಯೋಗಾಸನ ಒಳ್ಳೆಯದು. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಮಾಡುವುದು ಸಹಕಾರಿಯಾಗಲಿದೆ ಎಂದರು.
ಭಾರತೀಯ ಯೋಗ ಸಂಘಟನೆ ಕಾರ್ಯದರ್ಶಿ ಡಾ.ಎ. ಸುಬ್ರಹ್ಮಣ್ಯನ್ ಮಾತನಾಡಿ, ‘‘ಯೋಗದ ನಿಯಮಗಳನ್ನು ಪಾಲಿಸುವಲ್ಲಿ ಭಾರತ ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. ಯೋಗ ಮಾಡುವುದರಿಂದ ನಮ್ಮ ದೇಹದ ನಿಯಂತ್ರಣ, ಅಂಗಾಂಗಗಳ ಪರಿಪೂರ್ಣ ಮತ್ತು ಕ್ರಮಬದ್ಧವಾದ ಕಾರ್ಯ ಚಟುವಟಿಕೆ, ಮನಸ್ಸಿನ ಸಮತೋಲನ ಆರೋಗ್ಯದ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.
ಕ್ಯಾನ್ಸರ್ ಕೇರ್ ಇಂಡಿಯಾದ ನ್ಯೂರೋ ಸರ್ಜನ್ ಡಾ. ರಾಜಶೇಖರ್ರೆಡ್ಡಿ ಪೊರೆಡ್ಡಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಯೋಗದ ಮಹತ್ವ ಅರಿತು ಪಾಶ್ಚಿಮಾತ್ಯ ದೇಶಗಳು ಯೋಗದ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ. ‘ಯೋಗಕ್ಕೆ ಭಾರತದ ಕೊಡುಗೆ ಜತೆಗೆ ಮೈಸೂರು ಸಹ ಯೋಗದ ಭೂಪಟದಲ್ಲಿ ತನ್ನದೇ ಆದ ಛಾಪುವನ್ನು ಮೂಡಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ವೈಜ್ಞಾನಿಕ ಪ್ರಾಣಾಯಾಮ ಫೌಂಡೇಷನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಡಾ ದೇವಕಿ ಮಾಧವ್ ಮಾತನಾಡಿ, ಮೈಸೂರಿನಲ್ಲಿ ಯೋಗ ದಿನಾಚರಣೆಯನ್ನು ಪ್ರತಿ ವರ್ಷವೂ ಬಹಳ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಭಾರತದಲ್ಲಿ ಆಧುನಿಕ ಕಾಲದ ಯೋಗ ಮೈಸೂರಿನಿಂದ ಸೃಷ್ಟಿಯಾಗಿದೆ ಎಂದರೆ ತಪ್ಪಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಜಿಎಸ್ ಎಸ್ ಎಸ್ ಕಾಲೇಜಿನ ಪ್ರಾಚಾರ್ಯ ಡಾ.ಶಿವಕುಮಾರ್, ಯೋಗ ಗುರು ರಾಘವೇಂದ್ರ ಪೈ ಇದ್ದರು.
Key words: Yoga, no caste, religion, framework, Adhidhi Singh Karthik, Mysore